ನವವಿವಾಹಿತ, ವಿದ್ಯಾರ್ಥಿನಿ ಸೇರಿ ಹತ್ತು ಮಂದಿ ಬಲಿ
ಬೆಂಗಳೂರು, ನವೆಂಬರ್ 17 : ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಶುಕ್ರವಾರ (ನ.17) ಐದನೇ ದಿನಕ್ಕೆ ಕಾಲಿಟ್ಟಿದೆ. ಸಾವಿನ ಸಂಖ್ಯೆಯೂ ಕೂಡ ಏರಿಕೆಯಾಗುತ್ತಿದೆ.
ಗದಗಜಿಲ್ಲೆ ರೋಣಾ ತಾಲೂಕಿನ ರವಿ ವೀರಪ್ಪ ಭಜಂತ್ರಿ (21) ಎನ್ನುವರು ಡೆಂಗಿ ಜ್ವರದಿಂದ ಸಾವನ್ನಪ್ಪಿದ್ದಾರೆ. ನವೆಂಬರ್ ೧೨ರಂದು ವಿವಾಹವಾಗಿದ್ದ ರವಿಯವರು ಕಳೆದ ಮೂರು ದಿನದಿಂದ ಡೆಂಗಿ ಜ್ವರದಿಂದ ನರಳುತ್ತಿದ್ದರು. ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿಯಾಗಿದ್ದ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪೂಜಾ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಡಯಾಲಿಸಿಸ್ ನಡೆಯುತ್ತಿತ್ತು.
ಆದರೆ ಶುಕ್ರವಾರ ನೋವು ಕಾಣಿಸಿಕೊಂಡ ಕಾರಣ ಸಿಟಿ ಆಸ್ಪತ್ರೆಗೆ ಬಂದಾಗ ಇಲ್ಲಿ ವೈದ್ಯರು ಯಾರು ಇಲ್ಲ ಎಂದು ಮಂಗಳೂರಿಗೆ ತೆರಳುವಂತೆ ಸೂಚಿಸಿದ್ದರು. ಆದರೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ನಿವಾಸಿ ಸದಾಶಿವಯ್ಯ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್
ಗುರುವಾರ ತಡರಾತ್ರಿ ಸದಾಶಿವಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಿದ್ದ ಕಾರಣ ಸರ್ಕಾರಿ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ನಿವಾಸಿಯಾಗಿರುವ ಅಣ್ಣ-ತಂಗಿ ಇಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಗುರುವಾರ ರಾತ್ರಿ ಊಟ ಸೇವಿಸಿದ ನಂತರ ಮನೆಯವರಿಗೆಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜಗದೀಶ್ (6) ಹಾಗೂ ವರ್ಷಿಣಿ(3) ಮಗುವನ್ನು ಖಾಸಗಿ ಆಸ್ಪತ್ರೆ ಮುಚ್ಚಿದ್ದ ಕಾರಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಗೆ ಕರೆ ಮಾಡಲಾಗಿದೆ ಆಂಬುಲೆನ್ಸ್ ಎರೆಡು-ಮೂರು ಗಂಟೆಗಳು ತಡವಾಗಿ ಬಂದ ಕಾರಣ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಬಿಎಎಂಎಸ್ ವೈದ್ಯನ ಎಡವಟ್ಟಿಗೆ ಬಾಲಕಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ. ರೂಪಾ ರಾಮಣ್ಣ ಬಂಡಿವಡ್ಡರ 8) ಕಳೆದ ಮೂರು ದಿನಗಳಿಂದ ಜ್ವರದಿಂದ ನರಳುತ್ತಿದ್ದಳು.
ಡಾ. ಚಂದ್ರಶೇಖರ ಬಾವಿಕಟ್ಟಿ ಅವರು ಚುಚ್ಚುಮದ್ದು ನೀಡಿದ್ದರು. ಚುಚ್ಚು ಮದ್ದಿನ ರಿಯಾಕ್ಷನ್ ಇಂದಾಗಿ ಬಾಲಕಿ ಮೃತಪಟ್ಟಿದ್ದಾಳೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆಯಲ್ಲಿ ವಿದ್ಯಾ ಕಲ್ಯಾಣಶೆಟ್ಟಿ (55) ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಗುರುವಾರ (ನ.16)ರ ರಾತ್ರಿ ಅತಿಯಾದ ಎದೆನೋವು ಕಾಣಿಸಿಕೊಂಡ ಪರಿಣಾಮ ತುರ್ತು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ.
ಇನ್ನು ಬಾಗಲಕೋಟೆಯ ಮುಳಗೋಡ ಗ್ರಾಮದ ಆಶಾಬಿ ಲಾಡಖಾನ ಅವರು ರಕ್ತದ ಒತ್ತಡ ಹೆಚ್ಚಾಗಿ ಸಕಾಲಕ್ಕೆ ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಬೇಬಿ ಬೇಗಂ (50) ಅವರು ಮೃತಪಟ್ಟಿದ್ದಾರೆ, ಗುರುವಾರ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದರು. ಸಕಾಲಕ್ಕೆ ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.











Click it and Unblock the Notifications