ಆರೋಪ ಸಾಬೀತಾದ್ರೆ ರಾಜೀನಾಮೆ: ಬಿಎಸ್ ವೈಗೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು
ಬೆಂಗಳೂರು, ಜನವರಿ 27: ಐಟಿ ದಾಳಿಯಿಂದ ತಮ್ಮ ಬಳಿ ಅಕ್ರಮ ಸಂಪತ್ತಿದೆ ಎಂಬುದು ಸಾಬೀತಾದರೆ ನನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.
ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೋಲಾರ್ ಘಟಕ ಸ್ಥಾಪನೆ ವಿಚಾರವಾಗಿ ರು.40 ಕೋಟಿ ಅವ್ಯವಹಾರ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾಡಿದ ಆರೋಪಕ್ಕೆ ಕಿಡಿಕಾರಿದ್ದು, ಸೌರ ವಿದ್ಯುತ್ ಯೋಜನೆ ನ್ಯಾಯಯುತವಾಗಿದೆ. ಯಾವುದೇ ಅಕ್ರಮ ನಡೆದಿಲ್ಲ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಬಿಎಸ್ ವೈಗೆ ಸವಾಲು ಹಾಕಿದರು.[ಐಟಿ ದಾಳಿ, ವರದಿ ಇನ್ನು ಕೈಸೇರಿಲ್ಲವೆಂದ ಸಿದ್ದರಾಮಯ್ಯ]

ಇನ್ನು ನಮ್ಮ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ನಿಜ. ಅವರು ಕೇಳಿದ ದಾಖಲೆಗಳನ್ನು ಒದಗಿಸಲಾಗಿದೆ. ಯಾವುದೇ ಅಕ್ರಮವನ್ನು ನಾನಾಗಲೀ, ನಮ್ಮ ಕುಟುಂಬವಾಗಲಿ ಮಾಡಿದಲ್ಲ. ವಿಚಾರಣೆ ಮುಗಿದ ಬಳಿಕ ಎಲ್ಲ ವಿವರಗಳು ಜಾಹೀರಾಗಲಿದೆ ಎಂದರು.
ಜನವರಿ 19 ರಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಬೆಂಗಳೂರ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ 16 ಕಡೆ ಐಟಿದಾಳಿ ನಡೆಸಲಾಗಿತ್ತು. ಈ ವೇಳೆ ಅಪಾರ ಪ್ರಮಾಣದ ನಗದು ಮತ್ತ ಚಿನ್ನಾಭರಣಗಳು ಸಿಕ್ಕಿದ್ದವು ಎನ್ನಲಾಗಿತ್ತು.[ಕಾಂಗ್ರೆಸ್ ನಾಯಕರ ಕಚೇರಿ, ಮನೆಯ ಮೇಲೆ ಐಟಿದಾಳಿ]
ಯಾರ ವಿರುದ್ಧವೂ ಕ್ರಮ ಇಲ್ಲ: ದಿನೇಶ್ ಗುಂಡೂರಾವ್
ಐಟಿ ದಾಳಿ ಸಂಬಂಧ ಅಧಿಕೃತ ಮಾಹಿತಿಯಿಲ್ಲ ಹೀಗಾಗಿ ಇಬ್ಬರ ವಿರುದ್ಧ ಕ್ರಮವಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ 68ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತು ಸಿಕ್ಕಿದೆ ಎಂಬ ಮಾಹಿತಿಯಿಲ್ಲ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಮ್ಮ ಪಕ್ಷದ ನಾಯಕರ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದು, ಗಾಂಭೀರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.












Click it and Unblock the Notifications