ಉಗಾಂಡ ಮಗು ದತ್ತು ಸ್ವೀಕಾರ ಕೇಸ್: ಭಾರತೀಯ ಮೂಲದ ದಂಪತಿ ನೆರವಿಗೆ ಧಾವಿಸಿದ ಹೈಕೋರ್ಟ್
ಬೆಂಗಳೂರು, ಮಾರ್ಚ್ 30: ಕೀನ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಯ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ.
ನ್ಯಾಯಾಲಯ ಉಂಗಾಡದ ಮಗುವನ್ನು ದತ್ತು ಪಡೆದಿರುವ ಅನಿವಾಸಿ ಭಾರತೀಯ ದಂಪತಿಗಳ ಮನವಿ ಪರಿಗಣಿಸಿ, ಆ ದತ್ತು ಕ್ರಮವನ್ನು ಅಧಿಕೃತಗೊಳಿಸುವಂತೆ ಕೇಂದ್ರೀಯ ದತ್ತು ಸ್ವೀಕಾರ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ರವಿಕುಮಾರ್ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.
''ಅರ್ಜಿದಾರರು ಭಾರತದ ಪ್ರಜೆಗಳು, ಹಾಗಾಗಿ ಸರ್ಕಾರ ಅವರ ನೆರವಿಗೆ ಧಾವಿಸಬೇಕು. ಅರ್ಜಿದಾರರು 2023ರ ಜೂ.8ರಂದು ಸಲ್ಲಿಸಿರುವ ಮನವಿ ಪರಿಗಣಿಸಿ ಆರು ವಾರಗಳಲ್ಲಿಎನ್ಒಸಿ ಪತ್ರವನ್ನು ವಿತರಿಸಬೇಕು, ಮಗು ದತ್ತಕ ಕಾನೂನು ಬದ್ಧಗೊಳಿಸಬೇಕು'' ಎಂದು ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಏನು..?
ಭಾರತೀಯ ಮೂಲದ ದಂಪತಿಗಳು 2011ರಿಂದ 2018ರವೆಗೆ ಉಗಾಂಡ ನಿವಾಸಿಗಳಾಗಿದ್ದರು. ನಂತರ 2019ರಲ್ಲಿಕೀನ್ಯಾಕ್ಕೆ ಸ್ಥಳಾಂತರಗೊಂಡರು. ಅವರು ಭಾರತೀಯ ಪೌರತ್ವ ತೊರೆಯದ ಕಾರಣ ಅವರು ಭಾರತೀಯ ಪಾಸ್ ಪೋರ್ಟ್ ಹೊಂದಿದ್ದರು. ಅವರು ಉಗಾಂಡದಲ್ಲಿದ್ದಾಗ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಿಯಮದಂತೆ ಅಲ್ಲಿ ತಮಗೆ ಹೊಂದುವಂತಹ ಮಗುವನ್ನು ದತ್ತು ಪಡೆಯಲು ಮುಂದಾದರು. 2014ರಲ್ಲಿ ಆ ದತ್ತು ಪ್ರಕ್ರಿಯೆ ನಡೆಯಿತು.
ಉಗಾಂಡ ಹೈಕೋರ್ಟ್, 2015ರಲ್ಲಿ ಮಗುವಿನ ಪೋಷಕತ್ವವನ್ನು ದಂಪತಿಗೆ ವರ್ಗಾಯಿಸಿತ್ತು. ದಂಪತಿ ಆ ದತ್ತು ಪ್ರಕ್ರಿಯೆಯನ್ನು ಭಾರತದಲ್ಲಿ ಅಧಿಕೃತ ಮಾಡಿಕೊಳ್ಳಲು ಬಯಸಿ, ಅದರಂತೆ ಸಿಎಆರ್ಎಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಧಿಕಾರ ಅವರ ಮನವಿಯನ್ನು ಅಂಗೀಕರಿಸಲಿಲ್ಲ, ಬದಲಿಗೆ ತಿರಸ್ಕರಿಸಲಿಲ್ಲ. ಪದೇ ಪದೇ ಮೇಲ್ ಮಾಡಿದರೂ ಉತ್ತರ ನೀಡಿರಲಿಲ್ಲ. ಹಾಗಾಗಿ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರು, ಅಂತರ್ ರಾಷ್ಟ್ರ ದತ್ತು ಪ್ರಕ್ರಿಯೆಗೆ 1995ರ ಒಪ್ಪಂದದಲ್ಲಿ ಮಾನ್ಯತೆ ಇದೆ. ಆದರೆ ಆ ಒಪ್ಪಂದಕ್ಕೆ ಉಗಾಂಡ ಸಹಿ ಹಾಕದ್ದರಿಂದ ಸಿಎಆರ್ಎ ನಿಯಮ ಮತ್ತು ಬಾಲ ನ್ಯಾಯ ಕಾಯಿದೆ ಭಾರತದಲ್ಲಿ ಮಗು ದತ್ತುವನ್ನು ಕಾನೂನು ಬದ್ಧಗೊಳಿಸಲಾಗದು. ಆದರೆ ಇಂತಹ ಸಂದರ್ಭಗಳಲ್ಲಿ ಭಾರತ ಸರ್ಕಾರ ನೆರವಿಗೆ ಧಾವಿಸಬಹುದು. ಅದರಂತೆ ಸರ್ಕಾರಕ್ಕೆ ಮಗು ದತ್ತು ಪ್ರಕ್ರಿಯೆಯನ್ನು ಅಧಿಕೃತಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದರು.
ಆದರೆ ಕೇಂದ್ರ ಸರ್ಕಾರ, ಅರ್ಜಿದಾರರ ಹಕ್ಕುಗಳನ್ನು ಮೊಟಕುಗೊಳಿಸಲು ಬಯಸುವುದಿಲ್ಲ. ಆದರೆ ಆ ದಂಪತಿಗೆ ನೆರವಿನ ಪತ್ರ ನೀಡಲಾಗುವುದು. ಇದು ದಂಪತಿಗೆ ಮಗುವನ್ನು ಕರೆದುಕೊಂಡು ದೇಶಕ್ಕೆ ಬರಲು ಮತ್ತು ಹೋಗಲು ಅನುಕೂಲವಾಗುತ್ತದೆ ಎಂದು ವಾದಿಸಿತ್ತು.
ಹೈಕೋರ್ಟ್ ಆದೇಶವೇನು?
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ''ಉಗಾಂಡ 1995ರ ಹೇಗ್ ಒಪ್ಪಂದಕ್ಕೆ ಸಹಿ ಹಾಕಿಲ್ಲದ ಕಾರಣ, ಕೇಂದ್ರ ಸರಕಾರ ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ(ಸಿಎಆರ್ಎ) ನಿಯಮ 2022 ಹಾಊ ಬಾಲ ನ್ಯಾಯ ಕಾಯಿದೆ (ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಅನ್ವಯ ದತ್ತು ಪಡೆದಿರುವುದನ್ನು ಕಾನೂನು ಬದ್ಧಗೊಳಿಸಲು ಕ್ರಮ ಕೈಗೊಳ್ಳಬೇಕು'' ಎಂದು ಆದೇಶಿಸಿದೆ.
''ಕೇಂದ್ರ ಸರಕಾರ ಈ ವಿಚಾರದಲ್ಲಿ ಬೆಂಬಲ ಪತ್ರ ನೀಡುವುದಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡರೆ ಸಾಲದು, ಭಾರತ ಒಪ್ಪಂದಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಅದು ನಿಯಮದಂತೆ ಅನುಮೋದನೆ ಪತ್ರ ಅಥವಾ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಬೇಕು. ಹಿಂದೂ ದತ್ತಕ ಮತ್ತು ನಿರ್ವಹಣಾ ಕಾಯಿದೆ ಅಡಿ ದತ್ತು ಪ್ರಕ್ರಿಯೆ ನಡೆದಿಲ್ಲವಾದರೂ ಸಹ ದಂಪತಿ ಭಾರತೀಯ ಪೌರತ್ವ ಹೊಂದಿರುವ ಮಗುವನ್ನು ದತ್ತು ಪಡೆದಿರುವುದರಿಂದ ಆ ದಂಪತಿಯನ್ನು ಅರ್ಧಕ್ಕೆ ಕೈಬಿಡುವುದು ಸರಿಯಲ್ಲ'' ಎಂದು ನ್ಯಾಯಾಲಯ ಹೇಳಿದೆ.












Click it and Unblock the Notifications