ಕರ್ನಾಟಕ ಕಾಂಗ್ರೆಸ್ಸಿನ ಹೊಣೆಹೊತ್ತ ನಾಯಕರು ಇವರೇ
ಬೆಂಗಳೂರು, ಏಪ್ರಿಲ್ 1: ನಿನ್ನೆಯ ಯುಗಾದಿ ಹಬ್ಬದ ನಂತರ ಇಂದು ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭೆಯ ಸಮರೋತ್ಸಾಹ ಆರಂಭಗೊಂಡಿದೆ. ಕನಿಷ್ಠ 22 ಸ್ಥಾನಗಳನ್ನು ಗೆಲ್ಲಲು ಹೈಕಮಾಂಡ್ ಪ್ರಾದೇಶಿಕ ನಾಯಕರಿಗೆ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿದೆ.
ಹಳೇ ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರಿಗೆ ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಲಾಗಿದೆ. ಇಲ್ಲಿ 7 ಕ್ಷೇತ್ರಗಳ ಪೈಕಿ ಹಾಸನ ಹೊರತುಪಡಿಸಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕೆಂದು ಕಟ್ಟಪ್ಪಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 2 ರಂದು ಪ್ರವಾಸ ಆರಂಭಿಸುತ್ತಿದ್ದು, 13 ರವರೆಗೂ ನಿರಂತರವಾಗಿ ಜಿಲ್ಲಾ ಪ್ರವಾಸದಲ್ಲಿರುತ್ತಾರೆ.

ಹೈದರಾಬಾದ್-ಕರ್ನಾಟಕ ಭಾಗದಲ್ಲಿ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕೆಂದು ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರಿಗೆ ಜವಾಬ್ದಾರಿ ನೀಡಿದೆ. ಕರಾವಳಿ ಭಾಗದ 3 ಕ್ಷೇತ್ರಗಳಲ್ಲಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ಹಿರಿಯ ನಾಯಕ ಜನಾರ್ದನ ಪೂಜಾರಿಗೆ ಜವಾಬ್ದಾರಿ ವಹಿಸಿದ್ದು 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕೆಂದು ಹೈಕಮಾಂಡ್ ಆದೇಶಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಏ. 5 ರಂದು ರಾಹುಲ್ ಗಾಂಧಿ, ಬಳ್ಳಾರಿ, ಮಂಗಳೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಸೋನಿಯಾ ಗಾಂಧಿ ಅವರ ಕಾರ್ಯಕ್ರಮ ನಿಗದಿಗೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ತನ್ನದೇ ಆದ ಲೆಕ್ಕಾಚಾರದಲ್ಲಿ ಕಣಕ್ಕೆ ಇಳಿದಿದೆ. ನಿರೀಕ್ಷೆಯಂತೆ ಗೆಲ್ಲಲಿದೆಯೇ ಅಥವಾ ಹಿನ್ನಡೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಹಾಸನ, ಶಿವಮೊಗ್ಗ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದರೂ ಗೆಲುವಿನ ಸಾಧ್ಯತೆಗಳ ಬಗ್ಗೆ ದೃಢ ವಿಶ್ವಾಸವಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧೆಯಿಂದ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು ಮೊಯ್ಲಿ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಮುಂಬೈ-ಕರ್ನಾಟಕ ಭಾಗದಲ್ಲಿ 10 ಕ್ಷೇತ್ರಗಳಿದ್ದು ಬಹುತೇಕ ಬಿಜೆಪಿ ಪ್ರಭಾವವಿದೆ. ಈ ಭಾಗದಲ್ಲಿ ಸತೀಶ್ ಜಾರಕಿ ಹೊಳಿ, ಎಚ್ಕೆ ಪಾಟೀಲ್ ಅವರಂಥ ನಾಯಕರಿದ್ದರೂ ಯಾರಿಗೂ ಪೂರ್ಣ ಜವಾಬ್ದಾರಿ ನೀಡಿಲ್ಲ. ಹೈದರಾಬಾದ್-ಕರ್ನಾಟಕ, ಕರಾವಳಿ, ಹಳೇ ಮೈಸೂರು ಭಾಗದ ಕಡೆಗಷ್ಟೇ ಹೆಚ್ಚಿನ ಗಮನ ಕೇಂದ್ರೀಕರಿಸಿರುವ ಕಾಂಗ್ರೆಸ್ ಮುಂಬೈ- ಕರ್ನಾಟಕದಲ್ಲಿ ಎಷ್ಟು ಕ್ಷೇತ್ರಗಳನ್ನು ಗೆದ್ದರೂ ಅದನ್ನು ಬೋನಸ್ ಎಂದು ಪರಿಗಣಿಸಲು ನಿರ್ಧರಿಸಿದೆ.
ಹಾಲಿ ಸಂಸದರ ಪೈಕಿ 9 ಕ್ಷೇತ್ರಗಳಲ್ಲೂ ಗೆಲುವಿನ ಲೆಕ್ಕಾಚಾರವಿದ್ದು ಒಂದೆರಡು ಕ್ಷೇತ್ರಗಳು ಏರು ಪೇರಾಗುವ ನಿರೀಕ್ಷೆಯಿದೆ. ಉಳಿದಂತೆ ಬಳ್ಳಾರಿಯಲ್ಲಿ ಹನುಮಂತಪ್ಪ, ಚಿಕ್ಕೋಡಿಯಲ್ಲಿ ಪ್ರಕಾಶ್ ಹುಕ್ಕೇರಿ, ರಾಯಚೂರಿನಲ್ಲಿ ಬಿಬಿ ನಾಯಕ್, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಭಟ್ಕಳದಲ್ಲಿ ಬಸವರಾಜ್ ಯತ್ನಾಳ್, ಬೆಂಗಳೂರು ಗ್ರಾಮಾಂತರ, ಬೆಂಗಳೂರಿನ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್ ಹೊಂದಿದೆ.
ಬಿಜಾಪುರ, ಬೆಳಗಾವಿ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆದಿದ್ದು, ಇನ್ನಷ್ಟು ಪ್ರಯತ್ನ ಹಾಕುವ ಸಲುವಾಗಿ ಹೆಚ್ಚಿನ ಸಂಖ್ಯೆ ನಾಯಕರನ್ನು ಉಸ್ತುವಾರಿಗೆ ಹಾಕುವ ಚಿಂತನೆಯೂ ನಡೆಸಿದೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬೆಂಗಳೂರಿನಲ್ಲಿ ಮೂರು ದಿನ, ಮಂಡ್ಯದಲ್ಲಿ 2 ದಿನ ಹೊರತುಪಡಿಸಿ ಬಾಕಿ ದಿನಗಳಲ್ಲಿ ಇತರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವರು.











Click it and Unblock the Notifications