ಅಕ್ಬರುದ್ದೀನ್ ಓವೈಸಿ ಹತ್ಯೆಗೆ ಸ್ಕೆಚ್: ರೌಡಿಗಳ ಬಂಧನ
ಬೆಂಗಳೂರು.ಮೇ.19: ರಾಜಧಾನಿಯನ್ನು ನಡುಗಿಸುತ್ತಿದ್ದ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿ ಸೇರಿದಂತೆ ಆತನ ಮೂವರು ಸಹಚರರನ್ನು ಬೆಂಗಳೂರು ಹಾಗೂ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಕಳ್ಳತನ ನಡೆಸಿ ಜನರಲ್ಲಿ ಭಯ ಹುಟ್ಟಿಸಿದ್ದ ಕುಣಿಗಲ್ ಗಿರಿ ಆಂಧ್ರ ಪೊಲೀಸರ ಸಹಕಾರದೊಂದಿಗೆ ಸೆರೆ ಸಿಕ್ಕರೆ, ಆತನ ಮೂವರು ಸಹಚರರನ್ನು ಬೆಂಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಭೂಗತ ಲೋಕದಲ್ಲೇ ತನ್ನ ಹೆಸರು ಬೆಳೆಯಬೇಕು, ಎಂಬ ಉದ್ದೇಶದಿಂದ ಗಿರಿ ಹೆಚ್ಚು ಅಪರಾಧ ಕೃತ್ಯಗಳನ್ನು ಎಸಗಿ ಹೈದರಾಬಾದ್ನ ಪ್ರಭಾವಿ ರಾಜಕೀಯ ಮುಖಂಡನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪೊಲೀಸ್ ಆಯುಕ್ತ ಎಚ್. ಔರಾದ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಯುಕ್ತರು ಭದ್ರತೆಯ ದೃಷ್ಟಿಯಿಂದ ಹೆಸರನ್ನು ಬಹಿರಂಗ ಪಡಿಸದಿದ್ದರೂ, ಹೈದರಾಬಾದ್ನ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್(ಎಂಐಎಂ) ಶಾಸಕ ಅಕ್ಬರುದ್ದೀನ್ ಓವೈಸಿ ಹತ್ಯೆಗೆ ಕುಣಿಗಲ್ ಗಿರಿ ಸಂಚು ರೂಪಿಸಿದ್ದ ಶಂಕಿಸಲಾಗಿದೆ.
ಸಿಕ್ಕಿದ್ದು ಹೇಗೆ?
ಖಚಿತ ಮಾಹಿತಿಯನ್ನು ಪಡೆದ ಬೆಂಗಳೂರು ಪೊಲೀಸರ ತಂಡ ಆಧ್ರದ ಪೊಲೀಸರ ಸಹಾಯ ಪಡೆದು ಮೇ.18. ಭಾನುವಾರ ಬೆಳಗ್ಗಿನ ಜಾವ ಸುತ್ತುವರಿಯಿತು. ಪೊಲೀಸರು ಬಂಧಿಸ ಬೇಕು ಎನ್ನುವಷ್ಟರಲ್ಲಿ ಗಿರಿ ಬೈಕನ್ನು ಏರಿ ಪರಾರಿಯಾಗಲು ಹೋಗಿ ರಸ್ತೆ ವಿಭಾಜಕ್ಕೆ ಡಿಕ್ಕಿ ಹೊಡೆದ ತಲೆಗೆ ಪೆಟ್ಟು ಮಾಡಿಕೊಂಡು ಬಿದ್ದ. ಆತನನ್ನು ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬಂಧಿತ ಸಹಚರರು:
ಹಿಂದೂಪುರದಲ್ಲಿ ಸಿಕ್ಕಿಬಿದ್ದಿರುವ ಇನ್ನೂ ಮೂವರು ಸಹಚರರನ್ನು ನಗರಕ್ಕೆ ಭಾನುವಾರ ಕರೆತರಲಾಗಿದೆ.ರಾಮನಗರದ ಚಿಕ್ಕಕಲ್ಯಾ ಗ್ರಾಮದ ನಿವಾಸಿ ಗೋವಿಂದ, ತುಮಕೂರಿನ ಅನೂಪನಹಳ್ಳಿಯ ಜಗ್ಗ, ಕುಣಿಗಲ್ನ ಕೆ. ಹೊನ್ನಮಾಚನಹಳ್ಳಿಯ ವಾಸು ಎಂಬುವರು ಬಂಧಿತರು. ಅವರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಕುಣಿಗಲ್ ಗಿರಿ ಗುಣಮುಖನಾದ ಬಳಿಕ ನಗರಕ್ಕೆ ಕರೆ ತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ತಂಡ 2008ರಿಂದ 2014ರ ವರೆಗೆ ರಾಜ್ಯಾದ್ಯಂತ 88ಕ್ಕೂ ಹೆಚ್ಚು ದರೋಡೆ, ಕಳ್ಳತನ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ರಾತ್ರಿ 8ರಿಂದ 11 ಗಂಟೆ ಅವಧಿಯಲ್ಲಿ ಕೃತ್ಯ ಎಸಗುತ್ತಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಚಂದ್ರಾಲೇಔಟ್, ಪೊಲೀಸ್ ಠಾಣೆ ವ್ಯಾಪ್ತಿ, ರಾಮನಗರ ಜಿಲ್ಲೆಯ ಕೆಂಗೇರಿ ಸೇರಿದಂತೆ ತುಮಕೂರು ಮತ್ತು ಕೋಲಾರದಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.












Click it and Unblock the Notifications