ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಭಾರೀ ಇಳಿಕೆ, ರಾಜ್ಯಕ್ಕೂ ನಿರಾಳತೆ
ಬೆಂಗಳೂರು, ಜೂನ್ 11: ಕೊರೊನಾವೈರಸ್ ಎರಡನೇ ಅಲೆ ಏರುತ್ತಿದ್ದಂತೆಯೇ ರಾಜ್ಯದ ಪಾಸಿಟಿವಿಟಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಕಳೆದ ತಿಂಗಳು ಇದು ಶೇಕಡಾ 40ಕ್ಕೆ ಏರಿಕೆಯಾಗುವ ಮೂಲಕ ಸರ್ಕಾರಕ್ಕೆ ಸವಾಲಿನ ಮೇಲೆ ಸವಾಲನ್ನು ತಂದೊಡ್ಡಿತ್ತು. ಆದರೆ ಈಗ ಈ ವಿಚಾರದಲ್ಲಿ ಸರ್ಕಾರ ಹಾಗೂ ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾ ಸುದ್ದಿಯನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೀಡಿದ್ದಾರೆ. ರಾಜ್ಯದ ಒಟ್ಟು ಪಾಸಿಟಿವಿಟಿ ದರ ಈಗ 5 ಶೇಕಡಾಗಿಂತ ಕೆಳಕ್ಕಿಳಿದಿದೆ.
ರಾಜ್ಯದಲ್ಲಿನ ಕೊರೊನಾವೈರಸ್ ವಿಚಾರವಾಗಿ ಕೆಲ ಅಂಕಿಅಂಶಗಳನ್ನು ಟ್ವೀಟ್ ಮೂಲಕ ಹಂಚಿಕೊಳ್ಳುವ ಜೊತೆಗೆ ಪಾಸಿಟಿವಿಟಿ ದರದಲ್ಲಿ ಕಂಡು ಬಂದಿರುವ ಈ ಸಮಾಧಾನಕರ ಸಂಗತಿಯನ್ನು ಸಚಿವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕೊರೊನಾವೈರಸ್ಗೆ ತುತ್ತಾಗಿ ಚೇತರಿಸಿಕೊಂಡವರ ಸಂಖ್ಯೆ 25 ಲಕ್ಷದ ಗಡಿ ದಾಟಿದೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ 14,975 ಜನರು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 1,69,695 ಜನರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು ಇದರಲ್ಲಿ 8,249 ಜನರು ವೈರಸ್ಗೆ ತುತ್ತಾಗಿದ್ದಾರೆ. ಈ ಮೂಲಕ ಪಾಸಿಟಿವಿಟಿ ದರ 5ಕ್ಕಿಂತ ಕೆಳಗಿಳಿದಿದ್ದು 4.86 ಶೇಕಡಾ ದಾಖಲಾಗಿದೆ. ಇನ್ನು ಬೆಂಗಳೂರಿನಲ್ಲಿ 62,515 ಜನರಿಗೆ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದ್ದು ಟೆಸ್ಟ್ ಪಾಸಿಟಿವಿಟಿ ರೇಟ್ 1.84%ಕ್ಕೆ ಇಳಿಕೆಯಾಗಿದೆ.
ಈ ಇಳಿಕೆ ರಾಜ್ಯದ ಜನರ ಪಾಲಿಗೆ ನಿಜಕ್ಕೂ ನಿರಾಳತೆಯನ್ನು ನೀಡುವಂತಿದೆ. ಅದರಲ್ಲೂ ಬೆಂಗಳೂರಿನ ವಿಚಾರದಲ್ಲಿ ಈ ಪ್ರಮಾಣದ ಇಳಿಕೆ ಸರ್ಕಾರಕ್ಕೂ ದೊಡ್ಡ ಒತ್ತಡವನ್ನು ಕಡಿಮೆ ಮಾಡಲಿದೆ. ಹಾಗಿದ್ದರೂ ರಾಜ್ಯ ಸರ್ಕಾರ ತನ್ನ ಎಚ್ಚರಿಕೆಯ ಹೆಜ್ಜೆಯಿಂದ ಹಿಂದಕ್ಕೆ ಸರಿದಿಲ್ಲ. ಕೆಲ ಸಡಿಲಿಕೆಗಳೊಂದಿಗೆ ಜೂನ್ 21ರ ವರೆಗೂ ಲಾಕ್ಡೌನ್ ವಿಸ್ತರಿಸಿದೆ. ಅದರಲ್ಲೂ ಪಾಸಿಟಿವಿಟಿ ದರ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಕಠಿಣ ಲಾಕ್ಡೌನ್ ಮುಂದುವರಿಯಲಿದೆ. ಜಿಲ್ಲೆಗಳ ವಿಚಾರವಾಗಿ 15 ಶೇಕಡಾಗಿಂತ ಕಡಿಮೆ ಇರುವ ಜಿಲ್ಲೆಗಳಿಗೆ ಮಾತ್ರವೇ ಲಾಕ್ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.












Click it and Unblock the Notifications