Karnataka Assembly Election 2023: ರಾಜಕೀಯ ಪಕ್ಷಗಳಿಂದ ಆಮಿಷ, ರಾಜ್ಯ ಚುನಾವಣೆ ಆಯೋಗದ ಕ್ರಮಗಳೇನು?
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಮತದಾರರಿಗೆ ಆಮಿಷ ಒಡ್ಡುತ್ತಿದ್ದು, ಅಂತವರ ವಿರುದ್ಧ ಕರ್ನಾಟಕ ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳಲಿದೆ ಎಂಬುದರ ವಿವರ ಇಲ್ಲಿದೆ. ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 02: ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭಾ ಚುನಾವಣೆ ವರೆಗೂ ಯಾವುದೇ ಚುನಾವಣೆಗಳು ಎದುರಾದರೂ ಮತದಾರರಿಗೆ ಆಮಿಷ ಒಡ್ಡುವುದು ಸಾಮಾನ್ಯ ಎಂಬಂತಾಗಿದೆ. ಈ ಭಾರಿ ಹಣ, ವಸ್ತು, ಉಡುಗೊರೆ ನೀಡಿದ ಮತದಾರರನ್ನು ಓಲೈಕೆ ಮಾಡುವುದಕ್ಕೆ ಕಡಿವಾಣ ಹಾಕಲು ಚುನಾವಣೆ ಆಯೋಗ ನಿರ್ಧರಿಸಿದೆ.
ಸುಮಾರು 2-3 ತಿಂಗಳಲ್ಲಿ ಕರ್ನಾಟಕವು ವಿಧಾನಸಭೆ ಚುನಾವಣೆ 2023 ಅನ್ನು ಎದುರಿಸಲಿದೆ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕುಕ್ಕರ್, ಫ್ಯಾನ್, ಇನ್ನಿತರ ಮನೆ ಬಳಕೆ ವಸ್ತುಗಳು,ಉಡುಗೊರೆ, ಹಣ ಹಂಚಿಕೆ ಮುಂತಾದವುಗಳಿಂದ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುತ್ತಿವೆ. ಈ ಬಗ್ಗೆ ಸಾಕಷ್ಟು ಆರೋಪ, ದೂರುಗಳು ಸಲ್ಲಿಕೆಯಾಗಿವೆ. ಈ ಸಂಬಂಧ ರಾಜ್ಯ ಚುನಾವಣೆ ಆಯೋಗ ಕಟ್ಟುನಿಟ್ಟಿನ ನಿರ್ಧಾರ ಮಾಡಿದ್ದು, ಆಮಿತ ಒಡ್ಡುವವರ ವಿರುದ್ಧ ಸಮರ ಸಾರಿಸಿದೆ.
ವಾಣಿಜ್ಯ ಎಲ್ಪಿಜಿ ಮೇಲಿನ ಜಿಎಸ್ಟಿ ಕಡಿತ ಮಾಡುವಂತೆ ಬೆಂಗಳೂರು ಹೋಟೇಲ್ ಮಾಲೀಕರ ಆಗ್ರಹ
ವಿವಿಧ ರಾಜಕೀಯ ಪಕ್ಷಗಳು ಜನಸಾಮಾನ್ಯರಿಗೆ ವಿವಿಧ ರೀತಿಯ ಉಚಿತ ಉಡುಗೊರೆ/ಆಮಿಷಗಳನ್ನು ಒಡ್ಡುತ್ತಿವೆ. ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ತಡೆಯುವ ಜೊತೆಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಿಸಿದ ರಾಜ್ಯದ ವಿವಿಧ ಇಲಾಖೆಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚನೆ ನೀಡಿದ್ದಾರೆ.
ಮುಂಬರಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಕುರಿತು ಕುರಿತು ಮನೋಜ್ ಕುಮಾರ್ ಮೀನಾ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಬುಧವಾರ ನಡೆಯಿತು.
ವಿಧಾನಸಭಾ ಚುನಾವಣೆ ಬಗ್ಗೆ ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶಿಸಿದರು.
ಮದ್ಯ ಮಾರಾಟ ಬಗ್ಗೆ ನಿಗಾ ವಹಿಸಿ
ಮತದಾರರಿಗೆ ಮದ್ಯಪಾನ, ಉಡುಗೂರೆ ಆಮಿಷ ಒಡ್ಡುವುದು, ಕೂಪನ್ ವಿತರಣೆ ಮಾಡಲಾಗುತ್ತಿರುವುದು ಗೊತ್ತಾಗಿದೆ. ಕಳೆದ ವರ್ಷದ ಈ ಸಮಯದಲ್ಲಿ ಮಾರಾಟವಾದ ಮದ್ಯ ಹಾಗೂ ಪ್ರಸ್ತುತ ಈಗ ಮಾರಾಟವಾಗುತ್ತಿರುವ ಮದ್ಯ ಕುರಿತಂತೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಅಂತರ್ ರಾಜ್ಯ ಚೆಕ್ ಪೋಸ್ಟ್ ತೆರೆಯಿರಿ.
ಸಮಾಜದಲ್ಲಿ ನಡೆಯುತ್ತಿರುವ ಆಮಿಷಗಳ ಕುರಿತು ಇಲಾಖೆಗಳು ಮಾಹಿತಿಯನ್ನು ಇಲಾಖಾ ಮಟ್ಟದಲ್ಲಿ ಹಂಚಿಕೊಂಡು ಸುಗಮ ಚುನಾವಣೆಗಾಗಿ ಕೆಲಸ ಮಾಡಬೇಕು ಎಂದರು.
ವಿವಿಧ ಇಲಾಖೆಗಳಡಿ ಸಲ್ಲಿಕೆಯಾಗುವ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿದೆ. ಹಣ ಮತ್ತು ಬಂಗಾರದಂತಹ ಬೆಲೆ ಬಾಳುವ ವಸ್ತುಗಳ ಸಾಗಣಿಕೆ ಮೇಲೆ ನಿಗಾ ಇಡಿ. ಮಾದಕ ವಸ್ತುಗಳ ಸಾಗಣಿಕೆ, ಮಾರಾಟದ ಮೇಲೆ ಕಣ್ಣಿಡಬೇಕು, ಇದಕ್ಕೆ ಸಂಬಂಧಿಸಿದಂತೆ ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ಇದಕ್ಕಾಗಿ ವಿಶೇಷ ನೂಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಹಣದ ರೂಪದಲ್ಲಿ ಡಿಜಿಟಲ್ ಪ್ಲಾರ್ಟ್ ಫಾರ್ಮ್ಗಳ ಮೂಲಕ ನಡೆಯುವ ಆಮಿಷಗಳ ಮೇಲೆ ನಿಗಾವಹಿಸಿ. ಕಾನೂನು ಬಾಹಿರ ಚುಟುವಟಿಕೆ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅವರು ತಾಕೀತು ಮಾಡಿದರು.
ಸಮಾಜಘಾತುಕ ಭಾಷಣ, ಸಮಾಜದ ನೆಮ್ಮದಿ ಕದಡುವ ಹಾಗೂ ದ್ವೇಷವನ್ನು ಹರಡುವ ಮಾತುಗಳು ಮತ್ತು ಅಂತಹ ಸಭೆಗಳು, ಘಟನೆಗಳು ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ. ಭಾರತ ಚುನಾವಣಾ ಆಯೋಗದಿಂದ 2022ರ ನವೆಂಬರ್ 24ರಂದು ನಡೆದಿದ್ದ ಸಭೆಯು ತೆಗೆದುಕೊಂಡಿದ್ದ ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ರವರು, ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ, ರಾಜ್ಯ ಸರಕು ಮತ್ತು ಸೇವೆ ಇಲಾಖೆ, ಹೆಚ್ಚುವರಿ ನಿರ್ದೇಶಕರು (ತನಿಖೆ), ಆದಾಯ ತೆರಿಗೆ ಇಲಾಖೆ, ಕೇಂದ್ರ ತೆರಿಗೆ ಮತ್ತು ಸುಂಕ ಇಲಾಖೆ, ರೆವಿನ್ಯೂ ಇಂಟಲಿಜೆನ್ಸ್, ಜಾರಿ ನಿರ್ದೇಶನಾಲಯ, ಬೆಂಗಳೂರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಸಿಐಎಸ್ಎಫ್, ಸಹಾಯಕ ಭದ್ರತಾ ಆಯುಕ್ತರು, ರೈಲ್ವೆ ಪ್ರೋಟೆಕ್ಷನ್ ಪೋರ್ಸ್, ಆರ್ಬಿಐ, ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ, ಅಂಚೆ ಸೇವೆಗೆ ಸೇರಿದ ಅಧಿಕಾರಿಗಳು ಉಪಸ್ಥಿತರಿದ್ದರು.