ಕಡಲೆಕಾಯಿ ಪರಿಷೆ: 10 ವರ್ಷದ ಬಳಿಕ 'ಬಸವಣ್ಣನ ತೆಪ್ಪೋತ್ಸವ'ದ ಮೆರಗು
ಬೆಂಗಳೂರು, ನವೆಂಬರ್ 22: ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇದೀಗ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಪರಿಷೆ ಹಿನ್ನೆಲೆಯಲ್ಲಿ ಬಸವನಗುಡಿಗೆ ಹೊಂದಿಕೊಂಡಿರುವ ಕೆರೆಯಲ್ಲಿ ಹತ್ತು ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನಡೆಯಿತು.
ಬಸವನಗುಡಿಗೆ ಹೊಂದಿಕೊಂಡಂತಿರುವ ಚಾಮರಾಜಪೇಟೆ ವ್ಯಾಪ್ತಿಯ ಕೆಂಪಾಂಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವವು ಸೋಮವಾರ ನಡೆಯಿತು. ಇದಕ್ಕು ಮೊದಲು ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಸದ ತೇಜಸ್ವಿಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರು ತೆಪ್ಪೋತ್ಸವ ಉದ್ಘಾಟಿಸಿದರು.
Kadalekai Parishe 2022: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿ ತೆಪ್ಪೋತ್ಸವ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಂತು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. ಹೂಗಳಿಂದ ವಿಶೇಷ ಪೂಜೆ ನೆರವೇರಿದ ಬಳಿಕ ತೆಪ್ಪೋತ್ಸವದಲ್ಲಿ ನಂದಿ ವಿಗ್ರಹ ರಾರಾಜಿಸಿತು. ನೆರೆದಿದ್ದ ಸಹಸ್ರಾರು ಜನರು ಪ್ರಾರ್ಥನೆ ಸಲ್ಲಿಸಿದರು.
ತೆಪ್ಪದಲ್ಲಿ ಉತ್ಸವ ಮೂರ್ತಿ ನಂದಿ, ತೇರಿನ ರೀತಿಯಲ್ಲಿ ಮಾಡಲಾಗಿದ್ದ ದೇವರ ಮಂಟಪವನ್ನು ತರಹೇವಾರಿ ಹೂಗಳಿಂದ ಸಿದ್ದಗೊಳಿಸಲಾಗಿತ್ತು. ಅದರ ಮುಂದೆ ನಂದಿ ವಿಗ್ರಹನಿಟ್ಟು ಉತ್ಸವ ನಡೆಸಲಾಯಿತು. ದಶಕದ ಹಿಂದೆ ಇದೇ ರೀತಿ ತೆಪ್ಪೋತ್ಸವ ಜರುಗುತ್ತಿತ್ತು. ಆದರೆ ಮಳೆ ಇಲ್ಲದೇ ಕೆರೆ ತುಂಬಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಕೆರೆ ತುಂಬಿಕೊಂಡಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ತೆಪ್ಪೋತ್ಸವಕ್ಕೆ ನಿರ್ಧರಿಸಿತು.
ಬುಧವಾರದವರೆಗೆ ಕಡಲೆಕಾಯಿ ಪರಿಷೆ
ಭಾನುವಾರ ಆರಂಭವಾದ ಪರಿಷೆಯಲ್ಲಿ ಈವರೆಗೂ ಜನಸಾಗರವೇ ಕಂಡು ಬರುತ್ತಿದೆ. ಸೋಮವಾರ ಸಂಜೆ ನಂತರ ನಡೆದ ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಜನರು ತಂಡೋಪತಂಡವಾಗಿ ಕೆರೆಯತ್ತ ಆಗಮಿಸಿದರು. ಇದಕ್ಕು ಮೊದಲು ದೊಡ್ಡಗಣೇಶ ಗುಡಿ ಸುತ್ತಮುತ್ತ ಕಡಲೆಕಾಯಿ ಪರಿಷೆಯಲ್ಲಿ ದಿನ ವಿಡಿ ಸುತ್ತಾಡಿದರು. ಹುರಿದ ಹಾಗೂ ಹಸಿ ಕಡಲೆಕಾಯಿ ಸವಿದರು. ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್ ಕಾಲೋನಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ ದಂಡೆ ಕಂಡು ಬಂತು.
ಕೊರೋನಾ ಕಾಟದಿಂದ ಕಳೆಗುಂದಿದ್ದ ಕಡಲೆಕಾಯಿ ಪರಿಷೆಗೆ ಈ ವರ್ಷ ಮೆರೆಗು ತಂದಿದೆ. ಲಕ್ಷಾಂತರ ಜನ ಪರಿಷೆಗೆ ಆಗಮಿಸಿದ್ದಾರೆ. ಹತ್ತಾರು ಜಿಲ್ಲೆಗಳು, ನೆರೆ ರಾಜ್ಯಗಳಿಂದ ಕಡಿಲೆಕಾಯಿ ಮೂಟೆಗಳು ಬಸವನಗುಡಿಗೆ ಬಂದಿವೆ. ಜನ ಮುಗಿಬಿದ್ದು ಖರೀದಿಸಿದ್ದಾರೆ. ನವೆಂಬರ್ 21ರಂದು ಆರಂಭವಾದ ಈ ಪರಿಷೆ ಬುಧವಾರ ನವೆಂಬರ್ 23ರ ವರೆಗೆ ನಡೆಯಲಿದೆ.