ಅಶ್ವಿನಿ ಅವರ ಬೆಳಕು ಶಾಲೆ ಜೂ.6ಕ್ಕೆ ಲೋಕಾರ್ಪಣೆ
ಬೆಂಗಳೂರು, ಜೂನ್ 3 : ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿರುವ ಅಂಧ ಸಾಧಕಿ ಅಶ್ವಿನಿ ಅಂಗಡಿ ಅವರು ದೃಷ್ಟಿಹೀನ ಮಕ್ಕಳಿಗಾಗಿ ತೆರೆಯುತ್ತಿರುವ ಉಚಿತ ಶಾಲೆ 'ಬೆಳಕು' ಕೋಣನಕುಂಟೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಈ ಬೆಳಕು ಶಾಲೆಯನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಶ್ವಿನಿ ಅಂಗಡಿ, ಬೆಳಕು ಶಾಲೆಯ ಉದ್ಘಾಟನೆ ಬಗ್ಗೆ ಮಾಹಿತಿ ನೀಡಿದ್ದು, ಜೂನ್ 6ರಂದು ಕೋಣನಕುಂಟೆಯ ಸುಪ್ರಜನಗರ 7ನೇ ಕ್ರಾಸ್ ನಲ್ಲಿರುವ ಶಾಲೆಗಾಗಿ 'ಅಶ್ವಿನಿ ಅಂಗಡಿ ಟ್ರಸ್ಟ್' ಹಾಗೂ 'ಬೆಳಕು ಅಕಾಡೆಮಿ'ಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಜೂ.6ರಂದು ಶಾಲೆಯನ್ನು ಶಿಕ್ಷಣ ತಜ್ಞೆ ರಾಧಾ ಕುಲಕರ್ಣಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಲಿದ್ದಾರೆ ಎಂದು ಅಶ್ವಿನಿ ಅಂಗಡಿ ಹೇಳಿದರು. ಐದರಿಂದ 12 ವರ್ಷದವರೆಗಿನ ಮಕ್ಕಳಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ವರ್ಷಕ್ಕೆ ಮೂವತ್ತು ವಿದ್ಯಾರ್ಥಿಗಳ ಮಿತಿಯಲ್ಲಿ ಮಾತ್ರ ತರಗತಿಗಳನ್ನು ನಡೆಸಲಾಗುವುದು ಎಂದು ಹೇಳಿದರು.
ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಂಡ ಅಶ್ವಿನಿ ಅಂಗಡಿ ಅವರು, "ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಕೊರತೆ ಇತ್ತು. ಈ ಕೊರತೆ ಮುಂದಿನ ಪೀಳಿಗೆಯನ್ನು ಕಾಡಬಾರದೆಂಬ ಉದ್ದೇಶದಿಂದ ಈ ಶಾಲೆ ಆರಂಭಿಸುತ್ತಿದ್ದೇನೆ" ಎಂದರು.[ಅಶ್ವಿನಿ ಅಂಗಡಿ ಯಾರು?]
ತಾಂತ್ರಿಕವಾಗಿ ಪರಿಣತಿ ಹೊಂದಿರುವ ಶಿಕ್ಷಕರಿಂದ ಮಕ್ಕಳಿಗೆ ಮಾರ್ಗದರ್ಶನ ನೀಡುವ ಉದ್ದೇಶವಿದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಹಣದ ಅಗತ್ಯವಿದ್ದು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಂದ ಹಣಕಾಸಿನ ನೆರವು ನಿರೀಕ್ಷಿಸುತ್ತಿರುವುದಾಗಿ ಅಶ್ವಿನಿ ಅಂಗಡಿ ತಿಳಿಸಿದರು.
ಬೆಳಕು ಶಾಲೆಗೆ ಸಹಾಯ ಮಾಡಲು ಇಚ್ಚಿಸುತ್ತಿರುವ ದಾನಿಗಳು ಕಾರ್ಪೊರೆಷನ್ ಬ್ಯಾಂಕ್ ಅಕೌಂಟ್ ನಂ : 014401601000930, ಐಎಫ್ಎಸ್ಸಿ ಕೋಡ್ : ಸಿಒಆರ್ಪಿ 00144, ಐಎನ್ಆರ್ಪಿ ಕೋಡ್: 044077 ಗೆ ತಮ್ಮ ದೇಣಿಗೆ ನೀಡಬಹುದಾಗಿದೆ.












Click it and Unblock the Notifications