ನಟ ರವಿಚಂದ್ರನ್ ಪುತ್ರನ ಸಿನ್ಮಾ ಶೂಟಿಂಗ್ ವೇಳೆ ನಟಿ ಸಾವು
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದೆ. ಮಹಿಳಾ ಜ್ಯೂನಿಯರ್ ಆರ್ಟಿಸ್ಟ್ ಒಬ್ಬರ ಶವ ಪತ್ತೆಯಾಗಿದೆ.
ಬೆಂಗಳೂರು, ಜನವರಿ 09 : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದೆ. ಮಹಿಳಾ ಜ್ಯೂನಿಯರ್ ಆರ್ಟಿಸ್ಟ್ ಒಬ್ಬರ ಶವ ಪತ್ತೆಯಾಗಿದೆ. ಚಿತ್ರೀಕರಣದ ವೇಳೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ತಮಿಳಿನ ಯಶಸ್ವಿಯಾದ ಧನುಷ್ ಅಭಿನಯದ 'ವೇಲೈ ಇಲ್ಲಾದ ಪಟ್ಟಧಾರಿ' (ವಿಐಪಿ) ಚಿತ್ರ ಕನ್ನಡ ರಿಮೇಕ್ ನಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹೀರೋ ಆಗಿದ್ದಾರೆ.

ನಂದಕಿಶೋರ್ ನಿರ್ದೇಶಿಸುತ್ತಿರುವ 'ವಿಐಪಿ' ಚಿತ್ರದ ಶೂಟಿಂಗ್, ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಬಳಿ ನಡೆಯುವಾಗ ಈ ದುರಂತ ಸಂಭವಿಸಿದೆ.
ಸಿವಿಲ್ ಇಂಜಿನಿಯರ್ ಆಗಿರುವ ಹೀರೋ ಎಂಟ್ರಿ ಸೀನ್ ಚಿತ್ರೀಕರಣವನ್ನು ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಡೆಸಲಾಗುತ್ತಿತ್ತು. ಹೊಡೆದಾಟ ಸೀನ್ ಶೂಟಿಂಗ್ ಮುಗಿಸಿದ ಚಿತ್ರತಂಡ ಪ್ಯಾಕಪ್ ಮಾಡಿ ತೆರಳಿದೆ.

ಆ ನಂತರ ಕಟ್ಟಡ ಕಾಮಗಾರಿ ಕೂಲಿಗಳ ಪಾತ್ರ ನಿರ್ವಹಿಸುತ್ತಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಳ ಲೆಕ್ಕ ಹಾಕುವಾಗ ಒಬ್ಬರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ನಂತರ ಹುಡುಕಾಟ ನಡೆಸಿದಾಗ ಕಟ್ಟಡದ ಸಂದಿಯೊಂದರಲ್ಲಿ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನೆ ನಡೆದಿದ್ದು ಹೇಗೆ? ಶೂಟಿಂಗ್ ಸಂದರ್ಭದಲ್ಲೇ ಸಾವು ಸಂಭವಿಸಿತೇ? ಶೂಟಿಂಗ್ ನಂತರ ಆಕೆ ಕಟ್ಟಡದ ಬಳಿ ಇದ್ದಿದ್ದು ಏಕೆ? ಎಂಬ ಪ್ರಶ್ನೆಗಳು ಎದ್ದಿವೆ.












Click it and Unblock the Notifications