ಐಎಂಎ ವಂಚನೆ ಪ್ರಕರಣ : ಜನರಿಗೆ ಬೆಂಗಳೂರು ಪೊಲೀಸರ ಮನವಿ
ಬೆಳಗಾವಿ, ಜೂನ್ 13 : ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಸಾವಿರಾರು ಜನರು ಹಣ ಕಳೆದುಕೊಂಡಿದ್ದಾರೆ. ಬೆಂಗಳೂರು ಪೊಲೀಸರು ಜನರಿಗೆ ಮನವಿಯೊಂದನ್ನು ಮಾಡಿದ್ದು, ನಿಮ್ಮ ಎಟಿಎಂ ಕಾರ್ಡ್ ನಂ, ಸಿವಿವಿ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಗುರುವಾರ ಸಂಜೆ ಬೆಂಗಳೂರು ಪೊಲೀಸರು ಫೇಸ್ಬುಕ್ ಪುಟದಲ್ಲಿ ಈ ಕುರಿತು ಪೋಸ್ಟ್ ವೊಂದನ್ನು ಹಾಕಿದ್ದಾರೆ. ಐಎಂಎ ಜ್ಯುವೆಲರ್ಸ್ ಹೂಡಿಕೆದಾರರು ಎಚ್ಚರವಾಗಿರಬೇಕು. ನಕಲಿ ಕರೆಗಳ ಬಗ್ಗೆ ಜಾಗೃತವಾಗಿರಬೇಕು ಎಂದು ಹೇಳಿದ್ದಾರೆ.
ಐಎಂಎ ವಂಚನೆ ಪ್ರಕರಣ : ಎಸ್ಐಟಿ ತಂಡದ ಅಧಿಕಾರಿಗಳ ಪಟ್ಟಿ
IMA ಜ್ಯೂವೆಲರ್ಸ್ ಹೂಡಿಕೆದಾರರೇ ಎಚ್ಚರ. ನಿಮ್ಮ ATM & CVV ಸಂಖ್ಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ, ನಿಮ್ಮ ಹೂಡಿಕೆ ಹಣವನ್ನು ಹಿಂದಿರುಗಿಸುತ್ತೇವೆಂದು ಬರುವ ವಂಚನೆ ಕರೆಗಳ ಬಗ್ಗೆ ಜಾಗೃತರಾಗಿರಿ, ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಇಂತಹ ಕರೆಗಳು ಬಂದಲ್ಲಿ ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ನಗರದ ಪ್ರತಿಷ್ಠಿತ ಆಭರಣ ಮಳಿಗೆ ಐಎಂಎ ಸಮೂಹ ಸಂಸ್ಥೆಗಳ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾನೆ. ಕಂಪನಿಯಲ್ಲಿ ಹೂಡಿಕೆ ಮಾಡಿರುವ 15 ಸಾವಿರಕ್ಕೂ ಅಧಿಕ ಜನರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.
IMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ?
ಇಂತಹ ಸಂದರ್ಭದಲ್ಲಿ ನಿಮ್ಮ ಹಣವನ್ನು ವಾಪಸ್ ನೀಡುತ್ತೇವೆ. ನಿಮ್ಮ ಬ್ಯಾಂಕ್ ವಿವರ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ನಕಲಿ ಕರೆಗಳನ್ನು ಮಾಡಿ ವಂಚಿಸುವ ಸಾಧ್ಯತೆ ಇದೆ. ಆದ್ದರಿಂದ, ಪೊಲೀಸರು ಜನರಿಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ.
ಮೊಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಬಳಿಕ ಐಎಂಎನಲ್ಲಿ ಹೂಡಿಕೆ ಮಾಡಿದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಂಚನೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಡಿಐಜಿ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ.