ಬೆಂಗಳೂರು ಮಾಜಿ ಮೇಯರ್ ಸಂಪತ್ ರಾಜ್ಗೆ ಟಿಕೆಟ್ ವಿಚಾರ: ಕಾಂಗ್ರೆಸ್ ಕಾರ್ಯಕರ್ತರ ತೀವ್ರ ವಿರೋಧ, ಪ್ರತಿಭಟನೆ ಎಚ್ಚರಿಕೆ
ಬೆಂಗಳೂರು, ಮಾರ್ಚ್ 10: ಸಿವಿ ರಾಮನ್ ನಗರದಿಂದ ಸ್ಪರ್ಧಿಸಲು ಬೆಂಗಳೂರು ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಪ್ರತಿಭಟನೆ ನಡೆಸುವುದಾಗಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ. ಹಾಲಿ ಶಾಸಕ ಎಸ್.ರಘು ವಿರುದ್ಧ ಸೆಣಸಲು ಸಂಪತ್ ರಾಜ್ ಹೆಸರು ಕೇಳಿಬರುತ್ತಿದ್ದಂತೆ ಸಿವಿ ರಾಮನ್ ನಗರ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸಂಪತ್ ರಾಜ್ ಅವರು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಮೆಚ್ಚಿಸಿರಬಹುದು. ಆದರೆ ಸಿವಿ ರಾಮನ್ ನಗರದ ಮತದಾರರು ಬೇರೆ ರೀತಿಯಲ್ಲಿಯೇ ಯೋಚಿಸುತ್ತಾರೆ. ಸಂಪತ್ ರಾಜ್ ಅವರನ್ನು ಕರೆತರುವುದು ಸ್ಥಳೀಯ ನಾಯಕರಿಗೆ ಅವಮಾನ ಮಾಡಿದಂತಾಗುತ್ತದೆ. ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಿರುವುದರಿಂದ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ ಎಂದು 'ಕೈ' ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಯ್ಸಳನಗರ ವಾರ್ಡ್ ಮಾಜಿ ಕಾರ್ಪೊರೇಟರ್ ಎಸ್. ಆನಂದ್ ಅವರು ಸಹ ತಮಿಳು ಭಾಷಿಗರಾಗಿದ್ದಾರೆ. ಅವರ ಬೆಂಬಲಕ್ಕೆ ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ, ಪ್ರತಿಸ್ಪರ್ಧಿ ಬಿಜೆಪಿ ಪಾಳಯದ ಮುಖಂಡರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿರುವ ಅವರು, 'ನಾನು ಯುವಕನಾಗಿದ್ದು, ಎಲ್ಲಾ ಅಕ್ಕಪಕ್ಕದ ವಾರ್ಡ್ ನಾಯಕರೊಂದಿಗೆ ಸಂಪರ್ಕ ಹೊಂದಿದ್ದೇನೆ. ನನಗೆ ಟಿಕೆಟ್ ನೀಡಿದರೆ, ನಾನು ಹಾಲಿ ಶಾಸಕ ರಘುಗೆ ಫೈಟ್ ಕೊಡಬಹುದು' ಎಂದು ಹೇಳಿದ್ದಾರೆ.
ಕೊನೆನ ಅಗ್ರಹಾರ, ಜೀವನ್ ಬಿಮಾನಗರ ಮತ್ತು ತಿಪ್ಪಸಂದ್ರದಲ್ಲಿ ಜನಪ್ರಿಯರಾಗಿರುವ ಬಿಜೆಪಿ ಬಂಡಾಯ ನಾಯಕ ಚಂದ್ರಪ್ಪ ರೆಡ್ಡಿ ಅವರನ್ನೂ ಸಂಪರ್ಕಿಸಿದ್ದೇನೆ ಎಂದು ಆನಂದ್ ಹೇಳಿದ್ದಾರೆ. ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಸಂಪತ್ ರಾಜ್ ಅವರನ್ನು ಪಕ್ಷ ಬೆಂಬಲಿಸುತ್ತಿದೆ. ಆದರೆ ಇಲ್ಲಿ ಮತದಾರರು ಅವರನ್ನು ಬೆಂಬಲಿಸುವುದಿಲ್ಲ. ವಿಶೇಷವಾಗಿ ಡಿಜೆ ಹಳ್ಳಿ ಘಟನೆಯ ನಂತರ ಅವರಿಗೆ ಬೆಂಬಲ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

'ಕಳೆದ ಬಾರಿ ಸಂಪತ್ ರಾಜ್ಗೆ ಮತ ಹಾಕುವಂತೆ ಇಲ್ಲಿನ ಕಾರ್ಯಕರ್ತರನ್ನು ಮನವೊಲಿಸುವುದು ನಮಗೆ ಕಷ್ಟಕರವಾಗಿತ್ತು. ಶಿವಕುಮಾರ್ ಅವರು ಆನಂದ್ ಹೆಸರನ್ನು ತಳ್ಳಿ ಹಾಕಿದರೆ ಕಾಂಗ್ರೆಸ್ ಸೋಲಿಗೆ ಅವರೇ ಹೊಣೆಯಾಗುತ್ತಾರೆ' ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ಹೇಳಿದ್ದಾರೆ.
ಸಂಪತ್ ರಾಜ್ ಅವರನ್ನು ಅಭ್ಯರ್ಥಿಯಾಗಿ ಬಿಂಬಿಸುವ ಕಾರ್ಯಕ್ರಮಗಳಿಗೆ ಆಗಮಿಸುವಂತೆ ಮತದಾರರ ಮನವೊಲಿಸುವಲ್ಲಿ ಯುವ ಕಾಂಗ್ರೆಸ್ನ ಇಂದಿರಾನಗರ ಬ್ಲಾಕ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ಕಾರ್ಯನಿರತರಾಗಿದ್ದಾರೆ. ಇದಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಯನ್ನು ಲೆಕ್ಕಿಸದೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. 'ಸಿವಿ ರಾಮನ್ನಗರದಿಂದ ಸ್ಥಳೀಯ ಅಭ್ಯರ್ಥಿ ಇದ್ದರೆ ಅನುಕೂಲವಾಗಲಿದೆ. ಅವರಿಗೆ ಮತ ಹಾಕುವಂತೆ ಪರಿಚಿತ ವಲಯಗಳಲ್ಲಿನ ಮತದಾರರನ್ನು ನಾವು ಒತ್ತಾಯಿಸಬಹುದು. ಇದನ್ನು ಪಕ್ಷ ನಿರ್ಧರಿಸಬೇಕು' ಎಂದೂ ಅವರು ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿವೆ.












Click it and Unblock the Notifications