Karnataka Election 2023: ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ವಿವರಗಳು
ಬೆಂಗಳೂರು, ಮಾರ್ಚ್. 29: ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಸೇರಿದಂತೆ ಚುನಾವಣಾ ಆಯೋಗ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಒಮ್ಮೆ ನಮ್ಮ ಕರ್ನಾಟಕ ವಿಧಾನಸಭೆಯ ಸಂಖ್ಯಾಬಲವನ್ನು ಮತ್ತೆ ನೆನಪಿಸಿಕೊಳ್ಳುವ.
ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 24 ಮೇ 2023ಕ್ಕೆ ಕೊನೆಗೊಳ್ಳಲಿದೆ. ವಿಧಾನಸಭೆಯ ಎಲ್ಲಾ 224 ಸದಸ್ಯರನ್ನು ಆಯ್ಕೆ ಮಾಡಲು 2023 ರ ಏಪ್ರಿಲ್ - ಮೇನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆಗಳು ಮೇ 2018 ರಲ್ಲಿ ನಡೆದು, ಜಾತ್ಯತೀತ ಜನತಾ ದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈತ್ರಿ ರಾಜ್ಯ ಸರ್ಕಾರವನ್ನು ರಚಿಸಿದ್ದವು. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

ಬಳಿಕ ಬಿಜೆಪಿ ಆಪರೇಷನ್ ಕಮಲ ನಡೆಸಿದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಜುಲೈ 2019 ರಲ್ಲಿ, ವಿಧಾನಸಭೆಗೆ ರಾಜೀನಾಮೆ ನೀಡಿದರು. ಈ ಕಾರಣ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಪತನಗೊಂಡಿತು. ತರುವಾಯ, ಭಾರತೀಯ ಜನತಾ ಪಕ್ಷವು, ಪಕ್ಷಾಂತರವಾದ ಶಾಸಕರೊಂದಿಗೆ ರಾಜ್ಯ ಸರ್ಕಾರವನ್ನು ರಚಿಸಿತು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಎರಡು ವರ್ಷಗಳ ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಐಇ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರು.
ಪ್ರಸ್ತುತ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಲ್ಲಿ
* ಬಿಜೆಪಿ - 119 ಶಾಸಕರು
* ಕಾಂಗ್ರೆಸ್ - 75 ಶಾಸಕರು
ಜೆಡಿಎಸ್ - 27 ಶಾಸಕರು
ಕಳೆದ ಬಾರಿ ಕರ್ನಾಟಕ ವಿಧಾನಸಭೆ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ.
1. ಭಾರತೀಯ ಜನತಾ ಪಕ್ಷದ ಬಿ.ಎಸ್. ಯಡಿಯೂರಪ್ಪ - 17 ಮೇ 2018 ರಿಂದ 19 ಮೇ 2018
2. ಜಾತ್ಯತೀತ ಜನತಾ ದಳದ ಎಚ್.ಡಿ. ಕುಮಾರಸ್ವಾಮಿ - 23 ಮೇ 2018 ರಿಂದ 23 ಜುಲೈ 2019
3. ಭಾರತೀಯ ಜನತಾ ಪಕ್ಷದ ಬಿ.ಎಸ್. ಯಡಿಯೂರಪ್ಪ - 26 ಜುಲೈ 2019 ರಿಂದ 26 ಜುಲೈ 2021
4. ಭಾರತೀಯ ಜನತಾ ಪಕ್ಷದ ಬಸವರಾಜ ಬೊಮ್ಮಾಯಿ - 28 ಜುಲೈ 2021 ಪ್ರಸ್ತುತ

ಕಳೆದ ಬಾರಿಯ ಚುನಾವಣೆ ನಂತರ ನಡೆದ ಬೆಳವಣಿಗೆಗಳು ಭಾರೀ ಕುತೂಹಲ ಮತ್ತು ಜನರಲ್ಲಿ ರಾಜಕೀಯದ ಬಗ್ಗೆ ಜಿಗುಪ್ಸೆ ಮೂಡಿಸುವಂತಿದ್ದವು. ಈ ಕಾರಣದಂದಲೇ ಈ ಬಾರಿ ಎಲ್ಲಾ ಪಕ್ಷಗಳು ಒಂಟಿಯಾಗಿ ಚುನಾವಣೆ ಎದುರಿಸುವ ಮಾತನಾಡುತ್ತಿವೆ. ಕಳೆದ ಹಲವು ಬಾರಿ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿರುವ ಎಚ್.ಡಿ ಕುಮಾರಸ್ವಾಮಿ ಈ ಬಾರಿ ತಾವು ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು, ಬಹುಮತ ಪಡೆಯುವುದಾಗಿ ತಿಳಿಸಿದ್ದಾರೆ.
ಇತ್ತ, ಕಾಂಗ್ರೆಸ್ 30 ಸೆಪ್ಟೆಂಬರ್ 2022ರಲ್ಲಿ ಕರ್ನಾಟಕಕ್ಕೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪ್ರವೇಶದೊಂದಿಗೆ ತನ್ನ ಪ್ರಚಾರವನ್ನು ಪ್ರಾರಂಭಿಸಿತು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಸಚಿವಾಲಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ನ PayCM ಅಭಿಯಾನ ನಡೆಸಿತು. ಇದಾದ ಬಳಿಕ ಪ್ರಜಾರ್ಧವನಿ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸಿದೆ.
ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ ಕೂಡ ರಾಜ್ಯಾದ್ಯಂತ ಜನ ಸಂಕಲ್ಪ ಯಾತ್ರೆಗಳ ಮೂಲಕ ಪ್ರಚಾರ ನಡೆಸುತ್ತಿದೆ. ಈ ಯಾತ್ರೆಗೆ ರಾಷ್ಟ್ರೀಯ ನಾಯಕರು ಸಾಥ್ ನೀಡಿದ್ದಾರೆ. ಹಲವು ಭಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಯಾತ್ರೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದ್ದಾರೆ.












Click it and Unblock the Notifications