ಬೆಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸಲು ವಾಕಥಾನ್
ಬೆಂಗಳೂರು, ಮೇ 6: ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಕರ್ನಾಟಕ ಮುಖ್ಯಚುನಾವಣಾಧಿಕಾರಿಗಳ ಕಚೇರಿಯ ವತಿಯಿಂದ ಇಂದು(ಮೇ 06) ಬೆಂಗಳೂರಿನಲ್ಲಿ ವಾಕಥಾನ್ ಏರ್ಪಡಿಸಲಾಗಿತ್ತು.
ಕಂಠೀರವ ಕ್ರೀಡಾಂಗಣದಲ್ಲಿ ಈ ನಡಿಗೆಗೆ ಚಾಲನೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, 'ಮೇ 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಯಾವುದೇ ಬೆದರಿಕೆ, ಆಮಿಷಗಳಿಗೆ ಜಗ್ಗದೆ ಮತ ಚಲಾಯಿಸಬೇಕು' ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಖ್ಯಾತ ನಟ ಕಿಶೋರ್, ನಿರ್ದೇಶಕ ರಿಷಬ್ ಶೆಟ್ಟಿ, ಫಿಟ್ನೆಸ್ ತರಬೇತುದಾರರಾದ ವನಿತಾ ಅಶೋಕ್, ಮಿಸೆಸ್ ಕರ್ನಾಟಕ ಕಾಜಲ್ ಭಾಟಿಯಾ ಮತ್ತಿತರರು ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ ಕೂಡ. ಮನೆಯಲ್ಲಿ ಕುಳಿತು ಆಳುವವರನ್ನು ಟೀಕಿಸುವ ಮುನ್ನ ನಾವು ಮತಚಲಾಯಿಸಿ, ನಮ್ಮ ಹೊಣೆಗಾರಿಕೆ ನಿಭಾಯಿಸಬೇಕು ಎಂಬ ಸಂದೇಶ ನೀಡಿದರು.

ನಂತರ ಕಂಠೀರವ ಕ್ರೀಡಾಂಗಣದಿಂದ ವಿಧಾನಸೌಧ, ನೃಪತುಂಗ ರಸ್ತೆಯ ಮೂಲಕ ಕಂಠೀರವ ಕ್ರೀಡಾಂಗಣದ ವರೆಗೆ ವಾಕಥಾನ್ ನಡೆಯಿತು. ಬಿಬಿಎಂಪಿ ಆಯುಕ್ತ ಮಹೇಶ್ವರರಾವ್, ಅಪರ ಮುಖ್ಯ ಚುನಾವಣಾಧಿಕಾರಿ ಡಾ.ಬಿ.ಆರ್. ಮಮತಾ, ಜಂಟಿ ಮುಖ್ಯಚುನಾವಣಾಧಿಕಾರಿ ಸೂರ್ಯಸೇನ್, ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಹರ್ಷ ಪಿ.ಎಸ್. ಮೊದಲಾದವರು ಭಾಗವಹಿಸಿದ್ದರು. (ಕೃಪೆ:ಕರ್ನಾಟಕ ವಾರ್ತೆ)











Click it and Unblock the Notifications