ಐಪಿಎಸ್ ಗಳ ಗುದ್ದಾಟ : ನಿಂಬಾಳ್ಕರ್ ಹೇಳಿದ್ದು ಮಹಾ ಸುಳ್ಳು ಎಂದ ಡಿ. ರೂಪಾ !
ಬೆಂಗಳೂರು, ಡಿಸೆಂಬರ್ 28: ನಿರ್ಭಯ ನಿಧಿಯ ಸೇಫ್ ಸಿಟಿ ಯೋಜನೆ ಜಾರಿ ಸಂಬಂಧ ಕರೆದಿರುವ ಟೆಂಡರ್ ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಗೆ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮತ್ತೆ ಟಾಂಗ್ ಕೊಟ್ಟಿದ್ದಾರೆ.
ನಿರ್ಭಯ ಟೆಂಡರ್ ಆಹ್ವಾನ ಕಮಿಟಿ ಹಾಗೂ ಟೆಂಡರ್ ಭದ್ರತಾ ಕಮಿಟಿ ಅಧ್ಯಕ್ಷ ಹೇಮಂತ್ ನಿಂಬಾಳ್ಕರ್ ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ಮತ್ತು ಸಾರ್ವಜನಿಕರನ್ನು ಹಾದಿ ತಪ್ಪಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ನಿಂಬಾಳ್ಕರ್ ಹೇಳುವಂತೆ ಸದ್ಯ ಚಾಲ್ತಿಯಲ್ಲಿರುವ ಮೂರನೇ ಟೆಂಡರ್ ನಲ್ಲಿಯೇ ಸುಮಾರು ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಡಿ ರೂಪಾ ಅವರು ಪಾಯಿಂಟ್ ಟು ಪಾಯಿಂಟ್ ವಿವರಣೆ ಕೊಟ್ಟಿದ್ದಾರೆ.
ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ನಲ್ಲಿ ಎಲ್ಲವೂ ಲೀಗಲ್ : ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ
ನಿರ್ಭಯ ನಿಧಿ ಬಳಕೆ ಸಂಬಂಧ ಕರೆದಿರುವ ಟೆಂಡರ್ ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೂಪಾ ಆರೋಪಿಸಿದ್ದರು. ಡಿ. ರೂಪಾ ಅವರ ಹಕ್ಷಕ್ಷೇಫ ಪ್ರಶ್ನಿಸಿ ನಿಂಬಾಳ್ಕರ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮಾತ್ರವಲ್ಲ ಸೇಫ್ ಸಿಟಿ ಪ್ರಾಜೆಕ್ಟ್ ಸಂಬಂಧ ಕರೆದಿರುವ ಮೂರು ಟೆಂಡರ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಸ್ತುತ ಮೂರನೇ ಟೆಂಡರ್ ಚಾಲ್ತಿಯಲ್ಲಿದೆ. ಯಾರು ಬೇಕಾದರೂ ಬಿಡ್ ಮಾಡಬಹುದು. ನನ್ನ ಮೇಲೆ ಸುಳ್ಳು ಆಪಾದನೆ ಮಾಡಲಾಗಿದೆ ಎಂದು ಟೆಂಡರ್ ಕಮಿಟಿ ಅಧ್ಯಕ್ಷರಾಗಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದರು.
ನಿಂಬಾಳ್ಕರ್ ಅವರ ಸ್ಪಷ್ಟನೆ ಸುಳ್ಳಿನಿಂದ ಕೂಡಿದೆ. ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ಧಿಕ್ಕು ತಪ್ಪಿಸುತ್ತಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಕರೆದಿರುವ ಮೂರನೇ ಟೆಂಡರ್ ನಲ್ಲೂ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ರೂಪಾ ಅವರು ವಿವರಣೆ ನೀಡಿದ್ದಾರೆ.
ನಿರ್ಭಯಾ ನಿಧಿ ಟೆಂಡರ್ ಅಕ್ರಮ: ಐಪಿಎಸ್ ಅಧಿಕಾರಿಗಳ ನಡುವೆ ಡಿಶುಂ ಡಿಶುಂ !
