ಬೆಂಗಳೂರು: ಹೆಚ್ಚಾದ ಕೋವಿಡ್ ಪಾಸಿಟಿವಿಟಿ ದರ, ಓಮಿಕ್ರಾನ್ ಹೊಸ ತಳಿ ಬಗ್ಗೆ ಖಚಿತತೆ ಇಲ್ಲ!
ಬೆಂಗಳೂರು, ಅಕ್ಟೋಬರ್ 17: ಸಿಲಿಕಾನ್ ಸಿಟಿಯಲ್ಲಿ ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆಯು ಕಡಿಮೆ ಆಗುತ್ತಿರುವ ಮಧ್ಯೆ ಒಂದು ವಾರದಿಂದ ಕೋವಿಡ್ ಪಾಸಿಟಿವ್ ದರ ಹಂತ ಹಂತವಾಗಿ ಏರಿಕೆ ಆಗಿದೆ.
ಒಂದು ಕಡೆ ಸಣ್ಣ ಪ್ರಮಾಣದಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದ್ದರೆ ಮತ್ತೊಂದೆಡೆ ಓಮಿಕ್ರಾನ್ನ ಹೊಸ ರೂಪಾಂತರ ತಳಿ ಎಕ್ಸ್ಬಿಬಿ ಕುರಿತು ಆರೋಗ್ಯ ಇಲಾಖೆ, ಬಿಬಿಎಂಪಿ ಯಾವುದೇ ಮಾಹಿತಿಯನ್ನು ಖಚಿತ ಪಡಿಸಿಲ್ಲ. ಈ ಬೆಳೆವಣಿಗೆ ಹೀಗೆ ಮುಂದುವರಿದರೆ ಬೆಂಗಳೂರು ಸೇರಿದಂತೆ ನಾಡಿನ ಜನರಲ್ಲಿ ಮತ್ತೆ ಅನಾರೋಗ್ಯ, ವೈರಸ್ ಭೀತಿ ಮನೆ ಮಾಡುವುದರಲ್ಲಿ ಸಂದೇಹವಿಲ್ಲ.
ಆರೋಗ್ಯ ಇಲಾಖೆ ಶನಿವಾರದ (ಅ.15) ನೀಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದೊಂದು ವಾರದಲ್ಲಿ ನಗರದಲ್ಲಿ ಕೋವಿಡ್ ಪಾಸಿಟಿವಿದರ ಏರಿಕೆ ಕಂಡಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 4.8 ರಷ್ಟು ಪಾಸಿಟಿವಿಟಿ ದರ ಇದ್ದರೆ, ಹಿಂದಿನ ದಿನ ಶುಕ್ರವಾರ ಶೇ.4.2ರಷ್ಟು ಇತ್ತು. ಅದೇ ಗುರುವಾರ ಶೇ. 3.6 ಮತ್ತು ಬುಧವಾರ ಶೇ.3.1 ಕಂಡು ಬಂದಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಪಾಸಿಟಿವಿಟಿ ದರ ಅಧಿಕ, ಆತಂಕ ಬೇಡ
ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸದಿದ್ದರೂ ಪಾಸಿಟಿವಿಟಿ ದರ ಹೆಚ್ಚಾಗಿದೆ. ಕಡಿಮೆ ತಪಾಸಣೆ ವೇಳೆ ಪಾಸಿಟಿವಿಟಿ ದರ ಹೆಚ್ಚಳವಾದರೆ ಭಯಪಡುವ ಅಗತ್ಯವಿಲ್ಲ. ತಪಾಸಣೆಗೆ ಒಳಪಡುವವರ ಸಂಖ್ಯೆ ಕಡಿಮೆ ಇದ್ದಾಗಲೂ ಅವರಲ್ಲಿ ಸೋಂಕು ಕಂಡು ಬಂದರೆ ಪಾಸಿಟಿವಿಟಿ ದರ ಪರೀಕ್ಷಿಸಲ್ಪಟ್ಟ ಜನರ ಸಂಖ್ಯೆ ಬಹುತೇಕ ಸಮನಾಗಿರುತ್ತದೆ. ಇದರಿಂದ ಯಾವ ಸಮಸ್ಯೆ ಇಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಇದೇ ವರ್ಷ ಕಳೆದ ಆಗಸ್ಟನಲ್ಲಿ ಸಿಂಗಾಪುರ್ ಹಾಗೂ ಯುನೈಟೆಡ್ ಸ್ಟೇಟ್ಸ್ನಲ್ಲಿ ಕೊರೊನಾ ರೂಪಾಂತರ ಎಕ್ಸ್ಬಿಬಿ ರೂಪಾಂತರ ಪತ್ತೆಯಾಗಿದೆ. ಈಗಾಗಲೇ ದೇಶದ ನಾಲ್ಕು ರಾಜ್ಯಗಳಲ್ಲಿ ಈ ನೂತನ ಸೋಂಕು ಪತ್ತೆಯಾಗಿದೆ.
