ಬೆಂಗಳೂರು: ರಾಜ್ಯದ ಪೊಲೀಸರ ನಿದ್ದೆಗೆಡಿಸಿದ ಹಿಜ್ಬುಲ್ ಉಗ್ರನ ಬಂಧನ
ಬೆಂಗಳೂರು ಜೂನ್ 7: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಕರ್ನಾಟದಲ್ಲಿ ಕಳೆದ ಎರಡು ವರ್ಷಗಳಿಂದ ನೆಲೆಸಿದ್ದು, ನಂತರ ಆತನ ಬಂಧನವಾಗಿರುವುದು ರಾಜ್ಯದ ಪೊಲೀಸರ ನಿದ್ದೆಗೆಡಿಸಿದೆ.
ಈಗಾಗಲೇ ಹಿಜಾಬ್ ವಿವಾದ್ ಮತ್ತು ಮಂದಿರ-ಮಸೀದಿ ವಿವಾದದಿಂದ ರಾಜ್ಯದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಈಗ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬಂಧನವಾಗಿರುವುದರಿಂದ ಭದ್ರತೆಯ ವಿಷಯದಲ್ಲಿ ಉಡಾಫೆಗೆ ಯಾವುದೇ ಅವಕಾಶ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು ಪೊಲೀಸರ ಸಹಾಯದೊಂದಿಗೆ ರಾಷ್ಟ್ರೀಯ ರೈಫಲ್ಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಜಂಟಿ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲೀಬ್ ಹುಸೇನ್ ನನ್ನು ಜೂನ್ 3 ರಂದೇ ಬಂಧಿಸಿವೆ. ಆದರೆ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಓಕಳಿಪುರಂ ನ ಮಸೀದಿ ಪಕ್ಕದಲ್ಲಿ ಕಳೆದ ಎರಡು ವರ್ಷದಿಂದ ಉಗ್ರ ತಾಲೀಬ್ ಹುಸೇನ್ ಅಡಗಿಕೊಂಡಿದ್ದ. ಈತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದಾನೆ.

ಯುವಕರಿಗೆ ಬ್ರೇನ್ ವಾಶ್ ಮಾಡುತ್ತಿದ್ದ
ತಾಲಿಬ್ ಹುಸೇನ್(38) ಜಮ್ಮು ಕಾಶ್ಮೀರದ ಕಿಶತ್ವಾರ್ ಜಿಲ್ಲೆಯ ನಾಗಸೇನಿ ಪಟ್ಟಣದ ನಿವಾಸಿಯಾಗಿದ್ದಾನೆ. ಈತನಿಗೆ ಇಬ್ಬರು ಪತ್ನಿಯರು ಮತ್ತು ಐದು ಮಂದಿ ಮಕ್ಕಳಿದ್ದಾರೆ. ಈತ 2016ರಲ್ಲಿ ಹಿಜಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ವಾಬ್ ಸಿಂಗ್ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವಂತೆ ತಾಲಿಬ್ ಹುಸೇನ್ ಬ್ರೇನ್ ವಾಶ್ ಮಾಡುತ್ತಿದ್ದ. ಅಲ್ಲದೇ ಈ ಯುವಕರಿಂದ ಕಣಿವೆ ರಾಜ್ಯದಲ್ಲಿ ನೆಲೆಸಿರುವ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಸುತ್ತಿದ್ದ ಎಂದು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಮೇಲೆ 12 ವರ್ಷಗಳ ಹಗೆ! ಯಾರು ಈ ಗ್ಯಾಂಗ್ಸ್ಟರ್ ಲಾರೆನ್ಸ್?

ಆನೇಕ ಸ್ಫೋಟ ಪ್ರಕರಣಗಳಲ್ಲಿ ಭಾಗಿ
ಆನೇಕ ಸ್ಫೋಟ ಪ್ರಕರಣಗಳಲ್ಲಿ ತಾಲಿಬ್ ಹುಸೇನ್ ಭಾಗಿಯಾಗಿದ್ದ. ಈತ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಹಿಟ್ ಲಿಸ್ಟ್ ನಲ್ಲಿದ್ದ. ಭದ್ರತಾ ಪಡೆಗಳು ಇವನಿಗಾಗಿ ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ತಾಲಿಬ್ ಹುಸೇನ್ ತಪ್ಪಿಸಿಕೊಂಡು ಬಂದು ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಎಂದು ದಿಲ್ವಾಬ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರಿನ ಮಸೀದಿ ಪಕ್ಕದಲ್ಲಿ ಅಡಗಿದ್ದ
ಒಬ್ಬ ಹೆಂಡತಿ ಮತ್ತು ಮಕ್ಕಳೊಂದಿಗೆ ತಾಲಿಬ್ ಹುಸೇನ್ ಬೆಂಗಳೂರಿಗೆ ಆಗಿಮಿಸಿದ್ದಾನೆ. ಇಲ್ಲಿ ಸಾಮಾನ್ಯರಂತೆ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ. ಭದ್ರತಾ ಪಡೆಗಳು ಈತನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈತ ಬೆಂಗಳೂರಿನಲ್ಲಿ ಇರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಕ್ಕಾ ಮಾಹಿತಿ ಸಂಗ್ರಹಿದರು ಎಂದು ವಿವರಿಸಿದ್ದಾರೆ.

ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನ ಸೆರೆ
ಭದ್ರತಾ ಪಡೆಗಳ ವಿಶೇಷ ತಂಡವು ಕಳೆದ ವಾರ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿಯಾಯಿತು. ಸ್ಥಳೀಯ ಪೊಲೀಸರು ತಾಲಿಬ್ ಹುಸೇನ್ನ ಪ್ರತಿಯೊಂದು ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದರು. ನಂತರ ಜೂನ್ 3 ರಂದು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಲಾಯಿತು ಎಂದು ಡಿಜಿಪಿ ದಿಲ್ವಾಬ್ ಸಿಂಗ್ ಮಾಹಿತಿ ನೀಡಿದ್ದಾರೆ.
ತಾಲಿಬ್ ಹುಸೇನ್ ಬಂಧನದ ನಂತರ ಆತ ಒಬ್ಬ ಭಯೋತ್ಪಾದಕ ಎಂದು ತಿಳಿದು ಬೆಂಗಳೂರಿನ ಆತನ ನೆರೆ-ಹೊರೆಯವರು ಆಶ್ಚರ್ಯಚಕಿತರಾದರು. ಇಲ್ಲಿ ಆತ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದ. ಎಲ್ ಟಿಟಿಇ ಗೆ ಸೇರಿದ್ದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರು ಕೂಡ ಬೆಂಗಳೂರಿನಲ್ಲೇ ಅಡಗಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬಂಧನ ನಂತರ ಬೆಂಗಳೂರು ಪೊಲೀಸರು ಹೈಅಲರ್ಟ್ ಆಗಿದ್ದಾರೆ.












Click it and Unblock the Notifications