ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಆಮ್ ಆದ್ಮಿಗಳು
ಬೆಂಗಳೂರು, ಫೆಬ್ರವರಿ 18: ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಸಿಲಿಂಡರ್ ಶ್ರಾದ್ಧ ಕಾರ್ಯದ ರೀತಿಯಲ್ಲಿ ಪೂಜೆ ಮಾಡಿ, ಸಿಲಿಂಡರ್ ಉರುಳು ಸೇವೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ಬೆಂಗಳೂರು ಘಟದ ಅಧ್ಯಕ್ಷರಾದ ಮೋಹನ್ ದಾಸರಿ, 'ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಆರು ಬಾರಿ ಗೃಹ ಬಳಕೆಯ ಎಲ್ಪಿಜಿ ಬೆಲೆ ಏರಿಕೆ ಮಾಡಲಾಗಿದ್ದು, ಫೆಬ್ರವರಿ 12ರಂದು ಒಂದೇ ಬಾರಿಗೆ 144.5 ರೂಗಳಷ್ಟು ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ' ಎಂದರು.
ಸಬ್ಸಿಡಿಯಿಂದ ಜನರಿಗೆ ಉಪಯೋಗವಾಗುತ್ತಿದ್ದರೂ, ಬೆಲೆ ಹೆಚ್ಚಳ ಮಾಡಿ ಸಬ್ಸಿಡಿ ಕೊಡುವುದರಿಂದ ಖಾಸಗಿ ಒಡೆತನದ ಮಾಲೀಕರ ಖಜಾನೆ ತುಂಬುತ್ತದೆಯೇ ಹೊರತು, ದೇಶದ ಆರ್ಥಿಕತೆಗೆ ಯಾವ ಉಪಯೋಗವೂ ಇಲ್ಲ ಎಂದು ತಿಳಿಸಿದರು.

ಸ್ಮೃತಿ ಇರಾನಿ ಅಕ್ಕಾ ಎಲ್ಲಿದ್ದೀಯಕ್ಕಾ
'2014ರಲ್ಲಿ ಯುಪಿಎ ಸರ್ಕಾರ LPG ಬೆಲೆಯನ್ನು ಕೇವಲ 11 ರೂಗಳಷ್ಟು ಏರಿಕೆ ಮಾಡಿದ್ದಾಗ, ಬೀದಿಗಿಳಿದು ಸರ್ಕಾರದ ವಿರುದ್ಧ ಸರಣಿ ಹೋರಾಟಗಳನ್ನು ಮಾಡಿದ್ದ ಸಂಸದೆ ಸೃತಿ ಇರಾನಿಯವರು ಇಂದು ತಮ್ಮದೇ ಸರ್ಕಾರ 144.5 ರೂಪಾಯಿಗಳಷ್ಟು ಅಧಿಕ ಮೊತ್ತದ ಬೆಲೆ ಏರಿಕೆ ಮಾಡಿದ್ದರೂ ತುಟಿ ಬಿಚ್ಚದೇ ಕಾಣೆಯಾಗಿದ್ದಾರೆ. ಅವರನ್ನೂ "ಸ್ಮೃತಿ ಇರಾನಿ ಅಕ್ಕಾ ಎಲ್ಲಿದ್ದೀಯಕ್ಕಾ" ಎಂದು ಹುಡುಕಬೇಕಾಗಿದೆ' ಎಂದು ಅವರು ಕುಟುಕಿದರು.

ಬೇಜವಾಬ್ದಾರಿ ಹೇಳಿಕೆ
'ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು "ನಾನು ಈರುಳ್ಳಿ ತಿನ್ನುವುದಿಲ್ಲ, ಬೆಲೆ ಏರಿಕೆ ಇಂದ ನನಗೇನು ಸಮಸ್ಯೆ ಇಲ್ಲ" ಎಂಬರ್ಥದ ಬೇಜವಾಬ್ದಾರಿ ಹೇಳಿಕೆಯನ್ನು ಸಂಸತ್ನಲ್ಲಿಯೇ ಕೊಟ್ಟಿದ್ದರು. ಇಂತಹ ಹೇಳಿಕೆಗಳು ಬಿಜೆಪಿ ಸಂಸದರಿಂದ ಸಾರಾಸಗಟಾಗಿ ಬರುತ್ತಿರುವುದು ದೇಶವನ್ನು ಮುನ್ನಡೆಸಲಾಗದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುತ್ತದೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಹೇಳಿದರು.

ಬಿಎಂಟಿಸಿ ಪ್ರಯಾಣ ದರ ಏರಿಕೆ ಬಿಸಿ
'ರಾಜ್ಯ ಸರ್ಕಾರವು ಹಾಲಿನ ಬೆಲೆ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ, ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎಲ್ಪಿಜಿ ಬೆಲೆ ಹೆಚ್ಚಿಸಿ ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಇದ್ದವರು
ಪ್ರತಿಭಟನೆಯಲ್ಲಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾ ಜಗದೀಶ್ ವಿ ಸದಂ, ಪಕ್ಷದ ಮುಖಂಡರಾದ ರೇಣುಕಾ ವಿಶ್ವನಾಥನ್, ರಾಜಕೀಯ ಚಟುವಟಿಕೆಗಳ ಉಸ್ತುವಾರಿಗಳಾದ ಲಕ್ಷ್ಮೀಕಾಂತ್ ರಾವ್, ಚನ್ನಪ್ಪ ನಲ್ಲೂರು, ಜಗದೀಶ್ ಚಂದ್ರ, ಆಯುಬ್ ಖಾನ್ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications