ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್ ವಿರುದ್ಧ ಕನ್ನಡಿಗರ ಆಕ್ರೋಶ; ಬಂಧನಕ್ಕೆ ಆಗ್ರಹ
ಕನ್ನಡಿಗನ ಮೇಲೆ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಎಂದು ನನಗೆ ಹೊಡೆದಿದ್ದಾರೆ ಎಂದು ಕತೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಬಯಲಾಗಿದೆ. ಶಿಲಾದಿತ್ಯ ಬೋಸ್ ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬೀಳುತ್ತಿದ್ದಂತೆ ಕನ್ನಡಿಗರು ಸಿಡಿದೆದ್ದಿದ್ದಾರೆ.
ತಾನೇ ಹೊಡೆದದ್ದು ಮಾತ್ರವಲ್ಲದೆ, ಕನ್ನಡಿಗರು, ಬೆಂಗಳೂರಿನ ಹೆಸರನ್ನು ಹಾಳು ಮಾಡಲು ಕನ್ನಡ ಮಾತನಾಡದ್ದಕ್ಕೆ ಹಲ್ಲೆ ಮಾಡಿದ್ದರು ಎಂದಿದ್ದ ಶಿಲಾದಿತ್ಯ ಬೋಸ್ ಇದೀಗ ಕೋಲ್ಕತಾಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಡಿಆರ್ ಡಿಒ ಅಧಿಕಾರಿಗಳು ನೀಡಿದ ದೂರಿನ ಮೇಲೆ ಬೈಕ್ ಸವಾರನನ್ನು ಬಂಧಿಸಲಾಗಿತ್ತು, ಆದರೆ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ಬಳಿಕ ಕನ್ನಡಪರ ಹೋರಾಟಗಾರರು ಬೈಕ್ ಸವಾರನ ಪರ ನಿಂತಿದ್ದು, ಹಲ್ಲೆ ಮಾಡಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ.

ಸುಳ್ಳು ದೂರು ದಾಖಲು
ಕನ್ನಡಿಗನ ಮೇಲೆಯೇ ಹಲ್ಲೆ ಮಾಡಿದ್ದರೂ ಸ್ಥಳೀಯರು ನನ್ನ ಪತ್ನಿಗೆ ನಿಂದಿಸಿದ್ದು ಮಾತ್ರವಲ್ಲದೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಶಿಲಾದಿತ್ಯ ಬೋಸ್ ಆರೋಪಿಸಿದ್ದ. ಆತನ ಪತ್ನಿಯ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ದೂರು ದಾಖಲು ಮಾಡಲಾಗಿದೆ.
ನಮ್ಮ ನಾಡು ನಮ್ಮ ಆಳ್ವಿಕೆ ಬಳಗ ಇದೀಗ ಕನ್ನಡಿಗ ಬೈಕ್ ಸವಾರನ ಪರವಾಗಿ ನಿಂತಿದ್ದು ನ್ಯಾಯ ಕೊಡಿಸುವ ಸಂಕಲ್ಪ ಮಾಡಿದೆ. ಬೈಕ್ ಸವಾರನ ಕಡೆಯಿಂದ ವಿಂಗ್ ಕಮಾಂಡರ್ ಮತ್ತು ಆತನ ಪತ್ನಿ ವಿರುದ್ಧ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಶಿಲಾದಿತ್ಯ ಬೋಸ್ಗೆ ನೋಟಿಸ್ ಕೊಟ್ಟಿದ್ದಾರೆ.
ಐಎಎಫ್ ಅಧಿಕಾರಿಗಳು ಕೊಟ್ಟಿರುವ ದೂರಿಗೂ ಮತ್ತು ನಡೆದಿರುವ ಘಟನೆಗೂ ಸಾಕಷ್ಟು ವ್ಯತ್ಯಾಸವಿದ್ದು, ಅಮಾಯಕರ ಮೇಲೆ ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಕನ್ನಡಪರ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಧಿತನಾಗಿರುವ ಕನ್ನಡಿಗ ಬೈಕ್ ಸವಾರನಿಗೆ ಸ್ಟೇಷನ್ ಬೇಲ್ ಸಿಗುವ ಸಾಧ್ಯತೆ ಕಡಿಮೆ ಇದ್ದು ಮಂಗಳವಾರ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.
ಯಾವುದೋ ಒಂದು ಘಟನೆಯನ್ನು ಇಟ್ಟುಕೊಂಡು ಕನ್ನಡ, ಕನ್ನಡಿಗರ ಮೇಲೆ ವಿಷ ಕಾರುವಂತೆ ಮಾಡುವ ಕೆಲಸವನ್ನು ಕೆಲವು ಸೋಷಿಯಲ್ ಮೀಡಿಯಾ ಖಾತೆಗಳು ನಿರಂತರವಾಗಿ ಮಾಡುತ್ತಿವೆ. ಘಟನೆಯ ಸತ್ಯಾಸತ್ಯತೆ ತಿಳಿಯುವ ಮೊದಲೇ ತಾವೇ ಎಲ್ಲಾ ಕಂಡವರಂತೆ ಕನ್ನಡಿಗರ ಮೇಲೆ ವಿಷ ಕಾರುವ ಘಟನೆಗಳು ಇದೇ ಮೊದಲಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡಿ ಎಂದು ಕೇಳುವುದೇ ರಾಷ್ಟ್ರದ್ರೋಹ ಎನ್ನುವಂತೆ ಕೆಲವು ಹಿಂದಿ ಬೆಂಬಲಿತ ಸೋಷಿಯಲ್ ಮೀಡಿಯಾ ಖಾತೆಗಳು ಬಿಂಬಿಸುತ್ತವೆ.
ಈ ಘಟನೆಯಲ್ಲೂ ಇದನ್ನೇ ಮಾಡಲು ಸಾಕಷ್ಟು ಪ್ರಯತ್ನ ನಡೆದಿತ್ತು ಆದರೆ ಸಿಸಿಟಿವಿ ದೃಶ್ಯಾವಳಿಗಳು ಹೊರಬರುತ್ತಿದ್ದಂತೆ ಎಲ್ಲರೂ ಮೌನವಾಗಿದ್ದಾರೆ. ಸುಮ್ಮನೆ ಆರೋಪ ಮಾಡಿದವರ ಮೇಲೆ ಕನ್ನಡಿಗರ ಆಕ್ರೋಶ ಹೆಚ್ಚಾಗಿದೆ.












Click it and Unblock the Notifications