ಬೆಂಗಳೂರು : 14 ಲಕ್ಷ ಲಂಚ ಪಡೆಯುತ್ತಿದ್ದ ಐಟಿ ಅಧಿಕಾರಿ ಬಂಧನ!
ಬೆಂಗಳೂರು, ಏಪ್ರಿಲ್ 03 : 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಯನ್ನು ಬೆಂಗಳೂರಿನಲ್ಲಿ ಸಿಬಿಐ ಬಂಧಿಸಿದೆ. 40 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ 14 ಲಕ್ಷ ರೂ. ಹಣವನ್ನು ಮೊದಲ ಕಂತಿನಲ್ಲಿ ಸ್ವೀಕರಿಸುತ್ತಿದ್ದರು.
ಬುಧವಾರ ರಾತ್ರಿ ಬೆಂಗಳೂರಿನ ಜಯನಗರದ ಕಾಫಿ ಡೇನಲ್ಲಿ ನಾಗೇಶ್ ಎಂಬ ಆದಾಯ ತೆರಿಗೆ ಇಲಾಖೆ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ. ಬಿಲ್ಡರ್ ವೊಬ್ಬರ ಬಳಿ ನಾಗೇಶ್ 14 ಲಕ್ಷ ರೂ. ಪಡೆಯುವಾಗ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ.
ಬಿಲ್ಡರ್ ಕಚೇರಿ ಮತ್ತು ನಿವಾಸದ ಮೇಲೆ ಮಾರ್ಚ್ 6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಈ ಪ್ರಕರಣದಿಂದ ಖುಲಾಸೆಗೊಳಿಸಲು ನಾಗೇಶ್ ಬಿಲ್ಡರ್ ಬಳಿ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಸಿಬಿಐಗೆ ಬಿಲ್ಡರ್ ದೂರು ನೀಡಿದ್ದರು. ಜಯನಗರದಲ್ಲಿ ಇಂದು 14 ಲಕ್ಷ ಹಣವನ್ನು ಕೊಡುವುದಾಗಿ ನಾಗೇಶ್ನನ್ನು ಬಿಲ್ಡರ್ ಕರೆಸಿದ್ದರು. ಹಣವನ್ನು ನೀಡುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.
ಹಣವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ನಾಗೇಶ್ ವಿಚಾರಣೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಇತರ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆಯೇ? ಎಂದು ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications