ಪ್ರಧಾನಿ ಮೋದಿ ಸ್ವಾಗತಿಸಲು ಕರ್ನಾಟಕ ಬಿಜೆಪಿ ಸಜ್ಜು
ಬೆಂಗಳೂರು, ಸೆ.16: ನರೇಂದ್ರಮೋದಿಯವರು ಪ್ರಧಾನಿಯಾಗಿ 110 ದಿನ ಕಳೆದಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿ 10 ವರ್ಷಗಳ ಕಾಲ ನಡೆಸಿದ ಆಡಳಿತದಲ್ಲಿ ಸಿಗದ ಅಂತಾರಾಷ್ಟ್ರೀಯ ಮನ್ನಣೆ ನೂರು ದಿನಗಳಲ್ಲಿ ಮೋದಿಯವರಿಗೆ ಸಿಕ್ಕಿದೆ. ನೇಪಾಳ, ಬ್ರೆಜಿಲ್, ಜಪಾನ್ ನಲ್ಲಿ ಅಭೂತಪೂರ್ವ ಭವ್ಯ ಸ್ವಾಗತ ಪ್ರಧಾನಿಯವರಿಗೆ ಸಿಗುತ್ತಿದೆ. ಪ್ರಧಾನಿಯಾಗಿ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿ ಅವರನ್ನು ಸ್ವಾಗತಿಸಲು ಕರ್ನಾಟಕ ಬಿಜೆಪಿ ಸಿದ್ಧವಾಗಿದೆ ಎಂದು ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದರು.
ಸೆ.23ರಂದು ಸಂಜೆ 5 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬರಲಿದ್ದು, ಅಲ್ಲೇ ಅವರಿಗೆ ಭವ್ಯ ಸ್ವಾಗತ ಹಾಗೂ ಅಭಿನಂದನೆ ಸಲ್ಲಿಸಲಾಗುವುದು. ಇದಕ್ಕೆ ಪೂರಕವಾಗಿ ಪ್ರತಿ ವಾರ್ಡ್, ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ಚಿನ ಜನರು ಆಗಮಿಸಬೇಕು ಎಂದು ಕರೆ ನೀಡಿದರು. ಮೊದಲು ಇಸ್ರೋಗೆ ಪ್ರಧಾನಿ ತೆರಳಲಿದ್ದು, ಮಾರ್ಗದುದ್ದಕ್ಕೂ ಭವ್ಯ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳಬೇಕು. ಮರುದಿನ ಬೆಳಿಗ್ಗೆ 10 ಗಂಟೆಗೆ ತುಮಕೂರಿನಲ್ಲಿ ಇಂಡಿಯಾ ಫುಡ್ ಪಾರ್ಕ್ ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.[ಪಾರ್ಕ್ ವಿವರ ಇಲ್ಲಿ ಓದಿ]
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ದೇಶದಲ್ಲಿಂದು ಮೋದಿ ಗುಣಗಾನ ಮಾಡಲಾಗುತ್ತಿದೆ. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಅವರು ಬೆಂಗಳೂರಿಗೆ ಬರುತ್ತಿದ್ದು, ಅವರನ್ನು ಅಭಿನಂದಿಸುವ ಸ್ವಾಭಿಮಾನ ಅಭಿಯಾನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮವೇ ಮುಂದಿನ ಬಿಬಿಎಂಪಿ ಚುನಾವಣೆಯ ತಯಾರಿ, ಉದ್ಘಾಟನೆ ಕಾರ್ಯಕ್ರಮವೆಂದು ಭಾವಿಸಬೇಕು ಎಂದರು.

ಬಿಬಿಎಂಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಮುನಿರಾಜು, ರವಿಸುಬ್ರಹ್ಮಣ್ಯ, ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ವಿಮಲಾಗೌಡ, ಮೇಯರ್ ಶಾಂತಕುಮಾರಿ, ಉಪಮೇಯರ್ ರಂಗಣ್ಣ, ಬೆಂಗಳೂರು ನಗರಾಧ್ಯಕ್ಷ ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು
ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರೂ, ವಾಜಪೇಯಿ ಅವರ ಮಾದರಿಯಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಭವ್ಯ ಸ್ವಾಗತ ಸಿಗುತ್ತಿದೆ ಎಂದು ಶ್ಲಾಘಿಸಿದರು. ಸೆ.25ರಂದು ಅಮೆರಿಕ ಪ್ರವಾಸಕೈಗೊಳ್ಳಲಿರುವ ಮೋದಿಯವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗಲಿದ್ದಾರೆ. ಜತೆಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮುನ್ನ ಸೆ.23 ಮತ್ತು 24ರಂದು ರಾಜ್ಯಪ್ರವಾಸ ಕೈಗೊಳ್ಳಲಿದ್ದಾರೆ.
ಎರಡು ದಿನಗಳ ಕಾಲ ಮೋದಿಯವರಿಗೆ ಭವ್ಯ ಸ್ವಾಗತ ಕೋರಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಕೇವಲ ನೂರು ದಿನದ ಅವಧಿಯಲ್ಲೇ ಪೆಟ್ರೋಲ್ ಬೆಲೆ ಮೂರು ಬಾರಿ ಇಳಿಸಲಾಗಿದೆ. ಬಡವರಿಗಾಗಿ ಆರಂಭಿಸಿರುವ ಜನಧನ್ ಯೋಜನೆಯಡಿ 3.12 ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಡಿ.15ರ ವೇಳೆಗೆ 8 ಕೋಟಿ ಖಾತೆ ತೆರೆಯುವ ಗುರಿ ತಲುಪಲಾಗುತ್ತಿದೆ ಜಪಾನ್ 2 ಲಕ್ಷ ಕೋಟಿ ಬಂಡವಾಳವನ್ನು ಭಾರತದಲ್ಲಿ ಹೂಡುವ ಭರವಸೆ ನೀಡಿದೆ ಎಂದರು.
ಎಲ್ ಪಿಜಿ ಸಂಪರ್ಕ: ನಗರ ಪ್ರದೇಶದಲ್ಲಿ ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ಕುಮಾರ್ ಇಂದಿಲ್ಲಿ ತಿಳಿಸಿದರು. ಬಿಜೆಪಿ ನಗರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಅಡುಗೆ ಅನಿಲದ ಸಮಸ್ಯೆ ತಲೆದೋರಿತ್ತು. ನಮ್ಮ ಸರ್ಕಾರ ಬಂದ ಮೇಲೆ ಅಡುಗೆ ಅನಿಲ ಸಂಪರ್ಕದ ಸಿಲಿಂಡರ್ ಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿದೆ. ಮನೆ ಮನೆಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ಸಂಸದ ಅನಂತ್ ಕುಮಾರ್ ಹೇಳಿದರು.












Click it and Unblock the Notifications