ಸಿಡಿ ಕೇಸ್: ನ್ಯಾಯಾಧೀಶರ ಮುಂದೆ ಸಿಡಿ ಗರ್ಲ್ ಬಾಯ್ಫ್ರೆಂಡ್ ಶಾಕಿಂಗ್ ಸ್ಟೇಟ್ಮೆಂಟ್ !
ಬೆಂಗಳೂರು, ಮಾರ್ಚ್ 19: ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಶಂಕಿತರು ವಿಡಿಯೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದಾರೆ. ಅಶ್ಲೀಲ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಸಿಡಿ ಗರ್ಲ್ ಕೂಡ ಇನ್ನೂ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸಿಡಿ ಗರ್ಲ್ ಪ್ರಿಯಕರ ಎಸ್ಐಟಿ ಅಧಿಕಾರಿಗಳ ಎದುರು "ಸಿಡಿ ಷಡ್ಯಂತ್ರ"ದ ಸಮಗ್ರ ಮಾಹಿತಿ ಹೇಳಿದ್ದಾನೆ.
ಇದನ್ನೇ ಗಂಭೀರವಾಗಿ ಪರಗಿಣಿಸಿರುವ ವಿಶೇಷ ತನಿಖಾ ತಂಡ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದು, ಅಲ್ಲಿ ಕೂಡ ಆತ ತಪ್ಪೊಪ್ಪಿಕೊಂಡಿದ್ದಾನೆ. ಸಿಡಿ ಗರ್ಲ್ ಪ್ರಿಯಕರ ಆಕಾಶ್ ತಲವಾಡೆ ನ್ಯಾಯಾಧೀಶರ ಮುಂದೆ ದಾಖಲಿಸಿರುವ ಹೇಳಿಕೆ ಪ್ರಕರಣಕ್ಕೆ ಮಹತ್ವದ ತಿರುವು ಕೊಟ್ಟಿದ್ದಾನೆ. ಆಕಾಶ್ ತಲವಾಡೆ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164 ಅಡಿ ದಾಖಲಿಸಿರುವ ಹೇಳಿಕೆ ವಿವರ ಇಲ್ಲಿದೆ.
ಅಂದಹಾಗೆ ಅಕಾಶ್ ತಲವಾಡೆ ಸಿಡಿ ಗರ್ಲ್ ಲವರ್ ಬಾಯ್. ಈಕೆಯನ್ನು ಪ್ರೀತಿಸುತ್ತಿದ್ದ ಅಕಾಶ್, ತನ್ನ ಪೋಷಕರಿಗೂ ಮದುವೆ ಆಗುವ ಬಗ್ಗೆ ಹೇಳಿಕೊಂಡಿದ್ದ. ಯುವತಿ ಕೂಡ ಒಪ್ಪಿಕೊಂಡಿದ್ದಳು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಡಿ ಗರ್ಲ್ ಕಳೆದ ನಾಲ್ಕು ತಿಂಗಳು ಶಂಕಿತ ಆರೋಪಿಗಳ ಜತೆ ಸೆರಿ ರೂಪಿಸಿದ ಸಂಚು, ಅದರ ಅನುಷ್ಠಾನ, ಸಿಡಿ ಬಿಡುಗಡೆ, ಆರ್.ಟಿ. ನಗರದಲ್ಲಿ ನಡೆದ ಸಭೆಯ ಸಮಗ್ರ ಮಾಹಿತಿಯನ್ನು ನ್ಯಾಯಾಧೀಶರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಿಡಿ ಷಡ್ಯಂತ್ರದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದವರು ಸೇರಿದ್ದ ಸಭೆ, ಹಣಕಾಸಿನ ವಹಿವಾಟಿನ ಬಗ್ಗೆ ನ್ಯಾಯಾಧೀಶರ ಮುಂದೆ ವಿವರಿಸಿದ್ದಾನೆ. ಅಲ್ಲದೇ, ಮಾರ್ಚ್ 1 ರಂದು ಆರ್.ಟಿ ನಗರದಲ್ಲಿ ವಿಡಿಯೋ ಬಿಡುಗಡೆ ಬಗ್ಗೆ ನಡೆದ ಸಭೆಯ ಸಮಗ್ರ ಮಾಹಿತಿಯನ್ನು ಹೇಳಿದ್ದಾನೆ.
ಸಿಡಿ ರಿಲೀಸ್ ಗೂ ಮುನ್ನ ಅಕಾಶ್ ತನ್ನ ಲವ್ವರ್ ಜತೆ ಗೋವಾಗೆ ತೆರಳಿದ್ದು, ಸಿಡಿ ಬಿಡುಗಡೆ ಬಳಿಕ ಯುವತಿ ಬೆಂಗಳೂರಿಗೆ ಬಂದಿದ್ದಾಳೆ. ಆನಂತರ ಮತ್ತೆ ಸಿಡಿ ಗ್ಯಾಂಗ್ ಜತೆ ಸೇರಿ ಹೋಗಿರುವ ವಿವರಗಳನ್ನು ಕೂಡ ಅಕಾಶ್ ನ್ಯಾಯಾಧೀಶರ ಮುಂದೆ ಬಹಿರಂಗಗೊಳಿಸಿದ್ದಾನೆ.
ಅಕಾಶ್ ಹೇಳಿಕೆ ನ್ಯಾಯಾಧೀಶರ ಮುಂದೆ ದಾಖಲಿಸುವ ಮೂಲಕ ಭವಿಷ್ಯದಲ್ಲಿ ಸಾಕ್ಷಿ ನಾಶ ಆಗದಂತೆ ಆರಂಭದಲ್ಲೇ ಪ್ರಕರಣದ ತನಿಖೆಯನ್ನು ಬಿಗಿ ಗೊಳಿಸಿದ್ದಾರೆ. ಅಕಾಶ್ ಕೇವಲ ತನ್ನ ಪ್ರಿಯತಮೆ ಜತೆ ಸಂಪರ್ಕದಲ್ಲಿದ್ದು, ಹೀಗಾಗಿ ಆತನನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲು ಎಸ್ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಆಕಾಶ್ ತಲವಾಡೆ ಸಾಕ್ಷಿಯಾಗಿದ್ದಲ್ಲಿ, ಸಿಡಿ ಷಡ್ಯಂತ್ರ, ಸಿಡಿ ಸ್ಫೋಟ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಂತಾಗುತ್ತದೆ.
ಸಿಡಿ ಸ್ಫೋಟಗೊಂಡ ಹದಿನೇಳು ದಿನ ಕಳೆದರೂ ಸಿಡಿ ಗರ್ಲ್ ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಕುರಿತು ಎಸ್ಐಟಿ ರಚನೆಯಾದಾಗಲೂ ಆಕೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ರಮೇಶ್ ಜಾರಕಿಹೊಳಿ ದೂರು ದಾಖಲಿಸಿ ಎಫ್ಐಆರ್ ದಾಖಲಿಸುತ್ತಿದ್ದಂತೆ ಸಿಡಿ ಗರ್ಲ್ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದರು. ನನಗೆ ಅನ್ಯಾಯ ಆಗಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ ಜಾರಕಿಹೊಳಿ ಮೋಸ ಮಾಡಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದರು.
ಇದಾದ ಬಳಿಕ ಎಸ್ಐಟಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಸಿಡಿ ಷಡ್ಯಂತ್ರ್ಯದ ಪ್ರಮುಖ ಅಂಶಗಳನ್ನು ಬಯಲು ಮಾಡಿತ್ತು. ಆ ನಂತರ ಶಂಕಿತ ಆರೋಪಿಗಳ ವಿಡಿಯೋ ಹೇಳಿಕೆಗಳು ಬಿಡುಗಡೆಯಾದವು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಎಸ್ಐಟಿ ಅಧಿಕಾರಿಗಳು ಪ್ರಕರಣದ ಅಸಲಿ ಸತ್ಯ ಬಯಲಿಗೆ ಎಳೆಯುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.












Click it and Unblock the Notifications