ರಾಜರಾಜೇಶ್ವರಿನಗರ ಮತಗಟ್ಟೆಗೆ ಬಂದು ವಾಪಸ್ಸಾಗುತ್ತಿರುವ ಜನ!
ಬೆಂಗಳೂರು, ಮೇ 12: ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಿರುವುದೇ ಗೊತ್ತಿಲ್ಲದ ಹಲವರು ಮತಗಟ್ಟೆಯವರೆಗೂ ಬಂದು ವಾಪಸ್ಸಾಗುತ್ತಿರುವ ದೃಶ್ಯ ಕಂಡುಬರುತ್ತಿದೆ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು(ಮೇ 12) ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಆದರೆ ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಆರ್ ಆರ್ ನಗರದ ಚುನಾವಣೆಯನ್ನು ಮೇ 28 ಕ್ಕೆ ಮುಂದೂಡಿ, ನಿನ್ನೆ ಆದೇಶ ಹೊರಡಿಸಿತ್ತು. ಆದರೆ ಈ ಕುರಿತು ಮಾಹಿತಿ ಇಲ್ಲದ ಹಲವರು ಮತಗಟ್ಟೆಯವರೆಗೂ ಬಂದು ನಿರಾಶರಾಗಿ ವಾಪಸ್ಸಾಗುತ್ತಿದ್ದರು.
ಈ ಕ್ಷೇತ್ರದಲ್ಲಿ ಇತ್ತೀಚೆಗೆ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸಾವಿರಾರು ಮತದಾರರ ನಕಲಿ ಗುರುತಿನ ಚೀಟಿ ವಶಪಡಿಸಿಕೊಂಡಿದ್ದರು. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳ ಆಧಾರದ ಮೇಲೆ ಇಲ್ಲಿನ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಕೇಮದ್ರ ಚುನಾವಣಾ ಆಯೋಗದ ಮುಖ್ಯಸ್ಥ ಒ ಪಿ ರಾವತ್ ತಿಳಿಸಿದ್ದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಮೇ 28 ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಮೇ 31 ರಂದು ಫಲಿತಾಂಶ ಹೊರಬೀಳಲಿದೆ.
ಮೇ 08 ರಂದು ಸಂಜೆ ರಾಜರಾಜೇಶ್ವರಿ ನಗರದ ಜಾಲಹಳ್ಳಿ ವ್ಯಾಪ್ತಿಯ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9,746 ವೋಟರ್ ಐಡಿ ಪತ್ತೆಯಾಗಿತ್ತು. ಇದೆಲ್ಲವೂ ಅಸಲಿ ವೋಟರ್ ಐಡಿಗಳು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು.
ಈ ವೋಟರ್ ಐಡಿಗಳು ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಸಂಬಂಧಿಸಿದ್ದು, ಅವರು ಅಕ್ರಮ ಎಸಗುತ್ತಿದ್ದಾರೆಂದು ಬಿಜೆಪಿ ದೂರಿತ್ತು. ಆದರೆ ಈ ಐಡಿಗಳು ಸಿಕ್ಕ ಫ್ಲ್ಯಾಟ್ ಬಿಜೆಪಿಯ ಮಾಜಿ ಕಾರ್ಪೋರೇಟರ್ ಮಂಜುಳಾ ಅವರಿಗೆ ಸೇರಿದ್ದು, ಅವರು ಈ ಫ್ಲ್ಯಾಟ್ ಅನ್ನು ತಮ್ಮ ಸಂಬಂಧಿ ರಾಕೇಶ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು. ಆದ್ದರಿಂದ ಇದು ಬಿಜೆಪಿಗೆ ಸೇರಿದ್ದು ಎಂದು ಕಾಂಗ್ರೆಸ್ ಆರೋಪಿಸಿತ್ತು.












Click it and Unblock the Notifications