'ಆಸಿಡ್ ದಾಳಿಕೋರನ ಮದುವೆ ಮಾಡಿಸಿದ್ದನ್ನು ಸಹಿಸಿಕೊಂಡ ಸಹನಶೀಲೆ ನನ್ನ ಪತ್ನಿ'
Recommended Video
ಬೆಂಗಳೂರು, ನವೆಂಬರ್ 18: ವಯಸ್ಸು ಮತ್ತು ಅನುಭವವನ್ನು ಗುರುತಿಸಿ, ನನ್ನನ್ನು ಕೆಲವರು ಭೀಷ್ಮ ಎಂದು ಕರೆಯುತ್ತಾರೆ. ಆ ಭೀಷ್ಮನ ಮಾತನ್ನು ಕೇಳಿದ್ದರೆ ಕೌರವರು ನಾಶವಾಗುತ್ತಿರಲಿಲ್ಲ. ಅದೇ ರೀತಿ ರಾಷ್ಟ್ರದ ಅಭ್ಯುದಯದ ಹಾಗೂ ರಾಜ್ಯದ ಅಭಿವೃದ್ಧಿಯ ದೃಷ್ಠಿಯಿಂದ ನಾನು ನೀಡಿದ ಸಲಹೆಯನ್ನು ಕೆಲವರು ತಿರಸ್ಕರಿಸಿ ಮೂಲೆಗುಂಪಾದರು ಎಂದು ದೇವೇಗೌಡ ಅವರು ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದ ಅವರು, ನನ್ನ ಜೀವನದಲ್ಲಿ ಪ್ರಭಾವ ಬೀರಿದ್ದು ಇಬ್ಬರು ಮಹಿಳೆಯರು. ಒಬ್ಬರು ತಾಯಿ ದೇವಮ್ಮ, ಮತ್ತೊಬ್ಬರು ಪತ್ನಿ ಚೆನ್ನಮ್ಮ ಎಂದು ಹೇಳಿದರು.
ರಾಜ್ಯ ರಾಜಕಾರಣದ ಅಚ್ಚರಿಗಳನ್ನು ಮನೆಯಂಗಳದ ಮಾತುಕತೆಯಲ್ಲಿ ತೆರೆದಿಟ್ಟರು ಮಾಜಿ ಪ್ರಧಾನಿ
ನನಗೆ ವಿದ್ಯಾಭ್ಯಾಸ ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ ತಾಯಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಮೈಸೂರು ಚಳವಳಿಯಲ್ಲಿ ಪಾಲ್ಗೊಂಡು, ಬಂಧನಕ್ಕೊಳಗಾದ ಪ್ರಸಂಗ, ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ಕಾಣಲು ಪ್ರಯಾಣ ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದ್ದರು ಊರಿನ ಪ್ರಮುಖರು ಎಂದರು.
ಕೊಟ್ಟಿಗೆಯಲ್ಲಿ ಒಡವೆ ಕಳಚಿ ಕೊಟ್ಟಿದ್ದ ಚೆನ್ನಮ್ಮರನ್ನು ಸ್ಮರಿಸಿದರು
ನನಗೆ ಒಂದು ಸಾವಿರ ರುಪಾಯಿ ಮೌಲ್ಯದ ಗುತ್ತಿಗೆ ಕೊಟ್ಟು ಪ್ರೋತ್ಸಾಹಿಸಿದ ಅಧಿಕಾರಿ, ನನಗೆ ದೊರೆತ ಇಪ್ಪತ್ತೈದು ಸಾವಿರ ರುಪಾಯಿ ಗುತ್ತಿಗೆಯ ಅವಕಾಶವನ್ನು ಉಳಿಸಿಕೊಳ್ಳಲು ತನ್ನ ಒಡವೆ ಕಳಚಿ ದನದ ಕೊಟ್ಟಿಗೆಯಲ್ಲಿ ಗುಟ್ಟಾಗಿ ಪತ್ನಿ ಕೊಟ್ಟರು ಎಂದು ಸಹಕಾರವನ್ನು ನೆನೆದರು. ಹದಿನೆಂಟು ಸದಸ್ಯರ ಅವಿಭಕ್ತ ಕುಟುಂಬದಲ್ಲಿ ಬೆರೆತು, ಕಷ್ಟ- ಸಂಕಷ್ಟಗಳನ್ನು ಅನುಭವಿಸಿಯೂ ನನ್ನ ಒಳಿತಾಗಿ ಶ್ರಮಿಸಿದ ಪತ್ನಿ ಚೆನ್ನಮ್ಮ ಅವರನ್ನು ದೇವೇಗೌಡ ಮುಕ್ತ ಕಂಠದಿಂದ ಪ್ರಶಂಸಿಸಿದರು.
ಆಸಿಡ್ ದಾಳಿ ಮಾಡಿದವನ ಮದುವೆ ಮಾಡಿಸಿದೆ
ನನ್ನ ಸಹೋದರನ ಮಗನಿಂದ ಚೆನ್ನಮ್ಮ ಆಸಿಡ್ ದಾಳಿಗೆ ಒಳಗಾದಾಗ ಕ್ಯಾನ್ಸರ್ಗೆ ತುತ್ತಾದ ಸಹೋದರನ ಮುಖ ನೋಡಿ, ದಾಳಿಕೋರನನ್ನು ಬಿಡಿಸಿ, ಚಿಕಿತ್ಸೆ ಕೊಡಿಸಿ ಆತನಿಗೆ ಮದುವೆ ಮಾಡಿದೆ. ಆದರೂ ಯಾವ ಅಸಮಾಧಾನ ವ್ಯಕ್ತಪಡಿಸದೆ, ಪ್ರತಿಭಟಿಸದ ತಮ್ಮ ಪತ್ನಿಯ ಸಹನಾಶೀಲ ಗುಣವನ್ನು ದೇವೇಗೌಡರು ಕೊಂಡಾಡಿದರು.
ದೇವೇಗೌಡರು ಪ್ರಧಾನಿ ಆದಾಗ ಅಯ್ಯೋ, ನಿಮ್ಮ ಹಣೆಬರಹ ಅಂದಿದ್ದವರು ಯಾರು?
ಪಂಜಾಬ್ ನ ಭತ್ತಕ್ಕೆ ದೇವೇಗೌಡರ ಹೆಸರು
ಪತ್ರಕರ್ತ ಸುಗತ ಶ್ರೀನಿವಾಸ ರಾಜು ಮಾತನಾಡಿ, ಒಳ್ಳೆಯದನ್ನು ಗುರುತಿಸುವ ದೇವೇಗೌಡರ ಗುಣ, ಕಡತವನ್ನು ಓದದೆಯೇ ತಮ್ಮಿಂದ ನಟಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ಮಹತ್ವದ ಸಭೆಯನ್ನು ಮುಂದೂಡಿದ ದೇವೇಗೌಡರ ಮುಗ್ಧತನ, ಪ್ರಾಮಾಣಿಕತೆ ಹಾಗೂ ದಿಟ್ಟತನ, ಪಂಜಾಬ್ನಲ್ಲಿ ಬೆಳೆಯುವ ಅತ್ಯುತ್ತಮ ಗುಣಮಟ್ಟದ ಭತ್ತಕ್ಕೆ ದೇವೇಗೌಡ ಭತ್ತ ಎಂದು ನಾಮಕರಣ ಮಾಡಿದ್ದನ್ನು ಸ್ಮರಿಸಿದರು.
ಎರಡನೇ ಸಾಲಿನ ನಾಯಕತ್ವ ಬೆಳೆಸಿದರು
ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ಅವರ ಸ್ವಾರಸ್ಯಕರ ಲೇಖನ ಹಾಗೂ ತಮ್ಮ ರಾಜಕೀಯ ಜೀವನದಲ್ಲಿ ದೇವೇಗೌಡರು ಎರಡನೇ ಸಾಲಿನ ನಾಯಕತ್ವವನ್ನು ಬೆಳೆಸಿದ ಕಥನವನ್ನು ಪರಿಚಯಿಸಿದರು. ಗುಪ್ತಚರ ಇಲಾಖೆಯ ಸಲಹೆಯನ್ನೂ ಧಿಕ್ಕರಿಸಿ ಕಾಶ್ಮೀರಕ್ಕೆ ತೆರಳಿ, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಚುನಾವಣೆ ನಡೆಸಿ ಶಾಂತಿ ಸ್ಥಾಪಿಸಲು ದೇವೇಗೌಡರು ಮಾಡಿದ ಪ್ರಯತ್ನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಅವರ ಕೊಡುಗೆ ಬಗ್ಗೆ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಅವರು ಎಂಬತ್ತೈದು ವರ್ಷದ ದೇವೇಗೌಡ ಅವರಿಗೆ ಫಲ-ತಾಂಬೂಲ ನೀಡಿ ಸನ್ಮಾನಿಸಿ, ಗೌರವಿಸಿದರು. ದೇವೇಗೌಡ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ವಿಶೇಷತೆಗಳಲ್ಲೊಂದಾಗಿತ್ತು.