ಜನತಾ ಕರ್ಫ್ಯೂ; ಸುಮ್ಮನೆ ತಿರುಗಾಡಿದರೆ ಬೀಳತ್ತೆ ಕೇಸು
ಬೆಂಗಳೂರು, ಮಾರ್ಚ್ 21 : ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಇದನ್ನು ಜನರು ಪಾಲಿಸಬೇಕು ಎಂದು ಕರೆ ನೀಡಲಾಗಿದೆ.
ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಜನರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯ ತನಕ 'ಜನತಾ ಕರ್ಫ್ಯೂ' ನಡೆಯಲಿದೆ.
ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಜನರು ಹೊರಬರಬಹುದಾಗಿದೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವುದು, ರಸ್ತೆ ಖಾಲಿ ಇದೆ ಎಂದು ಬೈಕ್ ತೆಗೆದುಕೊಂಡು ವೀಲ್ಹಿಂಗ್ ಮಾಡುವುದು ಮುಂತಾದವುಗಳನ್ನು ಮಾಡಿದರೆ ಪ್ರಕರಣವನ್ನು ದಾಖಲು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ 'ಜನತಾ ಕರ್ಫ್ಯೂ'ಗೆ ಕರೆ ಕೊಟ್ಟಿದ್ದಾರೆ. ತುರ್ತು ಸೇವೆಗಳಾದ ಆಸ್ಪತ್ರೆ, ಔಷಧಿಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಲಭ್ಯವಿರುವುದಿಲ್ಲ.
ಜನತಾ ಕರ್ಫ್ಯೂದಿನ ಯಾರೂ ಪ್ರವಾಸ ಮಾಡಬಾರದು. ವಾಕಿಂಗ್, ಕಾರ್ಯಕ್ರಮ, ವೀಲ್ಹಿಂಗ್ ಎಂದು ರಸ್ತೆಯಲ್ಲಿ ಓಡಾಡಿದರೆ ಸಂವಿಧಾನದ 31 (ಎಲ್) ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಎಲ್ಲಾ ಕಡೆ ಬ್ಯಾರಿಕೇಡ್ ಹಾಕಲಾಗುತ್ತದೆ. ಪೊಲೀಸರು ಗಸ್ತು ತಿರುಗಲಿದ್ದಾರೆ. ರಸ್ತೆಯಲ್ಲಿರುವ ಪ್ರತಿ ಸಿಬ್ಬಂದಿಗೂ ಮಾಸ್ಕ್, ಸ್ಯಾನಿಟೈಸರ್ ಕೊಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ.
ಪೊಲೀಸ್, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ಕೆಲಸ ಮಾಡಲಿವೆ. ಕೊರೊನಾ ಸೋಂಕು ತಗುಲಿರುವ ವಿಚಾರವನ್ನು ಮುಚ್ಚಿಟ್ಟರೆ ಅಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.












Click it and Unblock the Notifications