ಸುದೀಪ್, ಪುನೀತ್, ಯಶ್ ಅಘೋಷಿತ ಆಸ್ತಿ, ಐಟಿ ಇಲಾಖೆ ಮರು ತನಿಖೆ
Recommended Video
ಬೆಂಗಳೂರು, ಅಕ್ಟೋಬರ್ 10: ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಸೇರಿದಂತೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮುಂತಾದ ಸೆಲೆಬ್ರಿಟಿಗಳ ಮನೆ, ಕಚೇರಿಗಳ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಮತ್ತೆ ಮರು ಜೀವ ಸಿಕ್ಕಿದೆ. ಎಲ್ಲಾ ನಟ, ನಿರ್ಮಾಪಕ ಹಾಗೂ ನಿರ್ದೇಶಕರ ಅಘೋಷಿತ ಆಸ್ತಿ ಬಗ್ಗೆ ಮರು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
ಕರ್ನಾಟಕ-ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ್ದ ದಾಳಿಯಲ್ಲಿ ಸುಮಾರು 142 ಕೋಟಿ ರು ಅಘೋಷಿತ ಆಸ್ತಿ ಪತ್ತೆಯಾಗಿದೆ. ಜನವರಿ 02 ಹಾಗೂ 03, 2019ರಂದು ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್ ಮನೆ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಎಂಎಲ್ಸಿ ಸಿ.ಆರ್ ಮನೋಹರ್, ವಿಜಯ್ ಕಿರಗಂದೂರು ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.
ಸ್ಯಾಂಡಲ್ ವುಡ್ ನಟರಿಗೆ ಬಿಗ್ ಶಾಕ್! ಯಾರ್ಯಾರ ಮನೆ ಮೇಲೆ ಐಟಿ ದಾಳಿ
ಐಟಿ ದಾಳಿ ಸಂದರ್ಭದಲ್ಲಿ ಸುಮಾರು 109 ಕೋಟಿ ರು ಆಸ್ತಿ ಪತ್ತೆಯಾಗಿತ್ತು. ತನಿಖೆ ಮುಂದುವರೆಸಿದಾಗ 142 ಕೋಟಿ ರುಗೇರಿದೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ವಿಚಾರಣೆ ನಡೆಸಲಾಗಿದೆ. ಪ್ರಮುಖ ನಟ, ನಿರ್ಮಾಪಕರುಗಳು ಐಟಿ ಕಚೇರಿಗೆ ಹೋಗಿ ತಮ್ಮ ಆಸ್ತಿ ವಿವರ ಲೆಕ್ಕಾಚಾರ ನೀಡಿ ಬಂದಿದ್ದಾರೆ.
ವಿಚಾರಣೆಗೆ ಸಮನ್ಸ್ ನೀಡಬಹುದೇ?
ನಟ, ನಿರ್ಮಾಪಕ ಹಾಗೂ ನಿರ್ದೇಶಕರ ಆಸ್ತಿ ಘೋಷಣೆ ಮತ್ತು ಹಾಲಿ ಲೆಕ್ಕಾಚಾರವನ್ನು ತಾಳೆ ಮಾಡಿ ನೋಡಲಾಗುತ್ತದೆ. ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ಹೆಚ್ಚುವರಿ ಆಸ್ತಿಗೆ ದಂಡ ವಿಧಿಸಬಹುದು, ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಬಹುದು ಅಥವಾ ಆಸ್ತಿ ಮೊತ್ತದ ಪ್ರಮಾಣ ಅಧಿಕವಾಗಿದ್ದು, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಕಂಡು ಬಂದರೆ ಜಾರಿ ನಿರ್ದೇಶನಾಲಯಕ್ಕೂ ತಿಳಿಸಬಹುದು. ನಟ, ನಿರ್ಮಾಪಕರಿಗೆ ಸಮನ್ಸ್ ನೀಡಿ, ವಿಚಾರಣೆಗೆ ಕರೆಸಿಕೊಂಡು ಆಸ್ತಿ ಬಗ್ಗೆ ಸ್ಪಷ್ಟನೆ ಪಡೆಯಬಹುದು.
ಆಡಿಟರ್ ಗಳ ಮನೆ ಮೇಲೂ ದಾಳಿ ನಡೆದಿತ್ತು
ನಟ ಯಶ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಅವರ ಆಡಿಟರ್ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಇದೇ ರೀತಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರ ಲೆಕ್ಕಪರಿಶೋಧಕರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈಗ ಮತ್ತೊಮ್ಮೆ ಎಲ್ಲಾ ನಟ, ನಿರ್ಮಾಪಕರ ಲೆಕ್ಕಪರಿಶೋಧಕರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿ, ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಲೆಕ್ಕಾಚಾರ ಹಾಕುವುದರಲ್ಲಿ ಆಡಿಟರ್ಸ್ ನಿರತರಾಗಿದ್ದಾರೆ
ಆಡಿಟರ್ ಗಳ ನೆರವು ಪಡೆದುಕೊಂಡಿರುವ ನಟ, ನಿರ್ಮಾಪಕರುಗಳು ಈಗ ತಮ್ಮ ಅಘೋಷಿತ ಆಸ್ತಿ ಬಗ್ಗೆ ಇರುವ ಮಾಹಿತಿ, ದಾಖಲೆ, ವ್ಯವಹಾರಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಐಟಿ ಇಲಾಖೆಯಿಂದ ಅಧಿಕೃತವಾಗಿ ವಿಚಾರಣೆಗಾಗಿ ಸಮನ್ಸ್ ಎಂದಾದರೂ ಬರಬಹುದು, ಬಂದಾಗ ದಾಖಲೆಗಳ ಸಮೇತ ಅಘೋಷಿತ ಆಸ್ತಿ ಬಗ್ಗೆ ವಿವರ ನೀಡಿದರೆ, ವಶಪಡಿಸಿಕೊಂಡ ದಾಖಲೆ, ಆಸ್ತಿ ಎಲ್ಲವೂ ಹಿಂತಿರುಗಿಸಲಾಗುತ್ತದೆ, ಇಲ್ಲದಿದ್ದರೆ, ದಾಖಲೆ ಇಲ್ಲದ ವ್ಯವಹಾರ, ಮೊತ್ತಕ್ಕೆ ದಂಡ ವಿಧಿಸಲಾಗುತ್ತದೆ ಅಥವಾ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತದೆ.
ಇಷ್ಟಕ್ಕೂ ಐಟಿ ದಾಳಿ ನಡೆದಿದ್ದು ಏಕೆ?
ಸಿನಿಮಾ ಪ್ರಪಂಚದಲ್ಲಿ ಬಹುತೇಕ ಎಲ್ಲವೂ ನಗದು ವ್ಯವಹಾರದಲ್ಲಿ ನಡೆಯುತ್ತಿರುವ ಬಗ್ಗೆ ಐಟಿ ಇಲಾಖೆ ಗಮನಕ್ಕೆ ಬಂದಿತ್ತು. ಚಿತ್ರ ನಿರ್ಮಾಣ, ನಟ, ನಟಿಯರ ಪೇಮೆಂಟ್, ಚಿತ್ರಮಂದಿರದಿಂದ ಬರುವ (ತೆರಿಗೆ ಕಳೆದುಕೊಂಡು) ಮೊತ್ತ ಎಲ್ಲವೂ ನಗದು ವ್ಯವಹಾರದಲ್ಲಿದೆ. ಇದಲ್ಲದೆ, ಸೇವಾ ತೆರಿಗೆ, ಜಿಎಸ್ ಟಿ ಜಾರಿಯಲ್ಲಿದ್ದರೂ, ಟಿವಿ ಹಕ್ಕು, ಸ್ಯಾಟಲೈಟ್ ಹಕ್ಕು, ಧ್ವನಿಸುರಳಿ ಮಾರಾಟ ಹಕ್ಕು ಎಲ್ಲದರಲ್ಲೂ ತೆರಿಗೆ ಕಟ್ಟಿದ್ದರೂ ಲೆಕ್ಕಕ್ಕೆ ಸಿಗದ ನಗದು ವ್ಯವಹಾರ ಜಾರಿಯಲ್ಲಿರುವುದು ಐಟಿ ದಾಳಿಗೆ ಕಾರಣವಾಯಿತು. ಚಿತ್ರರಂಗದ ಟಾಪ್ ನಟರಿಗಿಂತ ನಿರ್ಮಾಪಕರ ಅಘೋಷಿತ ಆಸ್ತಿ ಪ್ರಮಾಣ ಅಧಿಕ ಎಂದು ತಿಳಿದು ಬಂದಿದೆ.
ಐಟಿ ಇಲಾಖೆ ಮುಂದೇನು ಮಾಡಬಹುದು?
ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಅಂತಿಮ ವರದಿ ತಯಾರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಎಲ್ಲಾ ನಟ, ನಿರ್ಮಾಪಕರ ಹೇಳಿಕೆ, ಸ್ಪಷ್ಟನೆ ಹಾಗೂ ಲೆಕ್ಕಾಚಾರ ತಾಳೆ ಹಾಕಬೇಕಾಗಿದೆ. ಇದಾದ ಬಳಿಕ ಆಸ್ತಿ ಘೋಷಣೆ ಮತ್ತು ಹಾಲಿ ಲೆಕ್ಕಾಚಾರವನ್ನು ತಾಳೆ ಮಾಡಿ ನೋಡಲಾಗುತ್ತದೆ.
ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ಹೆಚ್ಚುವರಿ ಆಸ್ತಿಗೆ ದಂಡ ವಿಧಿಸಬಹುದು, ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಬಹುದು ಅಥವಾ ಆಸ್ತಿ ಮೊತ್ತದ ಪ್ರಮಾಣ ಅಧಿಕವಾಗಿದ್ದು, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಕಂಡು ಬಂದರೆ ಜಾರಿ ನಿರ್ದೇಶನಾಲಯಕ್ಕೂ ತಿಳಿಸಬಹುದು.