ಹೊಸ ಎಕ್ಸ್ಬಿಬಿ ವೈರಸ್ ಬಗ್ಗೆ ಖಚಿತತೆ ಇಲ್ಲ
ಬೆಂಗಳೂರಿನಲ್ಲಿ ಸಾಪ್ತಾಹಿಕ ಕೋವಿಡ್ 19 ಪರೀಕ್ಷಾ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿದೆ ಆದರೆ ಒಮಿಕ್ರಾನ್ನ ಹೊಸ ಎಕ್ಸ್ಬಿಬಿ ರೂಪಾಂತರದ ಯಾವುದೇ ಸೋಂಕನ್ನು ಬಿಬಿಎಂಪಿ ಇನ್ನೂ ಖಚಿತಪಡಿಸಿಲ್ಲ. ಭಾರತದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಸಹ ಸೋಂಕು ಕಂಡು ಬಂದಿದೆ. ಅದೇ ಸೋಂಕು ಕರ್ನಾಟಕ ಇಲ್ಲವೇ ಬೆಂಗಳೂರಿಗೆ ಕಾಲಿಟ್ಟಿದಿಯಾ ಅಥವಾ ಇಲ್ಲವಾ? ಎಂಬುದರ ಬಗ್ಗೆ ಆರೋಗ್ಯ ಇಲಾಖೆಯಾಗಲಿ, ಬಿಬಿಎಂಪಿ ಆಗಲಿ ಖಚಿತ ಪಡಿಸಿಲ್ಲ.
ಲಕ್ಷಣ ಹೆಚ್ಚಾಗಲು ಎಕ್ಸ್ಬಿಬಿ ಸೋಂಕು ಕಾರಣವಲ್ಲ
ಈ ಮಧ್ಯೆ ಬಿಬಿಎಂಪಿ ದೇಹದ ಅತಿ ತಾಪಮಾನ, ನಾಡಿಬಡಿತ, ಉಸಿರಾಟದಲ್ಲಿ ಏರಿಕೆಗೆ ಒಮಿಕ್ರಾನ್ ಹೊಸ ರೂಪಾಂತರದ ಎಕ್ಸ್ಬಿಬಿ ವೈರಸ್ ಸೋಂಕು ಕಾರಣವಲ್ಲ. ಈ ವೈರಸ್ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಕಂಡುಬರುವ ಒಮಿಕ್ರಾನ್ ಬಿಎ 2.75 ಮತ್ತು ಬಿಜೆ 1 ರೂಪಾಂತರಗಳ ಸಂಯೋಜನೆಯಾಗಿದೆ.
ಜ್ವರ ಮತ್ತು ಸಾಮಾನ್ಯ ಗಂಟಲಿನ ನೋವು ಇದು ಒಮಿಕ್ರೋನ್ ನೂತನ ತಳಿ ಎಸ್ಕಬಿಬಿ ಸೋಂಕಿನ ಲಕ್ಷಣಗಳಾಗಿವೆ. ಈ ಸೋಂಕು ಸದ್ಯ ಮಹಾರಾಷ್ಟ್ರದಲ್ಲಿ ವರದಿಯಾಗಿದ್ದು, ಕರ್ನಾಟಕ್ಕೂ ಕಾಲಿಡುವ ಸಾಧ್ಯತೆ ಇದೆ. ಆದರೆ ಕರ್ನಾಟಕದಲ್ಲಿ ಈ ಸೋಂಕಿನ ಬಗ್ಗೆ ಯಾವುದೇ ಮಾಹಿತಿ, ಪ್ರಕರಣ ದಾಖಲಾತಿ ಕಂಡು ಬಂದಿಲ್ಲ. ಒಂದು ವೇಳೆ ರಾಜ್ಯಕ್ಕೆ ಕಾಲಿಟ್ಟರೆ ಸಾರ್ವಜನಿಕ ಆರೋಗ್ಯ ಕಣ್ಗಾವಲು ಪಡೆ ಜೀನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ನಲ್ಲಿ ಸೂಕ್ತವಾಗಿ ತಪಾಸಣೆ ನಡೆಸಿ ಮಾಹಿತಿ ಬಹಿರಂಗಪಡಿಸಲಿದೆ ಎಂದು ಬಿಬಿಎಂಪಿಯ ತ್ರಿಲೋಕ್ ಚಂದ್ರ ಅವರು ಹೇಳಿದರು.
ತ್ಯಾಜ್ಯ ನೀರು ಕಣ್ಗಾವಲು ಮೇಲೆ ಅವಲಂಬನೆ
ಹೊಸ ತಳಿಯ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ವೇಳೆ ಸೈಕಲ್ ಥ್ರೆಶೋಲ್ಡ್ (ಸಿಟಿ) ಎಂಬುದು ರೋಗದ ತೀವ್ರತೆಯನ್ನು ಸೂಚಿಸುತ್ತದೆ. ಇದು ಕೆಲವು ಗಂಭೀರ ಪ್ರಕರಣಗಳಲ್ಲಿ ಮಾತ್ರ ಸಂಭವಿಸುತ್ತದೆ. ಉಳಿದಂತೆ ಅನುಕ್ರಮವಾಗಿ ಸಾಕಷ್ಟು ಉತ್ತಮ ಮಾದರಿಗಳನ್ನು ಸಂಗ್ರಹಿಸಿ ಪರಿಷ್ಕರಿಸಿದಾಗ ಸೂಕ್ತ ವರದಿ ಲಭ್ಯವಾಗುತ್ತದೆ. ಬಿಬಿಎಂಪಿಯು ನೂತನ ತಳಿ ಪತ್ತೆಗೆ ಹೆಚ್ಚು ಪರಿಸರದ ಕಣ್ಗಾವಲು (ವೈರಸ್ ಹರಡುವಿಕೆಗಾಗಿ ತ್ಯಾಜ್ಯ ನೀರನ್ನು ಪರಿಶೀಲಿಸುತ್ತಿದ್ದೇವೆ) ಮೇಲೆ ಅವಲಂಬಿತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.