ನಂಬರ್ 1: ಹಣಕಾಸು ಇಲಾಖೆ ಬಿಡ್ ದಾರರಿಗೆ ಇಟ್ಟಿರುವ ಅರ್ಹತೆ ಮಾನದಂಡದ ಪ್ರಕಾರ, ಬಿಡ್ ಮಾಡುವ ಕಂಪನಿಯ ವಾರ್ಷಿಕ ವಹಿವಾಟು ಟೆಂಡರ್ ನ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಿರಬೇಕು. ಇಲ್ಲಿ ನಿರ್ಭಯ ನಿಧಿಯ ಸೇಫ್ ಸಿಟಿ ಯೋಜನೆಯ ಟೆಂಡರ್ ಮೊತ್ತ 620 ಕೋಟಿ ರೂ. ಅದರ ಪ್ರಕಾರ ಬಿಡ್ ಮಾಡುವ ಕಂಪನಿ ವಾರ್ಷಿಕ ವಹಿವಾಟು 1200 ಕೋಟಿ ರೂ. ಇರಬೇಕು. ಆದರೆ, ಬಿಡ್ ಮಾಡುವ ಕಂಪನಿಗೆ ಕೇವಲ ವಾರ್ಷಿಕ 250 ಕೋಟಿ ರೂ. ವಹಿವಾಟು ನಡೆಸಿರುವ ಕಂಪನಿ ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚಿನ ತಿದ್ದುಪಡಿ ಪ್ರಕಾರ ಟೆಂಡರ್ ಮೊತ್ತದಷ್ಟು ಎಂದರೂ ಕನಿಷ್ಠ 500 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಕಂಪನಿ ಬಿಡ್ ಸಲ್ಲಿಸಲು ಅರ್ಹತೆ ನಿಗಧಿ ಪಡಿಸಿರಬೇಕು. ಹಣಕಾಸು ಇಲಾಖೆಯ ನಿರ್ದೇಶನ ಸಂಪೂರ್ಣ ಉಲ್ಲಂಘನೆಯಾಗಿದೆ.
ನಂಬರ್ 2: ಬಿಇಎಲ್ ಸಂಸ್ಥೆ ನವರತ್ನ ಹಿರಿಮೆ ಹೊಂದಿದೆ. ಸಿಸಿಟಿವಿ ಹಾಕುವ ಸಂಬಂಧ ಸುರಕ್ಷತಾ ಸಿಟಿ ಎರಡನೇ ಟೆಂಡರ್ ನಲ್ಲಿ ಭಾಗಿಯಾಗಿತ್ತು. ಚೈನಾ ಮೂಲದ ಉಪಕರಣಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಎರಡನೇ ಟೆಂಡರ್ ರದ್ದು ಮಾಡಲಾಗಿತ್ತು ಎಂದು ನಿಂಬಾಳ್ಕರ್ ಹೇಳಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆ ಬಿಇಎಲ್ ಸಂಸ್ಥೆ ಹೇಗೆ ಚೈನಾ ಕ್ಯಾಮರಾ ನೀಡಲಿಕ್ಕೆ ಸಾಧ್ಯ ?
ನಂಬರ್ 3: ಕರ್ನಾಟಕ ಪಾರದರ್ಶಕ ನಿಯಮ 3 ರ ಪ್ರಕಾರ, ಈ ಟೆಂಡರ್ ಉಪಕರಣಗಳ ಪೂರೈಕೆ ಹಾಗೂ ಸೇವೆ ಹೊಂದಿರುವಂತದ್ದು. ಸಿಸಿಟಿವಿ ಉಪಕರಣ, ಅವುಗಳನ್ನುಹಾಕಿ ನಿರ್ವಹಣೆ ಮಾಡುವುದು ಸೇವೆ, ಹೀಗಾಗಿ ಇದು ಕನ್ಸಲ್ ಟೆನ್ಸಿ ಟೆಂಡರ್ ಅಲ್ಲ. ಆದರೆ ಕರ್ನಾಟಕ ಪಾರದರ್ಶಕ ನಿಯಮದ ಪ್ರಕಾರ ಕ್ವಾಲಿಡಿ ಮತ್ತು ಕಾಸ್ಟ್ ಆಧಾರಿತ ನಿಯಮವನ್ನು ಈ ಟೆಂಡರ್ ನಲ್ಲಿ ಅಳವಡಿಸಲು ಸಾಧ್ಯವಿಲ್ಲದಿದ್ದರೂ ಬಳಕೆ ಮಾಡುವ ಮೂಲಕ ಪಾರದರ್ಶಕ ನಿಯಮ ಉಲ್ಲಂಘನೆ ಮಾಡಲಾಗಿದೆ.
Recommended Video
ಕರ್ನಾಟಕ ಪಾರದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಆಹ್ವಾನ ಕಮಿಟಿ ಮತ್ತು ಭದ್ರತಾ ಕಮಿಟಿ ಅಧ್ಯಕ್ಷರಾಗಿರುವ ಹೇಮಂತ್ ನಿಂಬಾಳ್ಕರ್ ಅವರ ಪಾತ್ರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ರೂಪಾ ಅವರು ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿರುವ ಇವರು ಮಾಡಿರುವ ತಪ್ಪುಗಳು ಬಹಿರಂಗವಾಗಬೇಕು ಎಂದು ಒತ್ತಾಯಿಸಿದ್ದಾರೆ.