ಕೊರೊನಾವೈರಸ್: ಬೆಂಗಳೂರಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆಯಲ್ಲಿ ಏರಿಕೆ
ಬೆಂಗಳೂರು, ಆಗಸ್ಟ್ 12: ಬೆಂಗಳೂರಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.ಮೈಕ್ರೋ ಕಂಟೈನ್ಮೆಂಟ್ ಜೋನ್ಗಳ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಪಾಸಿಟಿವಿಟಿ ದರ ಶೇ.0.59ರಷ್ಟಿದೆ.
ರಾಜ್ಯದಲ್ಲಿ ಬುಧವಾರ 1826 ಪ್ರಕರಣಗಳು ಪತ್ತೆಯಾಗಿವೆ, ರಾಜ್ಯದಲ್ಲಿ 22851 ಸಕ್ರಿಯ ಪ್ರಕರಣಗಳಿವೆ. 33 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಪಾಸಿಟಿವಿಟಿ ದರ ಶೇ.1.09ರಷ್ಟಿದೆ. ಸಾವಿನ ದರ ಶೇ.1.80ರಷ್ಟಿದೆ.
ಈ ಪೈಕಿ 80ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ವಲಯಗಳನ್ನಾಗಿ ಬಿಬಿಎಂಪಿ ಗುರುತಿಸಿದೆ. ಕಳೆದೆರಡು ದಿನಗಳ ಹಿಂದೆ 162 ಇದ್ದ ಮೈಕ್ರೋ ಕಂಟೈನ್ಮೆಂಟ್ ಸಂಖ್ಯೆ ಬುಧವಾರ 166ಕ್ಕೆ ಏರಿಕೆಯಾಗಿದೆ. ಎಂಟು ವಲಯಗಳಲ್ಲಿ ಒಟ್ಟು 166 ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಲಾಗಿದೆ.

ಮಹದೇವಪುರ- 46, ಪೂರ್ವ-38, ದಕ್ಷಿಣ-26, ಯಲಹಂಕ-22, ಬೊಮ್ಮನಹಳ್ಳಿ -16, ಆರ್ಆರ್ ನಗರ -7, ಪಶ್ಚಿಮ-10, ದಾಸರಹಳ್ಳಿ-7 ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.
ಕಳೆದ 10 ದಿನಗಳಲ್ಲಿ ಬೇಗೂರು, ರಾಜರಾಜೇಶ್ವರಿನಗರ ಹಗದೂರು, ಬೆಳ್ಳಂದೂರು, ವರ್ತೂರು, ಹೆಮ್ಮಿಗೆಪುರ, ಬಸವನಪುರ, ಹೂಡಿ, ಎಚ್ಎಸ್ಆರ್ ಲೇಔಟ್ ಮತ್ತು ಹೊರಮಾವು ವಾರ್ಡ್ಗಳಲ್ಲಿ ನಿತ್ಯ 5ಕ್ಕಿಂತ ಹೆಚ್ಚು ಸೋಂಕಿತರ ಪ್ರಕರಣಗಳು ಪತ್ತೆಯಾಗುತ್ತಿವೆ.
ಬೇಗೂರು, ಆರ್ಆರ್ನಗರ, ಬೆಳ್ಳಂದೂರು ವಾರ್ಡ್ಗಳಲ್ಲಿ ನಿತ್ಯ ಸರಾಸರಿ 7 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಹಗದೂರು ವಾರ್ಡ್ಗಳಲ್ಲಿ ಪ್ರತಿದಿನ ಸರಾಸರಿ 6 ಸೋಂಕಿತ ಪ್ರಕರಣಗಳು ದೃಢಪಟ್ಟರೆ, ವಸವನಪುರ, ವರ್ತೂರು, ಹೂಡಿ, ಹೆಮ್ಮಿಗೆಪುರ, ಎಚ್ಎಸ್ಆರ್ ಲೇಔಟ್ ವಾರ್ಡ್ಗಳಲ್ಲಿ ನಿತ್ಯ ತಲಾ 5 ಸೋಂಕಿತ ಪ್ರಕರಣಗಳು ಮತ್ತು ಹೊರಮಾವಿನಲ್ಲಿ ದಿನಕ್ಕೆ 4 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಬಿಬಿಎಂಪಿ ವರದಿ ಮಾಡಿದೆ.
ನಗರದ ಅಪಾರ್ಟ್ಮೆಂಟ್ಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಬಿಬಿಎಂಪಿ ಕೆಲವು ನಿರ್ದೇಶನಗಳನ್ನು ನೀಡಿದೆ. ಗುಂಪು ಚಟುವಟಿಕೆಗಳನ್ನು ನಡೆಸದಂತೆ ಅಪಾರ್ಟ್ಮೆಂಟ್ ನಿವಾಸಿಗಳ ಸಂಘಕ್ಕೆ ಸೂಚನೆ ಕೊಡಲಾಗಿದೆ.
ವಾಕಿಂಗ್, ಜಾಗಿಂಗ್ ನಂತಹ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಹೆಚ್ಚು ಜನರು ಸೇರುವ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಹೇಳಿದೆ. ಕೆಲವು ದಿನಗಳಿಂದ ಅಪಾರ್ಟ್ಮೆಂಟ್ಗಳಲ್ಲಿಯೇ ಹೊಸ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ.
ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಕೇರಳ, ಮಹಾರಾಷ್ಟ್ರದಿಂದ ಅಪಾರ್ಟ್ಮೆಂಟ್ಗಳಿಗೆ ಬರುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲವಾದರೆ ಬೇರೆ ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಐಸೋಲೆಷನ್ನಲ್ಲಿ ಇರಲು ಸೂಚಿಸಿ ಎಂದು ಬಿಬಿಎಂಪಿ ನಿರ್ದೇಶನ ನೀಡಿದೆ.ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು. ಆಮ್ಲಜನಕ, ಹಾಸಿಗೆ ವೆಂಟಿಲೇಟರ್ ಸಿಗದೆ ಕೊರೊನಾ ರೋಗಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದರು. ಕೊನೆಗೆ ಸ್ಮಶಾನದಲ್ಲೂ ಕೂಡ ಸರತಿಯಲ್ಲಿ ಕಾಯುವ ಪರಿಸ್ಥಿತಿಯೂ ಎದುರಾಗಿತ್ತು.
ಈ ಕೊರೊನಾ 3ನೇ ಅಲೆ ಎರಡನೇ ಅಲೆಯಷ್ಟು ಭೀಕರವಾಗಿರುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಲೆಯ ಭೀಕರತೆ ಹೇಗಿರಲಿದೆ ಎಂದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸೋಂಕು ಹೆಚ್ಚಾದರೆ ಇನ್ನೂ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ನಿಶ್ಚಿತ.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿಸಲು ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ವೈದ್ಯರ ನಡೆ ಸೋಂಕಿತರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಬಿಬಿಎಂಪಿ ಮುಂದಾಗಿದೆ.












Click it and Unblock the Notifications