ನೌಕರಿ ನಿಕಾಲಿ ವಿರುದ್ಧ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಭಾರೀ ಪ್ರತಿಭಟನೆ
ಬೆಂಗಳೂರು, ಜುಲೈ 29 : ಐಟಿ ವಲಯದಲ್ಲಿ ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುತ್ತಿರುವ ನಿರ್ಧಾರದ ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಭಾರೀ ಪ್ರತಿಭಟನೆ ನಡೆಯಿತು. ಈಚೆಗಷ್ಟೇ ಕೆಲಸದಿಂದ ತೆಗೆದುಹಾಕಲಾಗಿದ್ದವರು ಮತ್ತು ಸದ್ಯ ಉದ್ಯೋಗದಲ್ಲಿ ಇರುವವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕಂಪನಿಗಳು ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ವಿಪ್ರೋ ಉದ್ಯೋಗಿಯೊಬ್ಬರು ಮಾತನಾಡಿ, ಎಚ್ ಆರ್ ಕಡೆಯಿಂದ ನನಗೆ ಯಾವಾಗ ಬೇಕಾದರೆ ಕರೆ ಬಂದು, ಕೆಲಸಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಬಹುದು ಎಂದು ಹೇಳಿದರು.
ನೂರಾರು ಮಂದಿ ಐಟಿ ಉದ್ಯೋಗಿಗಳು ಸ್ವಾತಂತ್ರ್ಯ ಉದ್ಯಾನದ ಮುಂದೆ ಜಮೆ ಆಗಿದ್ದರು. ಐಟಿ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಎ.ಸಿ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದರು.

ಸಾವಿರಾರು ಮಂದಿ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಆರು ಸಾವಿರ ಉದ್ಯೋಗಿಗಳನ್ನು ಏಕಪಕ್ಷೀಯವಾಗಿ ಹಾಗೂ ಅನಧಿಕೃತವಾಗಿ ತೆಗೆದುಹಾಕಲು ನಡೆಸಿರುವ ಹುನ್ನಾರವನ್ನು ತಡೆಯಬೇಕು ಎಂದು ಉದ್ಯೋಗಿಗಳು ಒತ್ತಾಯಿಸಿದರು.
ಕೈಗಾರಿಕಾ ವ್ಯಾಜ್ಯ ಕಾಯ್ದೆ ಅಡಿಯಲ್ಲಿ ನಮ್ಮನ್ನು ನೌಕರರು ಅಂತಲೇ ಪರಿಗಣಿಸಿಲ್ಲ. ನಾವು ಒಕ್ಕೂಟ ರಚಿಸುವುದಕ್ಕೆ ಆಗಲ್ಲ. ನಾವೆಲ್ಲಿಗೆ ಹೋಗಬೇಕು? ಈಗಾಗಲೇ ಹದಿನಾರು ಸಾವಿರ ಉದೋಗಿಗಳನ್ನು ತೆಗೆದುಹಾಕಿದ್ದಾರೆ. ಆದರೆ ಅವರೆಲ್ಲ ರಾಜೀನಾಮೆ ಕೊಟ್ಟಿದ್ದಾರೆ ಅಂತಲೆ ತೋರಿಸಲಾಗಿದೆ ಎಂದು ವಿಪ್ರೋ ನೌಕರರೊಬ್ಬರು ತಿಳಿಸಿದರು.
ಇನ್ಫೋಸಿಸ್ ಉದ್ಯೋಗಿಯೊಬ್ಬರು ಮಾತನಾಡಿ, ಶೇಕಡಾ ಹತ್ತರಷ್ಟು ಉದ್ಯೋಗಿಗಳನ್ನು ತೆಗೆಯಬೇಕಾದ ಒತ್ತಡದಲ್ಲಿ ನಮ್ಮ ಕಂಪನಿಯಿದೆ. ಗರಿಷ್ಠ ಮಟ್ಟದ ಅನುಭವ ಅಂದರೆ ಎಂಟು ವರ್ಷ ಆದವರು ಮಾತ್ರ ಇರಬೇಕು. ಹತ್ತು-ಹದಿನೈದು ವರ್ಷ ಅನುಭವ ಇರುವವರನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಲಿಸುವುದಕ್ಕೆ ಆಗಲ್ಲ, ನೀವು ಹೊರಡಿ ಎನ್ನುತ್ತಿದ್ದಾರೆ ಎಂದರು.
ಬಹುತೇಕ ಉದ್ಯೋಗಿಗಳು ಡಿಪ್ರೆಷನ್ ಹಾಗೂ ಸೂಸೈಡೆಲ್ ಟೆಂಡೆನ್ಸಿ ಬಗ್ಗೆ ಮಾತನಾಡಿದರು. "ನಾನು ತೆಗೆದುಕೊಂಡ ಫ್ಲ್ಯಾಟ್ ಗೆ ತಿಂಗಳಿಗೆ ಅರವತ್ತೈದು ಸಾವಿರ ರುಪಾಯಿ ಕಟ್ಟಬೇಕು. ನಾನು ಕೆಲಸ ಕಳೆದುಕೊಂಡರೆ ಹೆಂಡತಿ-ಮಕ್ಕಳು, ವಯಸ್ಸಾದ ತಾಯಿ-ಅತ್ತೆಯನ್ನು ಹೇಗೆ ಸಾಕಬೇಕು ಎಂಬ ಚಿಂತೆಯಾಗಿದೆ. ದಿನ ಬೆಳಗಾಗೆದ್ದು ಕೆಲಸದಿಂದ ತೆಗೆದುಹಾಕಿದರೆ ಹೇಗೆ ಎಂದು ಚಿಂತಿಸುವುದಾಗಿದೆ. ನಮಗಾಗಲೇ ಕೆಲಸಕ್ಕೆ ರಾಜೀನಾಮೆ ನೀಡಲು ಹೇಳಿಯಾಗಿದೆ ಎಂದು ಮತ್ತೊಬ್ಬರು ಹೇಳಿದರು.












Click it and Unblock the Notifications