ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಡಲಿದೆ ಉಬ್ಲೋ ವಾಚಿನ ಸದ್ದು
ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ಈಗ ಸರ್ಕಾರದ ಆಸ್ತಿಯಾಗಿದೆ.
ಸಿದ್ದರಾಮಯ್ಯ ಅವರು ವಾಚ್ ಅನ್ನು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದರು. ನಂತರ ವಾಚ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೈ ಸೇರಿತ್ತು.
ಆದರೆ, ವಾಚ್ ಮೂಲದ ಬಗ್ಗೆ ತನಿಖೆ ಏಕೆ ನಡೆಸಿಲ್ಲ? ಡಾ. ಗಿರೀಶ್ ಚಂದ್ರ ನೀಡಿದ ಉಡುಗೊರೆಗೆ ಪ್ರತಿಯಾಗಿ ಅವರಿಗೆ ಏನು ಲಾಭ ಸಿಕ್ಕಿದೆ? ಎಂಬುದನ್ನು ಬಹಿರಂಗಗೊಳಿಸುವಂತೆ ಅನುಪಮಾ ಶೆಣೈ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ವಾಚ್ ಎಲ್ಲಿಂದ ಬಂತು?, ವಾಚ್ ಉಡುಗೊರೆಯಾಗಿ ಕೊಟ್ಟ ಗಿರೀಶ್ ಚಂದ್ರ ವರ್ಮಾ ಯಾರು? ಎಂದು ಸಿಬಿಐ ತನಿಖೆಯಾಗಬೇಕು ಎಂದು ಜೆಡಿಎಸ್ ಹಾಗೂ ಬಿಜೆಪಿ ಕಳೆದ ವರ್ಷ ಸದನದಲ್ಲಿ ಗದ್ದಲ ಉಂಟು ಮಾಡಿದ್ದು ಬಿಟ್ಟರೆ ನಂತರ ವಿಷಯ ತಣ್ಣಗಾಗಿತ್ತು. ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಈಗ ಈ ವಿಷ್ಯವನ್ನು ಮತ್ತೊಮ್ಮೆ ಬಯಲಿಗೆಳೆದು, ತನಿಖೆಗೆ ಆಗ್ರಹಿಸಿದ್ದಾರೆ.

ಸ್ಪೀಕರ್ ಕೈ ತಲುಪಿದ್ದ ವಾಚ್
ಡಾ. ಗಿರೀಶ್ ಚಂದ್ರ ಶರ್ಮಾ ಅವರು ನನಗೆ 2015ರ ಜುಲೈನಲ್ಲಿ ನನಗೆ ನೀಡಿದ ಊಬ್ಲೋ ಬಿಗ್ ಬ್ಯಾಂಗ್ 301-ಎಂ ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದೇನೆ' ಎಂದು ಅಫಿಡೆವಿಟ್ ಸಲ್ಲಿಸಿರುವ ಸಿದ್ದರಾಮಯ್ಯ ಅವರು, ವಾಚ್ ನ್ನು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿ ಇಂದಿಗೆ ಒಂದು ವರ್ಷ ನಾಲ್ಕು ತಿಂಗಳುಗಳು ಕಳೆದಿವೆ.

ಕುಮಾರಸ್ವಾಮಿ vs ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಕೈಯಲ್ಲಿ ಉಬ್ಲೋ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಇದೆ ಎಂದು ಮೊದಲು ಮಾತನಾಡಿದ್ದು ಕುಮಾರಸ್ವಾಮಿ. 'ಮುಖ್ಯಮಂತ್ರಿಗಳ ಬಳಿ ಇನ್ನೂ 7 ರಿಂದ 8 ದುಬಾರಿ ವಾಚ್ಗಳಿವೆ ಅವುಗಳ ಬಗ್ಗೆ ದಾಖಲೆ ಸಮೇತ ವಿವರಣೆ ನೀಡುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, 'ವಾಚ್ಗೆ 5 ಲಕ್ಷ, ಕನ್ನಡಕಕ್ಕೆ 50 ಸಾವಿರ ಕೊಟ್ರೆ ಸಾಕು ಅವುಗಳನ್ನು ಅವರಿಗೇ ಕೊಡುತ್ತೇನೆ' ಎಂದು ವ್ಯಂಗ್ಯವಾಡಿದ್ದರು.

ಅನುಪಮಾ ಬರೆದ ಪತ್ರ
ಉಬ್ಲೋ ಬಿಗ್ ಬ್ಯಾಂಗ್ 301 ಎಮ್ ಹಿಂದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಅನುಪಮಾ ಶೆಣೈ ಅವರು ಸ್ಪೀಕರ್ ಬಿ.ಎಸ್ ಕೋಳಿವಾಡ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ಮಿತ್ರ ದುಬೈ ನಿವಾಸಿ ಡಾ. ಗಿರೀಶ್ ಅವರಿಗೆ ಎರಡು ಬೃಹತ್ ಯೋಜನೆಗಳ ಅಭಿವೃದ್ಧಿ ಟೆಂಡರ್ ಸಿಕ್ಕಿದೆ. ಎಲ್ಲಾ ನಿಯಮಗಳನ್ನು ಗಾಳಿ ತೂರಲಾಗಿದೆ ಎಂದು ಆರೋಪಿಸಿದ್ದಾರೆ.

ಅನುಪಮಾ ಶೆಣೈ ಕೋರಿದ್ದಾರೆ.
ಅಸಲಿಗೆ ಉಬ್ಲೋ ವಾಚ್ ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಕೈ ಸೇರಿದೆಯೇ? ಎಂಬ ಮಾಹಿತಿಯೂ ಇಲ್ಲ. ಈ ಬಗ್ಗೆ ತನಿಖೆ ನಡೆಸಿ ಎಫ್ ಐ ಆರ್ ದಾಖಲಿಸಬೇಕು ಎಂದು ಅನುಪಮಾ ಶೆಣೈ ಕೋರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ಹೇಳಿಕೆ ನೀಡಿದ್ದರು. 'ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಬಹಿರಂಗಪಡಿಸಬೇಕು'. ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ತನಿಖೆ ನಡೆಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದೇನೆ ಎಂದಿದ್ದರು.












Click it and Unblock the Notifications