ಜ.16ರ ನಂತರ ಖಾಸಗಿ ಆಸ್ಪತ್ರೆಗೆ ಹೋಗುವ ಮುನ್ನ ಇತ್ತ ಗಮನಿಸಿ
ಬೆಂಗಳೂರು, ಜನವರಿ 11: ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಜನವರಿ 16 ರಿಂದ ಸರ್ಕಾರದ ಕೆಲವು ಅರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದು, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳ ಈ ನಿರ್ಧಾರ ಸರಿಯಲ್ಲ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ನೀಡಿಲ್ಲ ಎಂದು ನಾವು ಹೇಳಿಲ್ಲ ಈ ವಿಷಯವನ್ನು ಸಂಬಂಧಿಸಿದವರು ನನ್ನ ಗಮನಕ್ಕೆ ತಂದಿಲ್ಲ. ಬಾಕಿ ಹಣವನ್ನು ಸರ್ಕಾರ ಪಾವತಿಸುತ್ತದೆ. ಆದರೆ ಏಕಾಏಕಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳುವುದು ಸರಿಯಾದ ಕ್ರಮ ಅಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದರು.[ಸರಕಾರಿ ಆಸ್ಪತ್ರೆಗಳ ವಿರುದ್ಧ ಅಪಪ್ರಚಾರ ಸಲ್ಲದು : ಆರೋಗ್ಯ ಸಚಿವ]
ಮುಖ್ಯಮಂತ್ರಿ ಅವರು ಕೂಡ ಈ ವಿಷಯವನ್ನು ಪ್ರಸ್ತಾಪಿಸಿ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಪಾವತಿಸುವಂತೆ ತಿಳಿಸಿದ್ದಾರೆ ಎಂದ ಆರೋಗ್ಯ ಸಚಿವರು ಆದರೆ ಈ ರೀತಿ ಸೇವೆಗಳನ್ನು ಸ್ಥಗಿತ ಮಾಡುವ ನಿರ್ಧಾರದ ಮಾಡಲು ಸೌಜನ್ಯಕ್ಕಾದರೂ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಾಗಿತ್ತು. ಸರಕಾರ ಮಾತುಕತೆಗೆ ಸದಾ ಸಿದ್ದವಿದೆ ನಾವು ಕೂಡ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಚಿಕಿತ್ಸಾಶುಲ್ಕ ದರ ನಿಗದಿ ಬಗ್ಗೆ ನಿವೃತ್ತ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು, ಖಾಸಗಿ ಆಸ್ಪತ್ರೆಗಳನ್ನು ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕು ಎಂದು ಸಚಿವರು ನುಡಿದರು.