Bengaluru Rain: ಬೆಳ್ ಬೆಳಿಗ್ಗೆ ಮಳೆ ಕಾಟ, ಹೊರಬಂದ ಜನ ಪರದಾಟ
ದಸರಾ ರಜೆ ಮುಗಿಸಿ ಇನ್ನೇನು ಸೋಮವಾರ (ಇಂದು) ಫ್ರೆಶ್ ಮೂಡ್ನಲ್ಲಿ ಕೆಲಸಗಳತ್ತ ಗಮನ ಕೊಡೋಣ ಎಂದುಕೊಂಡಿದ್ದವರಿಗೆ ವರುಣ ಬೆಳ್ಳಂಬೆಳಿಗ್ಗೆ ದರ್ಶನ ಕೊಟ್ಟಿದ್ದಾನೆ. ಬೆಳಿಗ್ಗೆ ಐದು ಗಂಟೆಯಿಂದಲೇ ಸಿಲಿಕಾನ್ ಸಿಟಿಯಲ್ಲಿ ಮಳೆಯ ಸಿಂಚನ ಶುರುವಾಗಿದ್ದು, ಬಹುತೇಕ ಎಲ್ಲ ಕಡೆ ಜಿಟಿಜಿಟಿ ಮಳೆ ಸುರಿದಿದೆ. ಇದರಿಂದ ಜನರ ಪರದಾಡಿದ್ದಾರೆ.
ಕೆಲಸಗಳಿಗೆ ತೆರಳುವವರು ಮಳೆಯಿಂದ ತತ್ತರಿಸಿದ್ದು, ಬೆಂಗಳೂರಿನ ಬಹುತೇಕ ಕಡೆ ಬೆಳಿಗ್ಗೆಯೇ ಟ್ರಾಫಿಕ್ ಜಾಮ್ ಕೂಡ ವಕ್ಕರಿಸಿದೆ. ಕೆಲವರು ಮಳೆಯನ್ನೂ ಲೆಕ್ಕಿಸದೆ, ಆಫೀಸ್ಗಳಿಗೆ ತೆರಳಿದ್ದಾರೆ. ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದ ಹಿನ್ನೆಲೆ ಬಹುತೇಕರು ಕೊಡೆ (ಛತ್ರಿ) ಹಿಡಿದೇ ಮನೆಯಿಂದ ಹೊರಬಂದಿದ್ದಾರೆ. ಕೆಲ ರಸ್ತೆಗಳಲ್ಲಿ ನೀರು ನಿಂತು ಅವಾಂತರವೂ ಸೃಷ್ಟಿಯಾಗಿದೆ.

ದಸರಾ ಹಬ್ಬಕ್ಕೆ ಮಳೆ ತುಸು ಬಿಡುವು ನೀಡಿತ್ತು. ಬಳಿಕ ದಿಢೀರ್ ಮಳೆ ಅಬ್ಬರಿಸಲು ಮುಂದಾಗಿದ್ದು, ಬಹುತೇಕ ಈ ವಾರವಿಡೀ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳ, ಯಲಹಂಕ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಟೌನ್ಹಾಲ್, ಕೋರಮಂಗಲ, ಎಂ.ಜಿ.ರಸ್ತೆ, ಇನ್ಫೆಂಟ್ರಿ ರಸ್ತೆ, ಗಾಂಧಿನಗರ, ವೈಯಾಲಿಕಾವಲ್, ಶಿವಾಜಿನಗರ, ಸದಾಶಿವನಗರ, ಯಶವಂತಪುರ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಕೆ.ಆರ್.ಪುರ, ಮಾರತ್ತಹಳ್ಳಿ, ಇಂದಿರಾನಗರ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿದಂತೆ ಬೆಂಗಳೂರಿನ ಎಲ್ಲ ಕಡೆಯೂ ಮಳೆಯ ಸಿಂಚನವಾಗಿದೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಿಗೆ ಅಲರ್ಟ್ ಕೂಡ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 5 ದಿನಗಳ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 17ರಂದು ಗುಡುಗು ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನುಳಿದ ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ದಕ್ಷಿಣ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಹಾಗೂ ಜೋರಾದ ಗಾಳಿಯೊಂದಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ.
ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ನಿನ್ನೆ ಉಡುಪಿ ಕಾರ್ಕಳ ಭಾಗದಲ್ಲಿ 125.5 ಮಿ ಮೀ ಅತ್ಯಧಿಕ ಮಳೆ ದಾಖಲಾಗಿದೆ.












Click it and Unblock the Notifications