ಸ್ವಂತಿಕೆ ಇಲ್ಲದ ಪತ್ರಕರ್ತ: ರವಿಬೆಳಗೆರೆ ವಿರುದ್ಧ ಇಂದ್ರಜಿತ್ ವಾಗ್ದಾಳಿ
ಬೆಂಗಳೂರು, ಆಗಸ್ಟ್ 31: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ತೀವ್ರ ಮಟ್ಟದಲ್ಲಿದೆ ಎಂದು ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸೋಮವಾರ ಸಿಸಿಬಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿಲ್ ಲಂಕೇಶ್, ಸುಮಾರು 4-5 ಗಂಟೆ ಕುಳಿತು ವಿಡಿಯೋಗಳು ಸೇರಿದಂತೆ ಸಾಕ್ಷಿ ಸಮೇತ ದಾಖಲೆಗಳನ್ನು ನೀಡಿದ್ದೇನೆ. ಮಾದಕ ವಸ್ತು ಜಾಲದಲ್ಲಿರುವ ಸುಮಾರು 15 ನಟ ನಟಿಯರು, ಸರಬರಾಜುದಾರರ ವಿವರ ನೀಡಿದ್ದೇನೆ ಎಂದು ತಿಳಿಸಿದರು.
ಅವರ ಹೆಸರುಗಳನ್ನು ನಾನು ಬಹಿರಂಗಪಡಿಸುವುದಿಲ್ಲ. ಇದರಿಂದ ತನಿಖೆಗೆ ಅಡ್ಡಿಯಾಗಬಹುದು. ಎಲ್ಲ ಮಾಹಿತಿಗಳನ್ನೂ ಸಿಸಿಬಿಗೆ ನೀಡಿದ್ದೇನೆ. ಅವರು ಈಗಾಗಲೇ ತನಿಖೆ ನಡೆಸಿದ್ದು, ನಾನು ನೀಡಿರುವ ದಾಖಲೆಗಳ ಆಧಾರದಲ್ಲಿ ಮತ್ತಷ್ಟು ತನಿಖೆ ನಡೆಸಲಿದ್ದಾರೆ. ಬಳಿಕ ಅವರೇ ಎಲ್ಲ ಹೆಸರುಗಳೊಂದಿಗೆ ನಿಮಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ನಾನು ನೀಡಿರುವ ಮಾಹಿತಿಗಳಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಜತೆಗೆ ಸಂತೋಷಗೊಂಡು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿದ್ದಾರೆ ಎಂದು ಹೇಳಿದರು. ಮುಂದೆ ಓದಿ...

ರಕ್ಷಣೆ ಕೇಳಿಲ್ಲ, ಬೆಂಬಲ ಕೇಳಿದ್ದು
ನಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ. ನಾನು ರಕ್ಷಣೆಯನ್ನು ಕೇಳಿಲ್ಲ. ನಿನ್ನೆ ಮೊನ್ನೆ ಬಂದಿರುವ ಕಲಾವಿದರು, ರಾಜಕೀಯದವರ ಮಕ್ಕಳಿಂದ ನನಗೆ ರಕ್ಷಣೆ ಬೇಡ. ನಾನು ಬೆಂಬಲ ಕೇಳಿದ್ದೆ. ಅದಕ್ಕೆ ಚಿತ್ರರಂಗದ ನಟರು, ನಿರ್ಮಾಪಕರು, ರಾಜಕಾರಣಿಗಳು ಪಕ್ಷಭೇದ ಮರೆತು ನನಗೆ ಸಂಪೂರ್ಣ ಸಪೋರ್ಟ್ ನೀಡಿದ್ದಾರೆ. ಜನರು ತಮ್ಮ ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳುಹಿಸಲು ಹೆಸರಿಸುವ ಸ್ಥಿತಿ ಬಂದಿದೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಸಾಮಾಜಿಕ ಕಳಕಳಿಯ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದರು.

ಚಿರು ಬಗ್ಗೆ ಹೇಳಿಕೆ ವಾಪಸ್
ಚಿರಂಜೀವಿ ಸರ್ಜಾ ಅವರ ಪೋಸ್ಟ್ ಮಾರ್ಟಂ ಕುರಿತು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದೇನೆ. ಸತ್ತವರ ಬಗ್ಗೆ ಮಾತನಾಡಬಾರದು. ಚಿರುವಿಗೆ ಉತ್ತಮ ಭವಿಷ್ಯ ಇತ್ತು. ಮರಣೋತ್ತರ ಪರೀಕ್ಷೆ ಮಾಡಬೇಕಿತ್ತು ಎಂದಿದ್ದೆ. ಆ ಮಾತನ್ನು ವಾಪಸ್ ಪಡೆದಿದ್ದೇನೆ ಎಂದು ಹೇಳಿದರು.

ಸುಪಾರಿ ಕೊಟ್ಟವರ ಬಳಿ...
ಲಂಕೇಶ್ ಅವರಿಗೆ ಹಿರಿಯ ಸಾಹಿತಿಯೊಬ್ಬರು ಇವನು ಈಶ ಅಲ್ಲ ಕೇಶ ಎಂದಿದ್ದರು. ಅದನ್ನೇ ಈ ಪತ್ರಕರ್ತ ಹೇಳುತ್ತಿದ್ದಾರೆ. ಈ ಪತ್ರಕರ್ತನಿಗೆ ಸ್ವಂತ ವಾಕ್ಯ ಹೇಳಲೂ ಬರುವುದಿಲ್ಲ. ಅವರ ಮಾತುಗಳನ್ನು ಕೇಳಿದರೆ ನಗು ಬರುತ್ತದೆ. ತನ್ನದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ರಿಪೋರ್ಟರ್ನ ಸುಪಾರಿ ಕೊಟ್ಟವನ ಬಳಿ ಕಾಮೆಂಟ್ ಕೇಳುತ್ತಿದ್ದೀರಲ್ಲ. ಸಮಾಜಕ್ಕೆ ಯಾವ ಸಂದೇಶ ನೀಡುತ್ತೀರಿ? ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರನ್ನು, ಸಾಹಿತಿಗಳನ್ನು ಕರೆಯಿಸಿ ಅವರಿಂದ ಸಮಾಜಕ್ಕೆ ಸಂದೇಶ ನೀಡಿ ಎಂದು ರವಿ ಬೆಳಗೆರೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕಾಪಿ ಮಾಡುವವರ ಬಗ್ಗೆ ಮಾತಾಡೊಲ್ಲ
ಯುವ ಪತ್ರಕರ್ತರು ಹೆಮಿಂಗ್ವೇ, ತೇಜಸ್ವಿ, ಅನಂತಮೂರ್ತಿ, ಲಂಕೇಶ್, ಖುಷ್ವಂತ್ ಸಿಂಗ್ ಅವರಂತಹವನ್ನು ಓದಬೇಕು. ಇಂತಹ ಸ್ವಂತಿಕೆ ಇಲ್ಲದವರನ್ನು ಅಲ್ಲ. ಬೇರೆ ಸಾಹಿತಿಗಳನ್ನು ಕಾಪಿ ಮಾಡುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಬೆಳಗೆರೆ ಅವರನ್ನು ಟೀಕಿಸಿದರು.

ತೇಜೋವಧೆ ಉದ್ದೇಶವಲ್ಲ
ನಮ್ಮ ಮಕ್ಕಳಿಗೆ, ಯುವ ಜನರಿಗೆ ಒಂದು ಸಂದೇಶ ಹೋಗಬೇಕು ಎನ್ನುವುದು ನಮ್ಮ ಕರ್ತವ್ಯ ಕಾಳಜಿ. ಇದರಲ್ಲಿ ಭಾಗಿಯಾದವರ ಹೆಸರು ಹೇಳುವುದು ದೊಡ್ಡದಲ್ಲ. ಆದರೆ ಅದರಿಂದ ತನಿಖೆಗೆ ತೊಂದರೆಯಾಗುತ್ತದೆ. ನಾನು ನೀಡಿರುವ ಸಾಕ್ಷ್ಯಗಳ ಕಂಟೆಂಟ್ಗೂ ತೊಂದರೆಯಾಗುತ್ತದೆ. ಹೆಸರು ಹೇಳಿ ಅವರನ್ನು ವೈಯಕ್ತಿಕವಾಗಿ ತೇಜೊವಧೆ ಮಾಡುವುದು ನನ್ನ ಉದ್ದೇಶ ಅಲ್ಲ. ಸಾಕ್ಷಿ ಸಮೇತ ಹೆಸರು ಮತ್ತು ವಿವರಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ಅವರು ತನಿಖೆ ನಡೆಸುತ್ತಾರೆ ಎಂದರು.

ತನಿಖೆ ನಡೆಸುತ್ತೇವೆ
ಮಾಧ್ಯಮದಲ್ಲಿ ನೀಡಿದ್ದ ಮಾಹಿತಿಗಳನ್ನಾಧರಿಸಿ ಇಲ್ಲಿಗೆ ಬಂದು ವಿವರ ನೀಡುವಂತೆ ಇಂದ್ರಜಿತ್ ಲಂಕೇಶ್ ಅವರಿಗೆ ಸೂಚಿಸಿದ್ದೆವು. ಅದರಂತೆ ಬೆಳಿಗ್ಗೆ ಬಂದು ಅನೇಕ ಮಾಹಿತಿ ನೀಡಿದ್ದಾರೆ. ಅವರು ನೀಡಿರುವ ಮಾಹಿತಿ ಆಧಾರದಲ್ಲಿ ಮುಂದಿನ ದಿನಗಳಲ್ಲಿ ತನಿಖೆ ನಡೆಸುತ್ತೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.












Click it and Unblock the Notifications