ಐಎಂಎ ಹಗರಣ: ಬೇಗ್ ಆಸ್ತಿ ಜಪ್ತಿ ಮಾಡಿಲ್ಲವೇಕೆ, ಹೈಕೋರ್ಟ್ ಗರಂ
ಬೆಂಗಳೂರು, ಜುಲೈ 8: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ ಮಾಡಿಲ್ಲವೇಕೆ ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಐಎಂಎಯಿಂದ ರೂ 10 ಕೋಟಿ ದೇಣಿಗೆ ಪಡೆದಿರುವುದು ಮತ್ತು ಆಸ್ತಿ ಜಪ್ತಿ ಮಾಡುವ ಕುರಿತಂತೆ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.
ಐಎಂಎ ಠೇವಣಿದಾರರ ಹಣವನ್ನೇ ಸರ್ಕಾರಿ ಶಾಲೆಯೊಂದಕ್ಕೆ ದೇಣಿಗೆ ಪಡೆದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಸಂಸ್ಥೆಯ ಆಸ್ತಿ ರಕ್ಷಣೆಗೆ ಸರ್ಕಾರ ಆಸಕ್ತಿ ತೋರುತ್ತಿರುವಂತಿದೆ ಎಂದು ಹೇಳಿದೆ. ಆದರೆ, ರೋಷನ್ ಬೇಗ್ ಆಸ್ತಿ ಜಪ್ತಿ ಸಂಬಂಧ ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಬೇಗ್ ಆಸ್ತಿ ಜಪ್ತಿ ಸಂಬಂಧ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಸರ್ಕಾರ ಐಎಂಎಯನ್ನು ರಕ್ಷಿಸಲು ಆಸಕ್ತಿ ತೋರುವಂತಿದೆ ಎಂದು ಕಿಡಿಕಾರಿದೆ.
ಈ ಹಿಂದಿನ ವಿಚಾರಣೆ ವೇಳೆ ಸಿಬಿಐ ಅಭಿಯೋಜಕರು ಕೋವಿಡ್ ಲಾಕ್ ಡೌನ್ ಕಾರಣದಿಂದ ಆಸ್ತಿ ಜಪ್ತಿ ಸಾಧ್ಯವಾಗಲಿಲ್ಲ. ಅತಿ ಶೀಘ್ರದಲ್ಲಿಯೇ ಆಸ್ತಿ ಜಪ್ತಿ ಮಾಡುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದರು. ಇದಕ್ಕೆ ಗರಂ ಆದ ಹೈಕೋರ್ಟ್, ಲಾಕ್ ಡೌನ್ ಗೂ ಆಸ್ತಿ ಜಪ್ತಿಗೂ ಸಂಬಂಧವಿಲ್ಲ, ಮೊದಲು ಆಸ್ತಿ ಜಪ್ತಿ ಮಾಡಿ ಎಂದು ಖಡಕ್ ನಿರ್ದೇಶನ ನೀಡಿತ್ತು.
2018ರಲ್ಲಿ ನಡೆದ ಐಎಂಎ ಬಹುಕೋಟಿ ವಂಚನೆ ಹಗರಣದಲ್ಲಿ ರೋಷನ್ ಬೇಗ್ ಅವರನ್ನು ಸಿಬಿಐ ನವೆಂಬರ್ 22ರಂದು ಬಂಧಿಸಿತ್ತು. ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿಂದ ಸುಮಾರು ನಾನೂರು ಕೋಟಿ ರೂಪಾಯಿ ಪಡೆದ ಆರೋಪ ರೋಷನ್ ಬೇಗ್ ಮೇಲಿದೆ.
ತಮ್ಮೊಂದಿಗೆ ವ್ಯವಹಾರ ನಡೆಸಿದ ರೋಷನ್ ಬೇಗ್ ಅವರ ಮಾತುಕತೆಯ ಆಡಿಯೋವನ್ನು ಖುದ್ದು ಮನ್ಸೂರ್ ಖಾನ್ ನಗರ ಪೊಲೀಸ್ ಆಯುಕ್ತರಿಗೆ ರವಾನೆ ಮಾಡಿದ್ದರು. ಐಎಂಎ ವಂಚನೆ ಪ್ರಕರಣವನ್ನು ವಿಶೇಷ ತನಿಖಾ ತಂಡ ತನಿಖೆಗೆ ಕೈಗೆತ್ತಿಕೊಂಡಿತ್ತು. ಈ ವೇಳೆಯೇ ರೋಷನ್ ಬೇಗ್ ವಿಚಾರಣೆಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮುಂದಾಗಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.












Click it and Unblock the Notifications