ಐಪಿಎಸ್ ಮಧುಕರ್ ಶೆಟ್ಟಿ ನಿಗೂಢ ಸಾವು: ತಿಪ್ಪೆ ಸಾರಿಸಿದ ತಜ್ಞರ ಸಮಿತಿ ವರದಿ
ಬೆಂಗಳೂರು, ಸೆಪ್ಟೆಂಬರ್ 9: ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಸಾವಿನ ಬಗ್ಗೆ ಯಾವುದೇ ಗಟ್ಟಿಯಾದ ತೀರ್ಮಾನಕ್ಕೆ ಬರಲು ಕರ್ನಾಟಕ ಸರಕಾರ ನೇಮಕ ಮಾಡಿದ್ದ ತಜ್ಞರ ಸಮಿತಿ ವಿಫಲವಾಗಿದೆ.
ಕಳೆದ ವರ್ಷ ಡಿಸೆಂಬರ್ 28ರಂದು ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಹೈದ್ರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಧಿಕಾರಿಯ ಪತ್ನಿ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಸರಕಾರ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿತ್ತು.
ಜತೆಗೆ, ತನಿಖೆಗಾಗಿ ಹೈದ್ರಾಬಾದಿಗೂ ಕಳುಹಿಸಿಕೊಟ್ಟಿತ್ತು. ಸುಮಾರು 9 ತಿಂಗಳ ನಂತರ ಸಮಿತಿಯು ತನ್ನ ಪ್ರಾಥಮಿಕ ವರದಿಯನ್ನು ಕರ್ನಾಟಕ ಸರಕಾರಕ್ಕೆ ಸಲ್ಲಿಸಿದೆ.

'ಡೆಕ್ಕನ್ ನ್ಯೂಸ್' ಪೋರ್ಟಲ್ ಪ್ರಕಟಿಸಿರುವ ವರದಿಯ ಪ್ರಕಾರ, ತಜ್ಞರ ಸಮಿತಿಯು ಸೆಪ್ಟೆಂಬರ್ 7ರಂದು ಅಂದರೆ ಎರಡು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದೆ. 'ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ' ಕಾಣಿಸುವ ಪ್ರಾಥಮಿಕ ವರದಿಯನ್ನು ಸಮಿತಿಯು ಇಲಾಖೆಯ ಮುಂದೆ ಅರುಹಿದೆ.
ವರದಿಯಲ್ಲೇನಿದೆ?
ಅತ್ಯಂತ ಸದೃಢ ಮೈಕಟ್ಟು ಹೊಂದಿದ್ದ ಅಜಾನುಬಾಹು ಅಧಿಕಾರಿ ಮಧುಕರ್ ಶೆಟ್ಟಿ. ಇವರು ಎಚ್1ಎನ್ 1 ಹೆಸರಿನಲ್ಲಿ ಅಕಾಲಿಕ ಮರಣಕ್ಕೆ ತುತ್ತಾದಾಗ ಸಹಜವಾಗಿಯೇ ಒಂದಷ್ಟು ಪ್ರಶ್ನೆಗಳು ಎದ್ದಿದ್ದವು. ಅದೂ ಪಂಚತಾರಾ ಆಸ್ಪತ್ರೆಯಲ್ಲಿ ಡಾ. ಶೆಟ್ಟಿ ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ತಜ್ಞ ವೈದ್ಯರ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಸುಮಾರು 9 ತಿಂಗಳ ಕಾಲ ಸಮಯ ತೆಗೆದುಕೊಂಡಿರುವ ಸಮಿತಿಯು ಇದೀಗ ಪ್ರಾಥಮಿಕ ವರದಿ ನೀಡಿದೆಯಾದರೂ ತಾರ್ಕಿಕವಾದ ಅಂಶಗಳು ಕಾಣಿಸುತ್ತಿಲ್ಲ.

