ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಸುರಂಗ ಅಕ್ವೇರಿಯಂ ಆರಂಭ
ಬೆಂಗಳೂರು, ಜುಲೈ 01: ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಗುರುವಾರದಿಂದ ಸಾರ್ವಜನಿಕರಿಗೆ ಸುರಂಗ ಅಕ್ವೇರಿಯಂ ತೆರೆಯಲಾಗಿದ್ದು, ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ಆಕರ್ಷಕ ಜಲಚರಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಭಾರತೀಯ ರೈಲ್ವೆ ಅಭಿವೃದ್ಧಿ ನಿಗಮ ಹಾಗೂ ಎಚ್ಎನ್ಐ ಎಂಟರ್ ಪ್ರೈಸಸ್ ಜಂಟಿಯಾಗಿ ಅಕ್ವೇರಿಯಂ ಯೋಜನೆ ರೂಪಿಸಿದ್ದವು. ಕೊರೊನಾ ಕಾರಣವಾಗಿ ಯೋಜನೆ ವಿಳಂಬವಾಗಿತ್ತು.
ಇದೀಗ ಯೋಜನೆ ಕಾಮಗಾರಿ ಮುಗಿದಿದ್ದು, ಗುರುವಾರದಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದ ಸಮೀಪ ಈ ಅಕ್ವೇರಿಯಂ ರೂಪಿಸಲಾಗಿದೆ.

"ದೇಶದಲ್ಲೇ ಮೊದಲ ಬಾರಿಗೆ ಸುರಂಗ ಅಕ್ವೇರಿಯಂ ಸ್ಥಾಪನೆ ಮಾಡಲಾಗಿದೆ. ರೈಲ್ವೆ ಪ್ರಯಾಣಿಕರಿಗೆ ಸಮಯ ಕಳೆಯಲು ಇದು ಉತ್ತಮ ತಾಣವಾಗಲಿದೆ" ಎಂದು ಐಆರ್ಎಸ್ಡಿಸಿ ಸೌಲಭ್ಯ ನಿರ್ವಹಣಾ ವಿಭಾಗದ ಸಲಹೆಗಾರ ಎನ್. ರಘುರಾಮ್ ಹೇಳುತ್ತಾರೆ.
"ಇಂಡೋನೇಷ್ಯಾ, ಬ್ಯಾಂಕಾಕ್, ತೈವಾನ್ ಹಾಗೂ ಸಿಂಗಪುರದಿಂದ ವಿವಿಧ ರೀತಿಯ ಮೀನುಗಳನ್ನು ತರಿಸುತ್ತೇವೆ. ಇನ್ನಷ್ಟು ಸೇರ್ಪಡೆಯಾಗುತ್ತವೆ" ಎಂದು ಎಚ್ಎನ್ಐನ ನಿಯಾಜ್ ಅಹ್ಮದ್ ತಿಳಿಸಿದರು.
ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಅಕ್ವೇರಿಯಂ ತೆರೆದಿರಲಿದೆ. 25 ರೂ ಪ್ರವೇಶ ಶುಲ್ಕ ವಿಧಿಸಲಾಗಿದೆ. ಅಕ್ವೇರಿಯಂ ಬಳಿ ಸೆಲ್ಫೀ ಪಾಯಿಂಟ್ಗಳನ್ನೂ ರೂಪಿಸಲಾಗಿದೆ.












Click it and Unblock the Notifications