ಐಎಂಎ ವಂಚನೆ ಪ್ರಕರಣ ತನಿಖೆಗೆ ಕೈ ಜೋಡಿಸಲಿದೆಯಾ ಇಡಿ?
ಬೆಂಗಳೂರು, ಜೂನ್ 14 : ಐಎಂಎ ವಂಚನೆ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ ಕೈ ಜೋಡಿಸಲಿದೆಯೇ? ಕರ್ನಾಟಕ ಸರ್ಕಾರ ಈಗಾಗಲೇ ವಂಚನೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚನೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಕ್ರಮ ಹಣ ಸಾಗಣೆ, ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದರೆ ಇಡಿ ಅಧಿಕಾರಿಗಳು ದೂರು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಲಿದ್ದಾರೆ.
ಅಕ್ರಮ ಹಣ ಸಾಗಣೆ, ಹವಾಲಾ ದಂಧೆ, ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದರೆ 2002ರ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕರ್ನಾಟಕ ಸರ್ಕಾರ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ. ಇದುವರೆಗೂ ಬೆಂಗಳೂರಿನಲ್ಲಿ 35 ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ.
ಬಹುಕೋಟಿ ರೂಪಾಯಿ ಐಎಂಎ ವಂಚನೆ ಪ್ರಕರಣದ ಆರೋಪಿ, ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿರುವುದು ವಿಮಾನ ನಿಲ್ದಾಣದ ದಾಖಲೆಗಳ ಪ್ರಕಾರ ಖಚಿತವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಖಾನ್ ಕಾರನ್ನು ಎಸ್ಐಟಿ ವಶಕ್ಕೆ ಪಡೆದಿದ್ದು, ನಗರದಲ್ಲಿರುವ ಐಎಂಎ ಕಚೇರಿಗೆ ಬೀಗ ಜಡಿದಿದೆ. ಐಎಂಎ ಗ್ರೂಪ್ನ 7 ನಿರ್ದೇಶಕರನ್ನು ಬಂಧಿಸಲಾಗಿದ್ದು, ಎಸ್ಐಟಿ ಅವರ ವಿಚಾರಣೆ ನಡೆಸುತ್ತಿದೆ.
ಮೊಹಮ್ಮದ್ ಮನ್ಸೂರ್ ಖಾನ್ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಆಸ್ತಿ ಖರೀದಿ ಮಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವರ್ಷಕ್ಕೆ 8.44 ಲಕ್ಷ ಆಸ್ತಿ ತೆರಿಗೆಯನ್ನು ಆತ ಪಾವತಿ ಮಾಡುತ್ತಿದ್ದ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications