ಸಿದ್ದರಾಮಯ್ಯನವರ ಜೊತೆ ದುಷ್ಮನಿ ಕೇವಲ ನೆಪ: ಅಸಲಿಗೆ ರೋಷನ್ ಬೇಗ್ ಬಿಜೆಪಿ ನಂಬಿ ಕೆಟ್ಟರೇ?
ಸಾವಿರಾರು ಅಮಾಯಕ ಜನರ ಉಳಿತಾಯದ ದುಡ್ಡನ್ನು ನುಂಗಿದ ಐಎಂಎ ಹಗರಣದಲ್ಲಿ, ನಾಲ್ಕು ನೂರು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎನ್ನುವ ಆರೋಪದಡಿಯಲ್ಲಿ ಮಾಜಿ ಸಚಿವ, ಹಿರಿಯ ಮುಖಂಡ ರೋಷನ್ ಬೇಗ್ ಅವರ ಬಂಧನವಾಗಿದೆ. ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ.
ಬೇಗ್ ಅವರ ಬಂಧನ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೆಸೆರೆರೆಚಾಟಕ್ಕೆ ಹೊಸ ವೇದಿಕೆಯಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಶಿವಾಜಿನಗರದಲ್ಲಿ ಸ್ಪರ್ಧಿಸಿ ರೋಷನ್ ಗೆದ್ದಿದ್ದರು. ಇದಾದ ನಂತರ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಅವರು ಬಿಜೆಪಿ ಸೇರುವ ಹೊತ್ತಿನಲ್ಲಿ ಐಎಂಎ ಹಗರಣ ಬಯಲಾಗಿತ್ತು. ಅಲ್ಲದೇ, ಸಿದ್ದರಾಮಯ್ಯನವರ ಜೊತೆಗೆ ಇವರ ಸಂಬಂಧ ತೀರಾ ಹದೆಗೆಟ್ಟಿತ್ತು. ಕಾಂಗ್ರೆಸ್ ನಲ್ಲಿದ್ದಾಗಲೇ ಸಿದ್ದರಾಮಯ್ಯ ಮತ್ತು ಆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರುತ್ತಿದ್ದ ಬೇಗ್, ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದರು.
ನಾನು ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಯವನಲ್ಲ, ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನವನು ಎಂದು ರೋಷನ್ ಬೇಗ್ ಕಿಡಿಕಾರಿದ್ದರು. ಪಕ್ಷ ತೊರೆದು, ಬಿಜೆಪಿ ಸೇರಿದ್ದು, ಮೇಲ್ನೋಟಕ್ಕೆ ಸಿದ್ದರಾಮಯ್ಯ ಕಾರಣ ಎಂದು ಬಿಂಬಿತವಾಗಿದ್ದರೂ, ಬೇಗ್ ಅವರು ಬಿಜೆಪಿಗೆ ಸೇರಿದ್ದು ಯಾತಕ್ಕಾಗಿ ಎಂದು ಕಾಂಗ್ರೆಸ್ ಈಗ ವ್ಯಾಖ್ಯಾನಿಸುತ್ತಿದೆ.

