ಐಫೋನ್ ಕಂಪನಿ ಧ್ವಂಸ ಕುರಿತು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಹತ್ವದ ಹೇಳಿಕೆ!
ಬೆಂಗಳೂರು, ಡಿ. 14: ತೈವಾನ್ ಮೂಲದ ಭಾರತದ ಮೊದಲ ಐಫೋನ್ ವಿಸ್ಟ್ರಾನ್ ಕಂಪನಿ ಮೇಲೆ ದಾಳಿ ನಡೆಸಿ ನಷ್ಟವುಂಟು ಮಾಡಿರುವ ಘಟನೆ ಜಿಲ್ಲೆ ಹಾಗೂ ರಾಜ್ಯದ ಘನತೆ ಹಾಗೂ ಪ್ರಗತಿಗೆ ಮಾರಕವಾದದ್ದು ಎಂದು ಕಾಂಗ್ರೆಸ್ ನಾಯಕ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ವಿಸ್ಟ್ರಾನ್ ಕಂಪನಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕ ಅವರು ಮಾತನಾಡಿದ್ದಾರೆ. ಜೊತೆಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜವಾಬ್ದಾರಿ ಕುರಿತೂ ಮಹತ್ವದ ಹೇಳಿಕೆಯನ್ನು ಸುದರ್ಶನ್ ಕೊಟ್ಟಿದ್ದಾರೆ.
Recommended Video
ಈ ಘಟನೆ ಪ್ರಪಂಚದ ಪ್ರತಿಷ್ಟಿತ ಸುದ್ದಿಮಾಧ್ಯಮಗಳಲ್ಲೂ ಪ್ರಸಾರವಾಗಿದ್ದು, ಉದ್ಯೋಗ ಸೃಷ್ಟಿ, ಬಂಡವಾಳ ಆಕರ್ಷಣೆ ವಿಷಯದಲ್ಲಿ ಈ ಘಟನೆ ಒಳ್ಳೆಯ ಬೆಳವಣಿಗೆ ಅಲ್ಲ. ಇದೊಂದು ಅಘಾತಕಾರಿ ಘಟನೆ ಎಂದರು. ಇಂತಹ ಘಟನೆಗಳಿಗೆ ಅವಕಾಶವಾಗದಂತೆ ಸರ್ಕಾರ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ತುರ್ತಾಗಿ ಅಧಿಕಾರಿಗಳು, ಕಾರ್ಮಿಕರು, ಸಂಸ್ಥೆಯ ಪ್ರತಿನಿಧಿಗಳ ಸಭೆ ನಡೆಸಿ ಸೌಹಾರ್ದ ವಾತಾವರಣ ನಿರ್ಮಿಸಿ ಕಂಪನಿ ಪುನರಾರಂಭಕ್ಕೆ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲ ಆಯಾಮಗಳಲ್ಲಿ ತನಿಖೆಯಾಗಲಿ
15 ಸಾವಿರ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಬಂದಿರುವ ಇಂತಹ ಕಂಪನಿಯ ಮೇಲಿನ ಈ ಧಾಳಿ ರಾಜ್ಯ, ಜಿಲ್ಲೆ, ದೇಶದಲ್ಲಿ ಬಂಡವಾಳ ಹೂಡಕೆ ಆತಂಕಕ್ಕೆ ಕಾರಣವಾಗುತ್ತದೆ ಜತೆಗೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಕಂಪನಿಗಳಲ್ಲಿ ಹಿಂಜರಿಕೆಗೂ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಂಪನಿಯ ಆಸ್ತಿಪಾಸ್ತಿ ನಾಶ ದುರಂತವಾಗಿದೆ, ಕಂಪನಿಯ ಹಿತದಷ್ಟೆ ಕಾರ್ಮಿಕರ ಹಿತವೂ ಮುಖ್ಯವಾಗಿದ್ದು, ಕಾರ್ಮಿಕರ ಹೊರಗುತ್ತಿಗೆ ಪಡೆದವರು ವೇತನ ಬಟವಾಡೆಯಲ್ಲಿ ಲೋಪದೋಷ ಎಸಗಿದ್ದರೆ ಆ ಬಗ್ಗೆಯೂ ತನಿಖೆಯಾಗಲಿ ಎಂದರು.
ಶೆಟ್ಟರ್ ಬಂದು ಹೋದರೆ ಸಾಲದು
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕೇವಲ ಭೇಟಿ ನೀಡಿ ಹೋದರೆ ಸಾಲದು, ಕೈಗಾರಿಕೆಗಳ ಬೆಳವಣಿಗೆ, ಕಾರ್ಮಿಕರ ಸಮಸ್ಯೆಗಳ ಕುರಿತು ಕನಿಷ್ಟ 5 ತಿಂಗಳಿಗೊಮ್ಮೆಯಾದರೂ ಪ್ರಗತಿ ಪರಿಶೀಲನೆ ನಡೆಸಬೇಕು, ಮೂಲಸೌಲಭ್ಯಗಳ ಕುರಿತು ಗಮನಹರಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಆಗುತ್ತವೆ ಎಂದು ಕೈಗಾರಿಕಾ ಇಲಾಖೆಯ ನ್ಯೂನತೆಗಳು ಘಟನೆಗೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಂಪನಿಯ ಜವಾಬ್ದಾರಿ
ಸರ್ಕಾರ ಕೂಡಲೇ ನರಸಾಪುರ ಠಾಣೆಯನ್ನು ಉನ್ನತೀಕರಿಸಿ ಪ್ರತ್ಯೇಕ ಠಾಣೆಯನ್ನು ಕೈಗಾರಿಕಾ ಪ್ರದೇಶಕ್ಕೆ ಮಂಜೂರು ಮಾಡಬೇಕು ಎಂದ ಸುದರ್ಶನ್ ಅವರು ಒತ್ತಾಯಿಸಿದ್ದಾರೆ. ತೈವಾನ್ ಇಂತಹ ಪ್ರತಿಷ್ಟಿತ ಕಂಪನಿಗಳು ಸ್ವಯಂ ಭದ್ರತೆ ಹಾಗೂ ಗುಪ್ತದಳ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. ಕಂಪನಿಗಳು ವಿಶೇಷವಾಗಿ ಇಂಟಲಿಜೆನ್ಸಿ ಮತ್ತು ಕಾರ್ಮಿಕ ಕಲ್ಯಾಣ ಘಟಕಗಳನ್ನು ತೆರೆಯಬೇಕು. ಆ ಮೂಲಕ ಕಾಲಕಾಲಕ್ಕೆ ಹೊರಗುತ್ತಿಗೆದಾರರಿಂದ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಬಟವಾಡೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ದೃಢೀಕರಿಸಿಕೊಳ್ಳುವಂತಾಗಬೇಕು ಎಂದರು.
ಅಮಾಯಕರ ವಿರುದ್ಧ ಕ್ರಮ ಬೇಡ
ಅಮಾಯಕರ ವಿರುದ್ದ ಕ್ರಮಕ್ಕೆ ಅವಕಾಶವೂ ಆಗಬಾರದು ಎಂದರು. ಕೈಗಾರಿಕೆ ಪುನರಾರಂಭಗೊಳ್ಳಲು ಸರ್ಕಾರ ಎಲ್ಲಾರೀತಿಯ ಸಹಕಾರ ನೀಡಬೇಕು, ಇಂತಹ ಘಟನೆಗಳು ಮರುಕಳಿಸದು ಎಂಬುದರ ಕುರಿತು ಉದ್ಯಮಿಗಳಿಗೆ ಆತ್ಮಸ್ಥೈರ್ಯ ತುಂಬಬೇಕು ಜತೆಯಲ್ಲೇ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡಿ, ಇಂತಹ ಕೃತ್ಯಗಳಿಗೆ ಇತರರು ಕೈಹಾಕದಂತೆ ಎಚ್ಚರಿಸುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಘಟನೆ ಹಾಗೂ ನಷ್ಟದ ಕುರಿತು ಸುದರ್ಶನ್ ಅವರಿಗೆ ಮಾಹಿತಿ ಒದಗಿಸಿದರು.