ಸಂಚಾರ ದಟ್ಟಣೆ ಭೀತಿ: ಜಯದೇವ ಮೇಲ್ಸೇತುವೆ ತೆರವು ಸದ್ಯಕ್ಕಿಲ್ಲ
ಬೆಂಗಳೂರು, ಮಾರ್ಚ್ 28: ಬನ್ನೇರುಘಟ್ಟ ಹಾಗೂ ಮಾರೇನಹಳ್ಳಿ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಅತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಯದೇವ ಜಂಕ್ಷನ್ ಮೇಲ್ಸೇತುವೆ ತೆರವು ಕಾರ್ಯಾಚರಣೆ ಮತ್ತಷ್ಟು ತಿಂಗಳು ಮುಂದಕ್ಕೆ ಹಾಕಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
ಹಿಂದಿನ ನಿರ್ಧಾರದಂತೆ 2017ರ ಆಗಸ್ಟ್-ಸೆಪ್ಟೆಂಬರ್ ನಲ್ಲಿಯೇ ಮೇಲ್ಸೇತುವೆ ತೆರವು ಕಾರ್ಯಾಚರಣೆ ಆರಂಭವಾಗಬೇಕಿತ್ತು. ಅದಕ್ಕೆ ಪೂರಕವಾಗಿ ಮೇಲ್ಸೇತುವೆ ಅಡಿಪಾಯದ ಸುತ್ತ ಮಣ್ಣು ತೆರವುಗೊಳಿಸುವುದನ್ನೂ ಆರಂಭಿಸಲಾಗಿತ್ತು. ಆದರೆ ಮಾರೇನಹಳ್ಳ ರಸ್ತೆ ಜತೆಗೆ ಬನ್ನೇರುಘಟ್ಟ ರಸ್ತೆಯಲ್ಲೂ ಮೆಟ್ರೋ ಕಾಮಗಾರಿ ಆರಂಭವಾಗಿರುವುದರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಅಸಾಧ್ಯವಾಗಿದೆ.
ಹೀಗಾಗಿ ಮಾರೇನಹಳ್ಳಿ ರಸ್ತೆಯಲ್ಲಿ ಒಂದಿಷ್ಟು ಕಾಮಗಾರಿ ಅಂತಿಮವಾದ ಬಳಿಕವೇ ಜಯದೇವ ಮೇಲ್ಸೇತುವೆ ತೆರವು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೂ ಸಿಗ್ನಲ್ ರಹಿತ 4ಕಿ.ಮೀ ರೋಡ್ ಕಂ ರೈಲು ಮೇಲ್ಸೇತುವೆ ನಿರ್ಮಾಣವಾಗಲಿದೆ.

ಇಂತಹ ಮೇಲ್ಸೇತುವೆಯಲ್ಲಿ ಪಿಲ್ಲರ್ ಒಂದೇ ಇರಲಿದ್ದು, ಮೊದಲ ಹಂತದಲ್ಲಿ ವಾಹನ ಸಾಗಲು ಮತ್ತು 2 ನೇ ಹಂತದಲ್ಲಿ ಮೆಟ್ರೋ ಸಾಗಲು ವ್ಯವಸ್ಥೆ ಇರಲಿದೆ. ಹೀಗಾಗಿ ಜಯದೇವ ಜಂಕ್ಷನ್ ನಲ್ಲಿ ಈಗಿರುವ ಮೇಲ್ಸೇತುವೆ ತೆರವು ಅನಿವಾರ್ಯವಾಗಿದೆ.












Click it and Unblock the Notifications