ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುತ್ತೇವೆ: ಜೆಡಿಎಸ್
ಬೆಂಗಳೂರು: ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆ ಜೊತೆಗೆ ಮಧ್ಯ ಕರ್ನಾಟಕದ ರೈತರಿಗೂ ಆಶ್ವಾಸನೆ ಕೊಟ್ಟಿದೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ, ರೈತರಿಗೆ ಉಪಯೋಗ ಮಾಡುವ ಭರವಸೆ ನೀಡಲಾಗಿದೆ. ಹಾಗಾದರೆ ಜೆಡಿಎಸ್ ಭದ್ರಾ ಮೇಲ್ದಂಡೆ ಬಗ್ಗೆ ನೀಡಿರುವ ಆಶ್ವಾಸನೆ ಏನು? ಎಂಬುದನ್ನು ಇಲ್ಲಿ ತಿಳಿಯೋಣ.
ಕೃಷ್ಣಾ ಮೇಲ್ದಂಡೆ ಯೋಜನೆ ಉತ್ತರ ಕರ್ನಾಟಕ ಭಾಗದ ರೈತರಿಗೆ ಹೇಗೆ ನೆರವಾಗಲಿದೆಯೋ, ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕ ಭಾಗದ ರೈತರು ಕೂಡ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ. ಇದೀಗ ಜೆಡಿಎಸ್ ತನ್ನ ಪ್ರಣಾಳಿಕೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯನ್ನ ಪೂರ್ಣಗೊಳಿಸುವ ಆಶ್ವಾಸನೆ ನೀಡಿದೆ. ಜೊತೆಗೆ ಇದರಿಂದ ರೈತರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದೆ. ಹಾಗಾದರೆ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಜೆಡಿಎಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಯಾವುದು? ಎಂಬುದನ್ನ ಇಲ್ಲಿ ತಿಳಿಯೋಣ.

25,000 ಕೋಟಿ ರೂಪಾಯಿ ಅಗತ್ಯ
ಜೆಡಿಎಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವಂತೆ, ಭದ್ರಾ ಮೇಲ್ದಂಡೆ ಯೋಜನೆ ಅಡಿ 29.90 TMC ನೀರನ್ನು ಬಳಸಿಕೊಂಡು ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 5.57 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ 367 ಕೆರೆಗಳನ್ನ ತುಂಬಿಸಿ ಈ ಭಾಗದ ಕುಡಿವ ನೀರಿನ ಬವಣೆಯನ್ನ ಬಗೆಹರಿಸಲು ಉದ್ದೇಶಿಸಲಾಗಿದೆ. ಯೋಜನೆಯ ಅಂದಾಜು ವೆಚ್ಚ 25 ಸಾವಿರ ಕೋಟಿ ರೂ.ಗಳಾಗಿದ್ದು, ಇದುವರೆಗೂ 5500 ಕೋಟಿ ರೂ. ವೆಚ್ಚ ಮಾಡಲಾಗಿದೆ.
4 ವರ್ಷದಲ್ಲಿ ಯೋಜನೆ ಕಂಪ್ಲೀಟ್!
ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಿ 5,300 ಕೋಟಿ ರೂ.ಗಳ ಅನುದಾನವನ್ನುಒದಗಿಸುವುದಾಗಿ ಕೇಂದ್ರ ಸರ್ಕಾರವು ಭರವಸೆ ನೀಡಿದ್ದಾದರೂ ಇದು ಇನ್ನೂ ಕಾರ್ಯಗತಗೊಳ್ಳಬೇಕಾಗಿದೆ. ಈ ಯೋಜನೆಗೆ ರಾಜ್ಯಸರ್ಕಾರ ವಾರ್ಷಿಕವಾಗಿ ಸರಾಸರಿ 2,000 ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದು, ಅನುದಾನವನ್ನು 5,000 ಕೋಟಿ ರೂ.ಗಳಿಗೆ ಏರಿಸಿ ಮುಂದಿನ 4 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಎಂದು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಈ ಮೂಲಕ ಜೆಡಿಎಸ್ ಪ್ರಣಾಳಿಕೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೂ ಪ್ರಾಮುಖ್ಯತೆ ನೀಡಲಾಗಿದೆ.
ಉತ್ತರ ಕರ್ನಾಟಕಕ್ಕೂ ಆಶ್ವಾಸನೆ
ಇದಿಷ್ಟೇ ಅಲ್ಲ, ಕೃಷ್ಣಾ ಜಲವಿವಾದ ನ್ಯಾಯಮಂಡಳಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಗೆ 303 TMC ಹಂಚಿಕೆಯಾಗಿದೆ. ಇದರಲ್ಲಿ ಸ್ಕೀಮ್ -A ಅಡಿಯಲ್ಲಿ 173 TMC ಮತ್ತು ಸ್ಕೀಮ್ -B ಅಡಿ 130 TMC ನೀರು ಹಂಚಿಕೆ ಮಾಡಲಾಗಿದೆ. ಒಟ್ಟು 303 TMC ನೀರು ರಾಜ್ಯಕ್ಕೆ ಸಿಕ್ಕಿದೆ. ಹೀಗೆ ಸ್ಕೀಮ್-A ಅಡಿ ಹಂಚಿಕೆಯಾಗಿರುವ 173 TMC ನೀರನ್ನು ಬಳಸಿಕೊಂಡು ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟು 16 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಆಶ್ವಾಸನೆ ನೀಡಿದೆ ಜೆಡಿಎಸ್.

ಒಟ್ಟಾರೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗ ಜೆಡಿಎಸ್ ತನ್ನ ಪ್ರಣಾಳಿಕೆ ರಿಲೀಸ್ ಮಾಡಿದೆ. ಈ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತಪರ ಯೋಜನೆಗಳನ್ನ ಜಾರಿಗೆ ತರುವ ಆಶ್ವಾಸನೆ ನೀಡಲಾಗಿದೆ. ಆದರೆ ಈ ಆಶ್ವಾಸನೆಗಳು ರೈತರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ. ಉತ್ತರ ಕರ್ನಾಟಕದ ಜೊತೆ ಮಧ್ಯ ಕರ್ನಾಟಕದ ರೈತರಿಗೂ ಆಶ್ವಾಸನೆಗಳನ್ನ ನೀಡಲಾಗಿದೆ. ಇದಕ್ಕೆ ಮತದಾರರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕೇಲವೇ ದಿನದಲ್ಲಿ ಗೊತ್ತಾಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications