Power cut Crisis: ದೇಶಾದ್ಯಂತ ವಿದ್ಯುತ್ ಕೊರತೆ, ಪವರ್ ಕಟ್; ಕರ್ನಾಟಕದಲ್ಲೂ ಲೋಡ್ ಶೆಡ್ಡಿಂಗ್
ಬೆಂಗಳೂರು, ಏ. 13: ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಸತತ ಏರಿಕೆಯಿಂದ ಕಂಗೆಟ್ಟಿರುವ ಭಾರತೀಯರು ಪವರ್ ಕಟ್ ಸಮಸ್ಯೆಯಿಂದ ಕಂಗಾಲಾಗಿದ್ಧಾರೆ. ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪವರ್ ಕಟ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಇಲ್ಲದಿರುವುದು ಪವರ್ ಕಟ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಕೋವಿಡ್ ಲಾಕ್ ಡೌನ್ ಬಳಿಕ ಚೇತರಿಸಿಕೊಳ್ಳಲು ಹಪಹಪಿಸುತ್ತಲೇ ಇರುವ ವಿವಿಧ ಉದ್ಯಮಗಳು ಈಗ ವಿದ್ಯುತ್ ಸರಬರಾಜು ವ್ಯತ್ಯಯದಿಂದ ನಲುಗಿಹೋಗಿವೆ.
ಯಾಕೆ ವಿದ್ಯುತ್ ಕೊರತೆ ಕಾಡುತ್ತಿರುವುದು?:
ದೇಶದ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಇದೆ. ಇದಕ್ಕೆ ಕಾರಣ ಕಲ್ಲಿದ್ದಲು ಪೂರೈಕೆಯಲ್ಲಾಗಿರುವ ಸಮಸ್ಯೆ. ಹಾಗೆಯೇ, ವಿದ್ಯುತ್ಗೆ ಇರುವ ಬೇಡಿಕೆ ಬಹಳ ವಿಪರೀತವಾಗಿ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪನ್ನ ಪ್ರಮಾಣ ಹೆಚ್ಚಾಗಿದ್ದರೂ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಕಲ್ಲಿದ್ದಲು ಸಮಸ್ಯೆಯಿಂದಾಗಿ ವಿದ್ಯುತ್ ಉತ್ಪನ್ನ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.

ಪವರ್ ಪಟ್ ಸಮಸ್ಯೆ ಎದುರಿಸುತ್ರಿರುವ ಪ್ರಮುಖ ರಾಜ್ಯಗಳು:
ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಹೊತ್ತು ಲೋಡ್ ಶೆಡ್ಡಿಂಗ್ ನಿರಂತರವಾಗಿ ನಡೆಯುತ್ತಿದೆ. ತಮಿಳುನಾಡು, ಗುಜರಾತ್ ಮೊದಲಾದ ಕೆಲ ರಾಜ್ಯಗಳ ವಿದ್ಯುತ್ ಪೂರೈಕೆ ಕಂಪನಿಗಳು ದುಬಾರಿ ಬೆಲೆ ತೆತ್ತು ವಿದ್ಯುತ್ ಖರೀದಿ ಮಾಡುತ್ತಿವೆ. ಹೀಗಾಗಿ ಅಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಸಮಸ್ಯೆ ಕಡಿಮೆ ಇದೆ.
ಅನೇಕ ಕಡೆ ಇಡೀ ದಿನ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ದಿನದಲ್ಲಿ ಮೂರ್ನಾಲ್ಕು ಗಂಟೆಗಳಾದರೂ ಪವರ್ ಕಟ್ ಆಗುತ್ತಿರುವುದು ಸಾಮಾನ್ಯವಾಗಿದೆ.
ಮುಂಬರುವ ದಿನಗಳು ಇನ್ನೂ ಭೀಕರ:
ಬೇಸಿಗೆಯ ಆರಂಭಿಕ ಹಂತದಲ್ಲೇ ಇಷ್ಟು ವ್ಯಾಪಕ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ವಿಪರೀತವಾಗಲಿದೆ. ಕಲ್ಲಿದ್ದಲು ಪೂರೈಕೆ ಸರಿಯಾಗಿ ಆಗದೇ ಇದ್ದಲ್ಲಿ ವಿದ್ಯುತ್ ಕೊರತೆ ಇನ್ನೂ ವಿಪರೀತವಾಗಿ ಕಾಡುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ. ಈ ಸುಡುಸುಡು ಬಿಸಿಲಿನಲ್ಲಿ ಜನಸಾಮಾನ್ಯರು ಪವರ್ ಕಟ್ ಬಿಸಿಯನ್ನೂ ಎದುರಿಸಬೇಕಾಗಿದೆ.
ಕರ್ನಾಟಕದ್ದು ಇನ್ನೊಂದು ಸಮಸ್ಯೆ:
ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ವಿದ್ಯುತ್ ಸಂಗ್ರಹ ಅಗತ್ಯಕ್ಕೆ ತಕ್ಕಷ್ಟು ಇದೆ. ಆದರೂ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ವಿಪರೀತ ಪವರ್ ಕಟ್ ಸಮಸ್ಯೆ ಇದೆ. ಪ್ರತೀ ದಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತಿದೆ.
ವಿದ್ಯುತ್ ಇದ್ದರೂ ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ನಡೆಯಲು ಕಾರಣ ಇದೆ. ಇಲ್ಲಿ ಕೆಲವಾರು ತಿಂಗಳುಗಳಿಂದ ಅಂಡರ್ಗ್ರೌಂಡ್ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಬೆಂಗಳೂರಿನಲ್ಲಿ ಈ ಅಂಡರ್ ಗ್ರೌಂಡ್ ಕೇಬಲ್ ಹಾಕುವ ಕಾಮಗಾರಿ ಇನ್ನೂ ಏಳೆಂಟು ತಿಂಗಳು ನಡೆಯುವ ನಿರೀಕ್ಷೆ ಇದೆ. ಮುಂಗಾರು ಬರುವ ಮುನ್ನ ಕೇಬಲ್ ಅಳವಡಿಕೆ ಮುಗಿಯಬೇಕೆಂದು ಡೆಡ್ಲೈನ್ ನೀಡಲಾಗಿದ್ದರೂ ಕಾಮಗಾರಿ ಬೇಗ ಮುಗಿಯುವ ಸಾಧ್ಯತೆ ಇದೆ.
ನಗರದ ವಿವಿಧ ಪ್ರದೇಶಗಳಲ್ಲಿ ಪ್ರತೀ ದಿನವೂ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ವಾರಾಂತ್ಯದ ಎರಡು ದಿನಗಳಲ್ಲಿ ದೊಡ್ಡ ಕಾಮಗಾರಿಗಳನ್ನ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ವೀಕೆಂಡ್ಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಲೋಡ್ ಶೆಡ್ಡಿಂಗ್ ಇದೆ.
ಬೆಂಗಳೂರಿನ ಜನರು ಪವರ್ ಕಟ್ ಸಮಸ್ಯೆಯನ್ನ ಎದುರಿಸುವುದು ಅನಿವಾರ್ಯ. ಮಳೆಗಾಲ ಶುರುವಾಗುವಷ್ಟರಲ್ಲಿ ಕೇಬಲ ಅಳವಡಿಕೆ ಕಾರ್ಯ ಮುಗಿಯುವುದು ಮುಖ್ಯ. ಇಲ್ಲದಿದ್ದರೆ ಅನಾಹುತ ದುರ್ಘಟನೆಗಳ ಸಂಭವನೀಯತೆ ಇರುತ್ತದೆ. ಆದ್ದರಿಂದ ಕೆಲ ತಿಂಗಳು ಜನರು ಪವರ್ ಕಟ್ ಸಮಸ್ಯೆಯನ್ನ ಸಹಿಸಿಕೊಳ್ಳಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications