ಎಲ್ಲರ ಆಟ ನನಗೆ ಗೊತ್ತಿದೆ: ಸಚಿವ ಡಿಕೆ ಶಿವಕುಮಾರ್
Recommended Video
ಬೆಂಗಳೂರು, ಜುಲೈ 2: 'ಯಾರು ಏನು ಮಾಡುತ್ತಿದ್ದಾರೆ, ಬಿಜೆಪಿಯವರು ಏನು ಮಾಡುತ್ತಿದ್ದಾರೆ, ಎಲ್ಲರ ಆಟ ನನಗೆ ಗೊತ್ತಿದೆ' ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಯಾರು ಯಾವ ಚೆಸ್ ಪಾನ್ ಮೂವ್ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಸರ್ಕಾರ ಉಳಿಯಬೇಕು ಎನ್ನುವುದು ಎಲ್ಲರ ಆಶಯ. ಬಿಜೆಪಿ ಏನು ಮಾಡುತ್ತಿದೆ, ಅದಕ್ಕೆ ಯಾರು ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎನ್ನುವುದು ಸಹ ಗೊತ್ತಿದೆ ಎಂದು ಹೇಳಿದರು.
ಯಾರೂ ನಮ್ಮ ಪಕ್ಷದ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡಬೇಕಿಲ್ಲ. ಯಾರೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಎಲ್ಲರ ಆಟ ನನಗೆ ಗೊತ್ತಿದೆ. ಯಾರೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಆನಂದ್ ಸಿಂಗ್ ಅವರು ರಾಜೀನಾಮೆ ಹಿಂದಕ್ಕೆ ಪಡೆಯುವ ವಿಶ್ವಾಸ ನನಗಿದೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಎಲ್ಲರೊಂದಿಗೂ ಮಾತನಾಡಿದ್ದಾರೆ ಎಂದರು.
ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರನ್ನು ಸೆಳೆಯುವ ರಿವರ್ಸ್ ಆಪರೇಷನ್ ಕುರಿತ ಪ್ರಶ್ನೆ ಅವರು, ಮುಂದೆ ನೋಡೋಣ, ಈಗ್ಯಾಕೆ ಅದರ ಮಾತು ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಎಲ್ಲಿ ಎಷ್ಟು ಮಾಡಬೇಕೋ ಎಲ್ಲ ಮಾಡಿದ್ದಾರೆ. ಅವರ ಕರ್ತವ್ಯ ಮಾಡಿದ್ದಾರೆ. ಅವರು ರಾಜ್ಯಕ್ಕೆ ಬರುವ ಅವಶ್ಯಕತೆಯಿಲ್ಲ. ನಾವೇ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕಣ್ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ
ಯಾರಾರು ಯಾವ ಆಟ ಆಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲವೆಂದಲ್ಲ. ನಮಗೆ ಎಲ್ಲ ತಿಳಿದಿದೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ. ಇನ್ನೊಬ್ಬರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಯಾರೂ ಕಣ್ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ. ಮುಂದೆ ನೋಡೋಣ. ಎಲ್ಲದಕ್ಕೂ ಸಮಯ ಸಂದರ್ಭ ಬರುತ್ತದೆ ಎಂದರು.

ಎಲ್ಲರೂ ಡಿಕೆ ಶಿವಕುಮಾರ್ ಆಗಲು ಸಾಧ್ಯವಿಲ್ಲ
ದಿನೇಶ್ ಗುಂಡೂರಾವ್ ಅವರಿಗೆ ಗೊತ್ತಿದೆ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಎಂದು. ಅವರಿಗೂ ವೈಯಕ್ತಿಕ ಜೀವನ ಇರಬೇಕಲ್ಲ. ಎಲ್ಲರೂ ಶಿವಕುಮಾರ್ ಆಗಲು ಆಗೊಲ್ಲ. ದಿನೇಶ್ ಗುಂಡೂರಾವ್, ದಿನೇಶ್ ಗುಂಡೂರಾವ್ ಆಗಿಯೇ ಇರುತ್ತಾರೆ, ಸಿದ್ದರಾಮಯ್ಯ ಸಿದ್ದರಾಮಯ್ಯರೇ ಆಗಿರುತ್ತಾರೆ. ಪರಮೇಶ್ವರ್, ಪರಮೇಶ್ವರ್ ಆಗಿಯೇ ಇರುತ್ತಾರೆ.

ಗಾಬರಿ ಬೇಡ, ಸರ್ಕಾರ ಉರುಳೊಲ್ಲ
ಕುಮಾರಸ್ವಾಮಿ ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಈಗಾಗಲೇ ನಾಲ್ಕೈದು ಬಾರಿ ಅವರೊಂದಿಗೆ ಮಾತನಾಡಿದ್ದೇನೆ. ಜತೆಗೆ ಎಲ್ಲ ಶಾಸಕರೂ ಕುಮಾರಸ್ವಾಮಿ ಅವರೊಂದಿಗೆ ಟಚ್ನಲ್ಲಿದ್ದಾರೆ. ಸರ್ಕಾರ ಉರುಳುತ್ತದೆ ಎಂದು ಯಾರೂ ಗಾಬರಿ ಪಡಬೇಕಿಲ್ಲ. ಈ ಸರ್ಕಾರ ಪೂರ್ಣಾವಧಿ ಪೂರೈಸುತ್ತದೆ ಎಂದರು.

ನಾಗೇಂದ್ರ ಬುದ್ದಿವಂತ, ಪ್ರಜ್ಞಾವಂತ
ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಬುದ್ದಿವಂತ, ವಿದ್ಯಾವಂತ, ಪ್ರಜ್ಞಾವಂತ. ಅವರು ಕಾಂಗ್ರೆಸ್ ಬಿಡುವುದಿಲ್ಲ. ಮಹೇಶ್ ಕುಮಟಳ್ಳಿ ಅವರು ಹುಟ್ಟು ಕಾಂಗ್ರೆಸ್ಸಿಗ. ಅವರು ಸಹ ಪಕ್ಷ ಬಿಡುವ ನಿರ್ಧಾರ ಮಾಡುವುದಿಲ್ಲ. ಬೇಕಿದ್ದರೆ ನಾನು ಆತನೊಂದಿಗೆ ಮಾತನಾಡುತ್ತೇನೆ. ಆನಂದ್ ಸಿಂಗ್ ಈಗಲೂ ಆತ್ಮೀಯರು. ತಮ್ಮ ರಾಜೀನಾಮೆ ನಿರ್ಧಾರವನ್ನು ಅವರು ಮರುಪರಿಶೀಲನೆ ಮಾಡಿ ಪಕ್ಷಲ್ಲಿಯೇ ಉಳಿಯುತ್ತಾರೆ ಎಂಬ ಭರವಸೆ ಇದೆ.











Click it and Unblock the Notifications