ವ್ಯಾಪ್ತಿ ನೆನಪಿಸಿಕೊಂಡ ಸಮಿತಿ
ಪ್ರಾಮಾಣಿಕ ಅಧಿಕಾರಿ ಎನ್ನಿಸಿಕೊಂಡಿದ್ದ ಮಧುಕರ್ ಶೆಟ್ಟಿ ಅವರ ಅಕಾಲಿಕ ಸಾವಿನ ಕುರಿತು ಬೆಳಕು ಚೆಲ್ಲಲು ನೇಮಕಗೊಂಡಿದ್ದ ಸಮಿತಿಗೆ ಪ್ರಕರಣದ ವ್ಯಾಪ್ತಿಯೂ ಇದೀಗ ನೆನಪಾಗಿದೆ. ಇದನ್ನೇ ಕರ್ನಾಟಕ ಸರಕಾರಕ್ಕೂ ತಿಳಿ ಹೇಳುವ ಪ್ರಯತ್ನ ಮಾಡಿದೆ. ತನ್ನ ಪ್ರಾಥಮಿಕ ವರದಿಯನ್ನು ತೆಲಂಗಾಣ ಸರಕಾರಕ್ಕೆ ಕಳುಹಿಸಿಕೊಡುವಂತೆ ಸಮಿತಿಯುವ ಶಿಫಾರಸು ಮಾಡಿದೆ. ಜತೆಗೆ, ಅಧಿಕಾರಿಯ ಅಕಾಲಿಕ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಅವರ ಪತ್ನಿಗೂ ತೆಲಂಗಾಣ ಸರಕಾರಕ್ಕೆ ಪತ್ರ ಬರೆಯುವಂತೆ ಸಮಿತಿ ಅಭಿಪ್ರಾಯಪಟ್ಟಿದೆ. ತೆಲಂಗಾಣ ವೈದ್ಯಕೀಯ ಸಮಿತಿಗೆ ಪ್ರಕರಣವನ್ನು ವಹಿಸಲು ಅಲ್ಲಿನ ಸರಕಾರವನ್ನು ಕೋರುವಂತೆ ತಿಳಿಸಿದೆ.
ಲಭ್ಯ ಇರುವ ದಾಖಲೆಗಳನ್ನು ಎದುರಿಗಿಟ್ಟುಕೊಂಡು ನೋಡಿದರೆ, ಸಮಿತಿ ಪೂರ್ಣ ಪ್ರಮಾಣದಲ್ಲಿ ಸಫಲವಾಗಿಲ್ಲ ಎಂಬುದು ಕಂಡುಬರುತ್ತದೆ. ಮಧುಕರ್ ಶೆಟ್ಟಿ ಆಸ್ಪತ್ರೆಗೆ ದಾಖಲಾದ ದಿನ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಇತರ ಸಿಬ್ಬಂದಿ ಹೇಳಿಕೆಯನ್ನೇ ಇನ್ನೂ ಪಡೆಯಬೇಕಿದೆ ಎಂದು ಸಮಿತಿ ತಿಳಿಸಿದೆ. ಅದಾದ ಮಾರನೇ ದಿನ ನೀಡಲಾದ ಚಿಕಿತ್ಸೆಯ ಕುರಿತು ದಾಖಲೆಗಳು ಲಭ್ಯವಾಗಬೇಕಿದೆ ಎಂದು ಹೇಳಿದೆ. ಮತ್ತು ಈ ಕಾರಣಕ್ಕೆ ಕಾಂಟಿನೆಂಟಲ್ ಆಸ್ಪತ್ರೆಯ ಚಿಕಿತ್ಸಾ ವಿಧಾನದಲ್ಲಿ ವಿಫಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅರುಹಿದೆ. ವಿಶೇಷ ಅಂದರೆ ಇದಕ್ಕೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.
ವಿಷಯ ಹೀಗಿರುವಾಗ ಅಧಿಕಾರಿ ಮಧುಕರ್ ಶೆಟ್ಟಿ ಅವರ ಸಾವಿನ ಕುರಿತು ಯಾವುದೇ ತೀರ್ಮಾನಕ್ಕೆ ಬರುವುದು ಇವತ್ತಿಗೂ ಕಷ್ಟ.












Click it and Unblock the Notifications