ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಅವ್ಯವಹಾರ: ವೆಂಕಟ ಶಿವಾರೆಡ್ಡಿ
ಬೆಂಗಳೂರು, ಡಿಸೆಂಬರ್ 20: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದ ವೇಳೆಯಲ್ಲಿ ಅಂಬ್ಯುಲೆನ್ಸ್ ಮತ್ತು ಔಷಧಿ ಖರೀದಿಯಲ್ಲಿ 535.22 ಕೋಟಿ ರೂ, ಲಪಟಾಯಿಸಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಸಿಎಜಿ ವರದಿಯಲ್ಲೂ ಇದರ ಬಗ್ಗೆ ವರದಿಯಾಗಿದೆ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಲ್ಲಿ ಪರಿಶೀಲನೆ ಅಗಬೇಕಿತ್ತು, ಆದರೆ ಇದೂವರೆಗೂ ಆ ವಿಚಾರ ಚರ್ಚೆಗೆ ಬಂದಿಲ್ಲ ಎಂದು ಹೇಳಿದರು.
ಸ್ಪೀಕರ್ ಪೀಠವನ್ನು ದುರುಪಯೋಗಪಡಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ, ಈ ಪ್ರಕರಣದ ಕುರಿತು ಶೀಘ್ರವೇ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರಿ ಯುನಾನಿ ವೈದ್ಯಕೀಯ ವಿವಿಯಲ್ಲಿ ಅಕ್ರಮ ಪ್ರವೇಶಾತಿ ನೀಡಲಾಗಿದೆ. ನಕಲಿ ಆಯ್ಕೆ ಪಟ್ಟಿ ಸೃಷ್ಟಿಸಿಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಈ ಅಕ್ರಮ ಪ್ರವೇಶಾತಿಯನ್ನು ರಮೇಶ್ ಕುಮಾರ್ 2017 ರಲ್ಲಿ ಆರೋಗ್ಯ ಸಚಿವರಾಗಿದ್ದಾಗ ಸಿಓಡಿ ತನಿಖೆ ಕೈಚೆಲ್ಲಲು ಆದೇಶ ನೀಡುತ್ತಾರೆ. ಇದು ರಾಜ್ಯದ ವಿದ್ಯಾರ್ಥಿಗಳಿಗೆ ಮಾಡಿರುವ ವಂಚನೆ ಎಂದು ತಿಳಿಸಿದರು.
ಅಷ್ಟೇ ಅಲ್ಲದೇ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೇ ನಂಬರ್ 1 ರಲ್ಲಿ 9 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಕಂದಾಯ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿದ್ದಾರೆ. ಸರ್ವೇ ನಂಬರ್ 2 ರಲ್ಲಿ 52 ಎಕರೆ 29 ಗುಂಟೆ ಜಾಗವನ್ನೂ ಕಬಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ರಮೇಶ್ ಕುಮಾರ್ ಅವರು ಸಂತೆಗೆ ಹೋಗಿ ಕುರಿ ಖರೀದಿ ಮಾಡೋದು ಯಾಮಾರಿಸುವ ಒಂದು ತಂತ್ರ, ರಮೇಶ್ ಕುಮಾರ್ ರಾಜಕಾರನಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.
ಪವರ್ ಪ್ಲಾಂಟ್, ಅಪಾರ್ಟ್ಮೆಂಟ್, ಹೋಟೆಲ್ಗಳೆಲ್ಲವನ್ನೂ ರಮೇಶ್ ಕುಮಾರ್ ಹೊಂದಿದ್ದಾರೆ, ಜಂಟಿ ಸರ್ವೇ ಮಾಡದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವೆಂಕಟ ಶಿವಾರೆಡ್ಡಿ ಹೇಳಿದರು.
ಅಕ್ರಮ ಜಮೀನುಗಳನ್ನು ಯುಸಿಒ ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲವನ್ನು ಪಡೆದಿರುತ್ತಾರೆ, ಅವರು ತಪ್ಪಿತಸ್ಥ ಅಲ್ಲ ಅಂತ ಪ್ರೂವ್ ಮಾಡಿದರೆ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ವೆಂಕಟ ಶಿವಾರೆಡ್ಡಿ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಇದಲ್ಲದೇ ಒಂಬತ್ತು ಕೊಲೆ ಪ್ರಕರಣಗಳಲ್ಲಿಯೂ ಮಾಜಿ ಸ್ಪೀಕರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೊಲೆ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದರು. ಈ ಎಲ್ಲಾ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಜೆಡಿಎಸ್ ಮಾಜಿ ಶಾಸಕ ವೆಂಕಟ ಶಿವಾರೆಡ್ಡಿ ಆಗ್ರಹಿಸಿದ್ದಾರೆ.












Click it and Unblock the Notifications