ಸಿದ್ದರಾಮಯ್ಯ ಅವರ ಅಹಂಕಾರ, ದಿನೇಶ್ ಗುಂಡೂರಾವ್ ಅವರ ಫ್ಲಾಪ್ ಶೋ
"ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೀನಾಯ ಸೋಲು ಕಾಣಲು ಸಿದ್ದರಾಮಯ್ಯ ಅವರ ಅಹಂಕಾರ, ದಿನೇಶ್ ಗುಂಡೂರಾವ್ ಅವರ ಫ್ಲಾಪ್ ಶೋ ಕಾರಣ. ಐಎಂಎ ಹಗರಣದಲ್ಲಿ ನನ್ನ ಹೆಸರು ಬರಲು ಕಾಂಗ್ರೆಸ್ಸಿನವರು ಮಾಡಿದ ಪಿತೂರಿಯೇ ಕಾರಣ" ಎಂದು ರೋಷನ್ ಬೇಗ್ ಆರೋಪಿಸಿದ್ದರು.
|
ರೋಷನ್ ಬೇಗ್ ಒಬ್ಬ ಈ ಕಾಲದ ಮೀರ್ ಸಾದಿಕ್
"ಟಿಪ್ಪು ಸುಲ್ತಾನ್ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ ಅವರೊಬ್ಬ ದೇಶ ಮೆಚ್ಚುವ ಸ್ವಾತಂತ್ರ್ಯ ಹೋರಾಟಗಾರ. ಅದೇ ಟಿಪ್ಪುವಿನ ಆಸ್ಥಾನದಲ್ಲಿ ಮೀರ್ ಸಾದಿಕ್ ಎಂಬ ರಾಜದ್ರೋಹಿ, ಮಿತ್ರದ್ರೋಹಿ ಇದ್ದ. ರೋಷನ್ ಬೇಗ್ ಒಬ್ಬ ಈ ಕಾಲದ ಮೀರ್ ಸಾದಿಕ್. ಇಂತಹ ಮೀರ್ ಸಾದಿಕ್ ಗಳನ್ನು ರಾಜಕೀಯದಲ್ಲಿ ತಲೆ ಎತ್ತಲು ಬಿಡಬಾರದು. ರೋಷನ್ ಬೇಗ್ ಐಎಂಎ ಹಗರಣದಲ್ಲಿ ಒಬ್ಬ ಆರೋಪಿ. ಸಾವಿರಾರು ಅಮಾಯಕರ ದುಡ್ಡು ಮುಳುಗಿಸಿದ ಆ ಪ್ರಕರಣದಲ್ಲಿ ಜೈಲು ಪಾಲಾಗುತ್ತೇನೆ ಎಂಬ ಭಯದಿಂದ ಬಿಜೆಪಿ ಸೇರಿದ್ದಾರೆ. ಕ್ಷೇತ್ರದ ಜನತೆಗಾಗಿ ಬಿಜೆಪಿ ಜೊತೆ ಹೋದೆ ಎನ್ನುವುದು ಅಪ್ಪಟ ಸುಳ್ಳು" ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದರು.

ಬೇಗ್, ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯ ಕಾರಣ
ಈ ಎಲ್ಲಾ ಆರೋಪ, ಪ್ರತ್ಯಾರೋಪವನ್ನು ಅವಲೋಕಿಸಿದಾಗ ಬೇಗ್, ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ, ಐಎಂಎ ಬಂಧನ ಭೀತಿಯಿಂದ ಅವರು ಬಿಜೆಪಿ ಕಡೆ ವಾಲಿದರು ಎನ್ನುವುದೇ ಸತ್ಯ ಎನ್ನುತ್ತವೆ ಮೂಲಗಳು. ಬಿಜೆಪಿಗೆ ಹತ್ತಿರವಾಗುತ್ತಿದ್ದ ಬೇಗ್ ಗೆ ರೆಡ್ ಕಾರ್ಪೆಟ್ ವೆಲ್ಕಂ ಏನೂ ಸಿಕ್ಕಿರಲಿಲ್ಲ. ಆ ವೇಳೆಗೆ ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ತುಳುಕು ಹಾಕುತ್ತಿದ್ದರಿಂದ, ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯವರೇ ಅಪಸ್ವರ ಎತ್ತಿದ್ದರು.
Recommended Video

ಐಎಂಎ ಹಗರಣದಲ್ಲಿ ಬಚಾವ್ ಆಗಲು, ಬಿಜೆಪಿ ನಂಬಿ ರೋಷನ್ ಬೇಗ್ ಕೆಟ್ಟರೇ
ಶಿವಾಜಿನಗರ ಉಪಚುನಾವಣೆಯಲ್ಲಿ ಟಿಕೆಟ್ ಬೇಕೇ ಬೇಕೆಂದು ರೋಷನ್ ಬೇಗ್ ಹಠ ಹಿಡಿದವರಲ್ಲ. ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿ, ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಪ್ರಕಾರ, "ರೋಷನ್ ಬೇಗ್ ಗೆ ಬಿಜೆಪಿ ಯಾವುದೇ ಭರವಸೆಯನ್ನು ನೀಡಿರಲಿಲ್ಲ. ನಾವು ಮುಂಬೈನಲ್ಲಿದ್ದಾಗ ಅವರು ನಮ್ಮ ಜೊತೆಗಿರಲಿಲ್ಲ"ಎನ್ನುವ ಮಾತನ್ನು ಹೇಳಿದ್ದಾರೆ. ನಳಿನ್ ಕಟೀಲ್ ಕೂಡಾ ಇದೇ ಮಾತನ್ನು ಪುನರುಚ್ಚಿಸಿದ್ದಾರೆ. ಹಾಗಿದ್ದರೆ, ಐಎಂಎ ಹಗರಣದಲ್ಲಿ ಬಚಾವ್ ಆಗಲು, ಬಿಜೆಪಿ ನಂಬಿ ರೋಷನ್ ಬೇಗ್ ಕೆಟ್ಟರೇ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications