ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ: ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ಮೇ 28: ರಾಜಧಾನಿ ಬೆಂಗಳೂರಿನಲ್ಲಿ ನಿರ್ಭಯಾ ರೀತಿಯ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ನಗರದಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ, ""ಗ್ಯಾಂಗ್ ರೇಪ್ ಆಗಿರುವ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿರುವ ವ್ಯಕ್ತಿಗಳು ಯಾರು ಅಂತ ಆಗ ಸಂಶಯ ಇತ್ತು. ನಮ್ಮ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಿಣ್ ರಿಜಿಜು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು.''
ಈ ಪ್ರಕರಣದ ಬಗ್ಗೆ ನಮ್ಮ ಪೊಲೀಸರು ಮಾಹಿತಿ ಪಡೆದು ಟ್ರೇಸ್ ಮಾಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿ ಸೇರಿ ಕೆಲವರು ವಿಡಿಯೋದಲ್ಲಿದ್ದಾರೆ. ಇನ್ನೂ ಕೆಲವರು ಕೇರಳದಲ್ಲಿದ್ದಾರೆ ಅಂತ ಮಾಹಿತಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಯುವತಿಯನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು, ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರಲಾಗುತ್ತಿದೆ ಎಂದು ಹೇಳಿದರು.

ರಾಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ನಮ್ಮ ಬೆಂಗಳೂರು ಪೊಲೀಸರು ಪ್ರಕರಣ ಭೇದಿಸಿದ್ದು, ಅವರನ್ನು ಶ್ಲಾಘಿಸುತ್ತೇನೆ ಎಂದರು.
ಮೊದಲು ಈ ಅತ್ಯಾಚಾರ ಪ್ರಕರಣ ಎಲ್ಲಿ ನಡೆದಿದ್ದು, ಯಾವ ಜಾಗ ಅಂತ ಗೊತ್ತಿರಲಿಲ್ಲ. ನಂತರ ಪತ್ತೆ ಮಾಡಿದಾಗ ಬೆಂಗಳೂರು ಅಂತ ಗೊತ್ತಾಗಿದೆ. ಬಳಿಕ ರಾಮಮೂರ್ತಿನಗರದಲ್ಲಿ ಎಂದು ಗೊತ್ತಾಯಿತು, ಕಲವೇ ಗಂಟೆಗಳಲ್ಲಿ ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಾರಕಿಹೊಳಿ ಪ್ರಕರಣದಲ್ಲಿ ಹಸ್ತಕ್ಷೇಪವಿಲ್ಲ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರವಾಗಿ ಗೃಹ ಸಚಿವರಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆರೋಪ ವಿಚಾರವಾಗಿ, ಇವರು ಇಷ್ಟು ದಿನ ಬಿಟ್ಟು ಈಗ ಮಾತನಾಡಲು ಕಾರಣ ಇದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.
ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ದಾಖಲಾಗಿದೆ, ತನಿಖಾ ವರದಿ ಸಲ್ಲಿಸಲಾಗಿದೆ. ಮತ್ತೆ ಎರಡು ದಿನ ಬಿಟ್ಟು ಮತ್ತೆ ವರದಿ ಸಲ್ಲಿಸಲಾಗುತ್ತದೆ. ತನಿಖೆ ದಿಕ್ಕು ತಪ್ಪಿಸಲು ಈ ರೀತಿ ಹೇಳಲಾಗುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಸಚಿವ ಎಚ್.ವೈ ಮೇಟಿ ಪ್ರಕರಣದಲ್ಲಿ ತನಿಖೆ ನಡೆಸಿದ್ದರು, ಆದರೆ ಎಚ್.ವೈ ಮೇಟಿ ಮೇಲೆ ಎಫ್ಐಆರ್ ಆಗಿರಲಿಲ್ಲ. ಘಟನೆ ನಡೆದಾಗ ಯುವತಿಯಿಂದ ಆಗ ದೂರು ಕೊಡದಂತೆ ತಡೆದವರು ಯಾರು? ಎಂದು ಪ್ರಶ್ನಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಾರಕಿಹೊಳಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications