ಕರ್ನಾಟಕ ಕೇಡರ್ ಅಧಿಕಾರಿ ಕೈಗೆ 2ಜಿ ಹಗರಣ ತನಿಖೆ
ಬೆಂಗಳೂರು, ನ. 22: ಯುಪಿಎ ಸರ್ಕಾರದ ವರ್ಚಸ್ಸನ್ನು ಮಣ್ಣು ಮಾಡಿದ್ದ ದೇಶದ ಅತಿ ದೊಡ್ಡ ಹಗರಣವಾದ '2ಜಿ ಸ್ಪೆಕ್ಟ್ರಮ್ ಹಂಚಿಕೆ'ಯ ತನಿಖೆಯನ್ನು ಇನ್ನು ಮುಂದೆ ಸಿಬಿಐ ಹೆಚ್ಚುವರಿ ನಿರ್ದೇಶಕ ರುಪಕ್ ಕುಮಾರ್ ದತ್ತಾ ನಡೆಸಲಿದ್ದಾರೆ.
ಪ್ರಸ್ತುತ ಅವರು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆಯಂತೆ 2ಜಿ ಹಗರಣದ ತನಿಖೆಯಿಂದ ಸಿಬಿಐ ನಿರ್ದೇಶಕ ರಣಜಿತ್ ಸಿನ್ಹಾ ಹಿಂದೆ ಸರಿದಿದ್ದಾರೆ.

ರುಪಕ್ ಕುಮಾರ್ ದತ್ತಾ ಅವರು 1981ನೇ ವರ್ಷದ ಬ್ಯಾಚ್ನ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ. ಇಲ್ಲಿಯವರೆಗೆ 2ಜಿ ಹಗರಣ ತನಿಖೆಯ ತಂಡದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದತ್ತಾ ಇನ್ನು ಮುಂದೂ ಸಂಪೂರ್ಣ ತನಿಖೆಯನ್ನು ಮುನ್ನಡೆಸುವರು.
ಅವರು ಸಿಐಬಿಗೆ ಸೇರುವ ಮೊದಲು ಕರ್ನಾಟಕ ಪೊಲೀಸ್ನ ಸಿಐಡಿ ವಿಭಾಗದಲ್ಲಿ ಡಿಜಿಪಿಯಾಗಿದ್ದರು. ಸಿಐಡಿ ವಿಶೇಷ ಘಟಕ ಹಾಗೂ ಆರ್ಥಿಕ ಅಪರಾಧಗಳ ಮುಖ್ಯಸ್ಥರಾಗಿದ್ದರು.
ವೃತ್ತಿ ಜೀವನದ ಆರಂಭದಲ್ಲಿ ಕಾರವಾರ ಮತ್ತು ದಾವಣಗೆರೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರುಪಕ್ ಕುಮಾರ್ ದತ್ತಾ ಕಾರ್ಯನಿರ್ವಹಿಸಿದ್ದರು. ನಂತರ ಡಿಐಜಿಯಾಗಿ, ಐಜಿಯಾಗಿ, ಕಾನೂನು ಮತ್ತು ಪಾಲನೆಯ ಹೆಚ್ಚುವರಿ ಡಿಜಿಪಿಯಾಗಿ ಹಾಗೂ ಕರ್ನಾಟಕ ಲೋಕಾಯುಕ್ತದಲ್ಲಿ ಎಜಿಡಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಸೇವೆಗೆ ರಾಷ್ಟ್ರಪತಿ ಪದಕವೂ ಲಭಿಸಿದೆ.












Click it and Unblock the Notifications