ಬೆಂಗಳೂರು:ಅಂಗನವಾಡಿ-SSLC ವರೆಗೆ ಹೈಟೆಕ್ ಶಿಕ್ಷಣ: ಅಶ್ವಥ್ ನಾರಾಯಣ್
ಬೆಂಗಳೂರು, ನವೆಂಬರ್ 28: ಬೆಂಗಳೂರು ಮಲ್ಲೇಶ್ವರಂನಲ್ಲಿ ತಲೆ ಎತ್ತಲಿರುವ ನೂತನ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳು ಇರಲಿವೆ. ಇಲ್ಲಿ ಅಂಗನವಾಡಿಯಿಂದ 10ನೇ ತರಗತಿವರೆಗೂ ಹೈಟೆಕ್ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
ಬೆಂಗಳೂರು ಮಲ್ಲೇಶ್ವರಂನಲ್ಲಿನ ಬೆಂಗಳೂರು ನಗರ ವಿಶ್ವವಿದ್ಯಾಲಯ ಸೇರಿದ ಮಹಿಳಾ ಬಹುಶಿಸ್ತೀಯ ಘಟಕ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಇದೇ ವೇಳೆ ಪದವಿ ಕಾಲೇಜಿನ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗಗಳ ನೂತನ ