ತ್ಯಾಗದಿಂದ ಜಗವ ಬೆಳಗಿದ ಆದಿಶಕ್ತಿ ಕನ್ನಿಕಾ ಪರಮೇಶ್ವರಿ ಜಯಂತ್ಯುತ್ಸವ
ಬೆಂಗಳೂರು, ಏಪ್ರಿಲ್ 20: ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಜಯಂತ್ಯುತ್ಸವ ಏಪ್ರಿಲ್ 21ರಿಂದ ಏಪ್ರಿಲ್ 29ರವರೆಗೆ ಮಲ್ಲೇಶ್ವರದ ನಿರಂತರ ಜ್ಞಾನ ಯಜ್ಞ ವೇದಿಕೆಯಲ್ಲಿ ನಡೆಯಲಿದೆ.
ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವರ್ಷದ 365 ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರಗಳಿಂದ ಸೇವೆ ಸಲ್ಲಿಸುವ ಕಲಾ ನೈಪುಣ್ಯತೆಯು ಇತ್ತೀಚೆಗೆ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆರ್ಕಾಡ್ಸ್ ಗೆ ಸೇರ್ಪಡೆಯಾಗಿದೆ. ಕಿರಣ್ ಕುಮಾರ್ ರವರ ಅನನ್ಯ ಸಾಧನೆಯನ್ನು ಗುರುತಿಸಿ ಎರಡು ಗೌರವ ಡಾಕ್ಟರೇಟ್ ಇವರನ್ನು ಅರಸಿ ಬಂದಿವೆ .
ಲೌಕಿಕ ಉನ್ನತ ಪದವಿಯನ್ನು ತೊರೆದು ತಾಯಿ ವಾಸವಿಯ ಸೇವೆ ಮಾಡಲೆಂದೇ ಕಂಕಣಬದ್ಧರಾಗಿ ನಿಂತ ಅರ್ಚಕರು ಇತರಿಗೆ ಮಾದರಿ , ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿರುವ ಅಪೂರ್ವ ದೈವಸನ್ನಿಧಿಗೆ ಬರುವ ಭಕ್ತಕೋಟಿಯ ನೆಮ್ಮದಿಯ ತಾಣ ಇದಾಗಿದೆ.
ವಾಸವಿಯ ಆತ್ಮಸ್ಥೈರ್ಯ ಅನನ್ಯವಾದುದು. ಆತ್ಮ ಮಹಾತ್ಯಾಗಕ್ಕಾಗಿ ಅಗ್ನಿ ಪ್ರವೇಶ ಮಾಡಿದಳು. ಧರ್ಮವನ್ನು ಬಿಟ್ಟುಕೊಟ್ಟು ಐಹಿಕ ಸುಖಭೋಗಗಳನ್ನು ಅನುಭವಿಸುವುದಕ್ಕಿಂತ ಧರ್ಮ ಸಂರಕ್ಷಣೆಗಾಗಿ ನಸುನಗುತ್ತ ಅಗ್ನಿ ದಿವ್ಯದಲ್ಲಿ ಬಂದಾಗ ಆತ್ಮಜ್ಯೋತಿ ಬೆಳೆಸಿದ ಆದಿಶಕ್ತಿಯ ಆದರ್ಶ ಅವತಾರ ಶ್ರೀ ವಾಸವಿ ಕನ್ನಿಕಾಪರಮೇಶ್ವರಿಯದು.
ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿ. ಆಕೆ ಜನಿಸಿದ ವೈಶಾಖ ಶುಕ್ಲದಲ್ಲಿ ದಶಮಿ ಈ ವಾಸವಿ ಕನ್ನಿಕಾಪರಮೇಶ್ವರಿ ಜಯಂತಿ .
ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿ ದುಷ್ಟ ಸಂಹಾರಕ್ಕೆ ಕಾರಣಳಾದ ಪರಮೇಶ್ವರಿ
ಇತಿಹಾಸವೇ ಹಾಗೆ. ಹೆಣ್ಣಿನ ಔನ್ನತ್ಯವನ್ನು ಪ್ರಬಲವಾದ ನಿದರ್ಶನಗಳ ಮೂಲಕ ಸಾರಿ ಸಾರಿ ಹೇಳುತ್ತದೆ. ತ್ರೇತಾಯುಗದಲ್ಲಿ ಸೀತೆ ರಾವಣನನ್ನು ಧಿಕ್ಕರಿಸಿ, ಮೌನ ಪ್ರತಿಭಟನೆಯಿಂದ ಅಶೋಕ ವನದಲ್ಲಿ ಒಂಟಿಯಾಗಿ ಕಳೆದು, ರಾಮಾಯಣದ ಯುದ್ಧಕಾಂಡಕ್ಕೆ ಮುನ್ನುಡಿ ಹಾಡಿ, ಅಸುರ ಸಂಹಾರಕ್ಕೆ ಪ್ರೇರಣೆಯಾದಳು. ದ್ವಾಪರ ಯುಗದಲ್ಲಿ ದ್ರೌಪದಿ ಛಲ ಮತ್ತು ಹೋರಾಟ ವ್ಯಕ್ತಿತ್ವದಿಂದ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿ ದುಷ್ಟ ಸಂಹಾರಕ್ಕೆ ಕಾರಣಳಾದಳು.
ವ್ಯಾಪರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯವೈಶ್ಯರ ಕುಲದೇವತೆ ಕನ್ನಿಕಾಪರಮೇಶ್ವರಿ. 'ವಾಸವಿ' ಲೋಕಮಾತೆಯಾಗಿ ಬೆಳಗಿದ ಅನುಪಮ ತ್ಯಾಗಶೀಲೆ, ಸತ್ಯ ಅಹಿಂಸೆಗಳ ಸಾಕಾರಮೂರ್ತಿ, ಸ್ಕಂದ ಪುರಾಣದಲ್ಲಿ ವಾಸವಿ ಚರಿತ್ರೆಯು ಉಲ್ಲೇಖಗೊಂಡಿದೆ.
ಯೌವನಕ್ಕೆ ಕಾಲಿಟ್ಟಾಗ ಸಂಸಾರ ಸುಖ ತ್ಯಾಗ
ವಾಸವಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿ ಹೆಚ್ಚು. ಲೌಕಿಕವಾದ ಭೋಗ ಭಾಗ್ಯಗಳಲ್ಲಿ ಅನಾಸಕ್ತಿ, ಯೌವ್ವನಕ್ಕೆ ಕಾಲಿರಿಸಿದರೂ ಯಾವುದೇ ರಾಜಕುಮಾರನ ಕೈಹಿಡಿದು ಸುಖ ಸಂಸಾರವನ್ನು ಸಾಗಿಸುವ ಕನಸು ಕಾಣದೆ ಏಕಾಂತ ವ್ಯಾಕುಲತೆ ಅಲೌಕಿಕ ಚಿಂತನೆಗಳಲ್ಲಿಯೇ ಮುಳುಗಿದಳು. ಹೀಗಿರಲು ಶಿವನು ಕನಸಿನಲ್ಲಿ ಕಂಡು 'ನೀನು ಪಾರ್ವತಿಯ ಅಂಶ. ಮಾನವ ಕುಲಕೋಟಿಯನ್ನು ಧರ್ಮಮಾರ್ಗದಲ್ಲಿ ನಡೆಸಲು ಜನಿಸಿದ್ದೀಯೇ. ಅಗ್ನಿ ಮುಖದಿಂದ ಹುಟ್ಟಿದ ನೀನು ಅಗ್ನಿಮುಖದಲ್ಲಿಯೇ ನನ್ನನ್ನು ಸೇರುತ್ತಿಯೇ. ಮಾನವಳಾಗಿ ಜನಿಸಿದ ನಿನ್ನ ಅವತಾರ ಸಾರ್ಥಕವಾಗಬೇಕಾದರೆ ಸಂಶಯಗ್ರಸ್ತ ಜನರ ಮಂಜಿನ ಪೊರೆ ಕಳಚಿ ಸನ್ಮಾರ್ಗದಲ್ಲಿ ನಡೆಸುವ ಹೊಣೆ ನಿನ್ನದು' ಎಂದು ಹೇಳಿ ಅಂತರ್ಧಾನನಾಗುತ್ತಾನೆ.
ಪೆನುಗೊಂಡಕ್ಕೆ ವಿಜಯಾತ್ರೆ ಕೈಗೊಂಡ ವಿಷ್ಣುವರ್ಧನ
ಒಮ್ಮೆ ವಿಜಯ ಯಾತ್ರೆ ಕೈಗೊಂಡು ಪೆನುಗೊಂಡಕ್ಕೆ ಬರುವ ವಿಷ್ಣುವರ್ಧನ ಮಹಾರಾಜ, ಅಪರಿಮಿತ ಸೌಂದರ್ಯವತಿ ವಾಸವಿಯನ್ನು ಕಂಡು ಅವಳಲ್ಲಿ ಅನುರಕ್ತನಾಗುತ್ತಾನೆ. ವಾಸವಿಯಷ್ಟು ವಯೋಮಾನದ ಮಗನಿದ್ದರೂ ಅವಳನ್ನು ವಿವಾಹವಾಗಲು ಅಪೇಕ್ಷಿಸುತ್ತಾನೆ. ವರ್ಣಾಂತರ ಮತ್ತು ವಯಸ್ಸಿನ ಅಂತರವಿದ್ದುದರಿಂದ ಕುಸುಮ ಶ್ರೇಷ್ಠಿಯು ವಿಷ್ಣುವರ್ಧನನಿಗೆ ಮಗಳನ್ನು ಕೊಡಲು ನಯವಾಗಿ ನಿರಾಕರಿಸುತ್ತಾನೆ.
'ವಾಸವಿ ಸಾಮಾನ್ಯ ಕನ್ಯೆಯಲ್ಲ. ಇಂದ್ರಿಯ ನಿಗ್ರಹದಿಂದ ಮನಸ್ಸು ಅಂತಃಕರಣಗಳೆಲ್ಲಾ ಪರಿಶುದ್ಧವಾಗಿದೆ. ತಪಸ್ಸಿನ ತಾಪದಿಂದ ದೇಹ ಪ್ರಜ್ವಲಿಸುತ್ತದೆ. ಅಹಂಭಾವ ಸಂಪೂರ್ಣವಾಗಿ ಅಸ್ತಮಿಸಿ ಸಾಧಕಳಾಗಿ ಸಿದ್ಧಿ ಹೊಂದಿದವಳನ್ನು ಬಯಸುವುದು ಮಹಾಪಾಪ ಎಂದು ಎಚ್ಚರಿಸುತ್ತಾರೆ. ಆದರೆ ಯಾರು ಎಷ್ಟು ಹೇಳಿದರೂ ಚಕ್ರವರ್ತಿ ಹಠ ಬಿಡಲಿಲ್ಲ.
ವಿಷ್ಣುವರ್ಧನನು ಯುದ್ಧ ಮಾಡಿ, ವಾಸವಿ ವಿವಾಹವಾಗಲು ಸಿದ್ಧತೆ ನಡೆಸಿದನು. ಆಗ ವಾಸವಿ ತೆಗೆದುಕೊಂಡ ನಿರ್ಧಾರ ಮಾತ್ರ ಅಪ್ರತಿಮ, ಯುದ್ಧಕ್ಕೆ ಅವಕಾಶ ಕೊಡಲಿಲ್ಲ. ಕೇವಲ ತನ್ನೊಬ್ಬಳ ಹಿತಕ್ಕಾಗಿ ಮುಗ್ಧ ಜನರ ಪ್ರಾಣ ಹಾನಿಯಾಗುತ್ತದೆ ಮತ್ತೆ ಯುದ್ಧ ನಡೆದರೆ ಅಪಾರ ಹಾನಿಯಾಗುತ್ತದೆ ಎಂದು ನಿರ್ಧರಿಸಿದಳು.
ಯುದ್ಧ ಬಿಟ್ಟು ಶಾಂತಿ ಮಂತ್ರ ಬೋಧಿಸಿದ ಆತ್ಮಜ್ಯೋತಿ
ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮುಗ್ಧ ಪ್ರಜೆಗಳಿಗೆ ಅಪಾರ ಹಾನಿಯುಂಟು ಮಾಡುವ ಈ ಯುದ್ಧವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಚಿಂತಿಸಿದ ವಾಸವಿ ಅಗ್ನಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಂಡಳು. ಅಸಂಖ್ಯಾತ ಜೀವಗಳಿಗೆ ಒಳಿತಾಗುವುದಾದರೆ ತನ್ನ ಆತ್ಮಾಹುತಿ ಯಾಕಾಗಬಾರದು ಎಂದು ಆ ಷೋಡಷಿ ಯೋಚಿಸಿದಳು.
ವಾಸವಿಯ ಆತ್ಮಸ್ಥೈರ್ಯ ಅನನ್ಯವಾದುದು. ಆತ್ಮ ಮಹಾತ್ಯಾಗಕ್ಕಾಗಿ ಅಗ್ನಿ ಪ್ರವೇಶ ಮಾಡಿದಳು. ಧರ್ಮವನ್ನು ಬಿಟ್ಟುಕೊಟ್ಟು ಐಹಿಕ ಸುಖಭೋಗಗಳನ್ನು ಅನುಭವಿಸುವುದಕ್ಕಿಂತ ಧರ್ಮ ಸಂರಕ್ಷಣೆಗಾಗಿ ನಸುನಗುತ್ತ ಅಗ್ನಿ ದಿವ್ಯದಲ್ಲಿ ಬಂದಾಗ ಆತ್ಮಜ್ಯೋತಿ ಬೆಳೆಸಿದ ಆದಿಶಕ್ತಿಯ ಆದರ್ಶ ಅವತಾರ ಶ್ರೀ ವಾಸವಿ ಕನ್ಯಕಾಪರಮೇಶ್ವರಿಯದು. ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿ. ಆಕೆ ಜನಿಸಿದ ವೈಶಾಖ ಶುಕ್ಲದಲ್ಲಿ ದಶಮಿ 'ಈ ವಾಸವಿ ಕನ್ನಿಕಾಪರಮೇಶ್ವರಿ ಜಯಂತಿ' .
ಭರದಿಂದ ಸಾಗಿವೆ ಕನ್ನಿಕಾ ಪರಮೇಶ್ವರಿ ಜಯಂತಿಗೆ ಸಿದ್ಧತೆ
ನಗರದ ಮಲ್ಲೇಶ್ವರಂನ ಆರ್ಯವೈಶ್ಯ ಸಂಘದಲ್ಲಿ ಅದ್ದೂರಿಯಾಗಿ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆ ಮಲ್ಲೇಶ್ವರ 8ನೇ ಕ್ರಾಸ್ ನ ಈ ದೇಗುಲ ಸ್ಥಾಪನೆಯಾಗಿ ಅಷ್ಟದಶಮಾನಗಳು ಸಂದಿವೆ .ಕೀರ್ತಿ ಶೇಷ ಸೂತ್ರಂ ಸುಬ್ರಹಣ್ಯ ಶಾಸ್ತ್ರೀ ವಂಶಸ್ಥ ಡಾ. ವೇ. ಮೂ. ಸೂತ್ರ ನಾಗರಾಜ ಶಾಸ್ತ್ರೀ ಮತ್ತು ಅಲಂಕಾರ ನಿಪುಣ ಡಾ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ವಿದ್ಯುಕ್ತ ಪೂಜಾ ಕೈಂಕರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ.