Breaking; ಬಿಜೆಪಿ ಜನಸ್ಪಂದನ ಸಮಾವೇಶ; ವಿಘ್ನ ಬಾರದಿರಲಿ ಎಂದು ಹೋಮ
ಬೆಂಗಳೂರು, ಸೆಪ್ಟೆಂಬರ್ 09: ಕರ್ನಾಟಕದ ಬಿಜೆಪಿಯ 'ಜನಸ್ಪಂದನ' ಸಮಾವೇಶ ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆಯಲಿದೆ. ಸಮಾವೇಶ ಯಶಸ್ವಿಯಾಗಲಿ, ಯಾವುದೇ ವಿಘ್ನ ಬಾರದಿರಲಿ ಎಂದು ಗಣಪತಿ ಹೋಮ ನಡೆಸಲಾಗಿದೆ.
ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ತಿಳಿಸಲು 'ಜನಸ್ಪಂದನ ಬೃಹತ್ ಸಮಾವೇಶ' ಸೆಪ್ಟೆಂಬರ್ 10ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಎರಡು ಬಾರಿ ಸಮಾವೇಶಕ್ಕೆ ವಿಘ್ನ ಎದುರಾಗಿತ್ತು.

ಆದ್ದರಿಂದ ಶುಕ್ರವಾರ ಶನಿವಾರ ನಡೆಯಲಿರುವ ಸಮಾವೇಶ ಯಶಸ್ವಿಯಾಗಲಿ ಎಂದು ಗಣಪತಿ ಹೋಮ ನಡೆಸಲಾಯಿತು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇವಾ ಕರ್ತೃವಾಗಿ ಹೋಮದಲ್ಲಿ ಪಾಲ್ಗೊಂಡರು.
ಒಟ್ಟು ಎಂಟು ಪುರೋಹಿತರು ಗಣಪತಿ ಹೋಮ ನಡೆಸಿಕೊಟ್ಟರು. ಸಮಾವೇಶ ಯಾವುದೇ ವಿಘ್ನವಿಲ್ಲದಂತೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪದೇ-ಪದೇ ಮುಂದೂಡಿಕೆ; ಕರ್ನಾಟಕ ಬಿಜೆಪಿ ಮೊದಲು ಜುಲೈ 28ರಂದು 'ಜನೋತ್ಸವ' ಎಂಬ ಹೆಸರಿನಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಸಮಾವೇಶ ಮುಂದೂಡಲಾಯಿತು.
ಆಗಸ್ಟ್ 28ರಂದು ಸಮಾವೇಶಕ್ಕೆ ದಿನ ನಿಗದಿ ಮಾಡಲಾಗಿತ್ತು. ಆದರೆ ಬಿಜೆಪಿ ವರಿಷ್ಠ ನಾಯಕರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಬಳಿಕ ಸೆಪ್ಟೆಂಬರ್ 8ರಂದು ಸಮಾವೇಶ ನಡೆಸಲು ದಿನಾಂಕ ನಿಗದಿ ಮಾಡಲಾಯಿತು.
ಆದರೆ ಸೆಪ್ಟೆಂಬರ್ 6ರಂದು ಸಚಿವ ಉಮೇಶ್ ಹತ್ತಿ ನಿಧನದ ಕಾರಣ ಅಂದು ನಡೆಯಬೇಕಿದ್ದ ಸಮಾವೇಶ ಸಹ ಮುಂದೂಡಿಕೆಯಾಯಿತು. ಬಳಿಕ ಸೆಪ್ಟೆಂಬರ್ 11ಕ್ಕೆ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಆದರೆ ಪಿತೃಪಕ್ಷದ ಕಾರಣ ಬಳಿಕ ಸೆಪ್ಟೆಂಬರ್ 10ರ ದಿನಾಂಕ ನಿಗದಿ ಮಾಡಲಾಗಿದೆ. ಅಲ್ಲದೇ 'ಜನೋತ್ಸವ' ಎಂಬ ಹೆಸರನ್ನು 'ಜನಸ್ಪಂದನ' ಎಂದು ಬದಲಾವಣೆ ಮಾಡಲಾಯಿತು.
30 ಗಣ್ಯರಿಗೆ ವ್ಯವಸ್ಥೆ; ಜನಸ್ಪಂದನ ಸಮಾವೇಶ ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆಯಲ್ಲಿ 30 ಗಣ್ಯರಿಗೆ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶದಲ್ಲಿ ಸುಮಾರು 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಊಟ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications