ವಿದ್ಯುತ್ ಇಲಾಖೆಯಲ್ಲಿ ಕನ್ನಡ ನಿರ್ಲಕ್ಷ್ಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ
ಬೆಂಗಳೂರು, ಫೆಬ್ರವರಿ 06 : ರಾಜ್ಯ ವಿದ್ಯುತ್ ಇಲಾಖೆಯಲ್ಲಿನ ನೇಮಕದಲ್ಲಿ ಕನ್ನಡ ನಿರ್ಲಕ್ಷ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್,ಜಿ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ರೂಪಿಸಿರುವ ನಿಯಮಗಳನ್ವಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎ ಮತ್ತು ಬಿ ವೃಂದದ ಅಧಿಕಾರಿಗಳ ವಿವರಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ಅಂತೆಯೇ ಪ್ರಸ್ತುತ ಇರುವ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಕನ್ನಡ ಅಭ್ಯರ್ಥಿಗಳಿಗೆ ಮೊದಲಾದ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಸೂಚಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿನ ಎ ಮತ್ತು ಬಿ ವೃಂದದ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದರಿಂದ ಹೊರರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟಂತಾಗಿದೆ.
ಪೂರ್ವಭಾವಿ ಕನ್ನಡ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು 150 ಅಂಕಗಳಿಗೆ ಕೇವಲ 50 ಅಂಕಗಳು ಪಡೆದರೂ ಉತ್ತೀರ್ಣರಾಗುತ್ತಿರುವುದರಿಂದ ಕನ್ನಡ ಭಾಷೆ ಸಂಪೂರ್ಣವಾಗಿ ಬಾರದವರು ಆಯ್ಕೆಯಾಗುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ.
ಅಲ್ಲದೆ ಸಹಾಯಕ ಅಭಿಯಂತರ ಹುದ್ದೆಗೆ ಬಿಇ ಆದವರನ್ನು ನೇಮಕ ಮಾಡಲಾಗುವುದಾಗಿ ಅಧಿಸೂಚನೆಯಲ್ಲಿದ್ದರೂ ಬಿ-ಟೆಕ್ ಉತ್ತೀರ್ಣರಾದವರನ್ನೂ ಆಯ್ಕೆ ಮಾಡುತ್ತಿರುವುದರಿಂದ ಸಹ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಒದಗಿಸಿದಂತಾಗಿದ್ದು ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿರುವುದಾಗಿ ಸಹ ಪ್ರಾಧಿಕಾರಕ್ಕೆ ಮೌಖಿಕ ದೂರು ಬಂದಿವೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿದ್ದು ಇಲ್ಲಿನ ಎಲ್ಲಾ ವೃಂದಗಳಲ್ಲಿ ಕನ್ನಡಿಗರಿಗೆ ಅವಕಾಶ ಒದಗಿಸುವುದು ಸೂಕ್ತವಾಗಿರುತ್ತದೆ. ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳಲ್ಲಿನ ಅಧೀನ/ಅಂಗ ಸಂಸ್ಥೆಗಳು ತಮ್ಮ ರಾಜ್ಯದವರನ್ನೇ ನೇಮಿಸಿಕೊಳ್ಳುತ್ತಿದ್ದು ಹೊರರಾಜ್ಯದವರಿಗೆ ಯಾವುದೇ ಅವಕಾಶ ನೀಡುತ್ತಿಲ್ಲ.
ಅದರಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕರ್ನಾಟಕದೊಳಗೆ ವ್ಯವಹರಿಸುತ್ತಿದ್ದು, ಅಭಿಯಂತರರಾದಿಯಾಗಿ ಎಲ್ಲಾ ವೃಂದಗಳಿಗೆ ಕನ್ನಡದವರನ್ನೇ ಭರ್ತಿ ಮಾಡುವುದರಿಂದ ಜನರೊಂದಿಗೆ ವ್ಯವಹರಿಸಲು ಮತ್ತು ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.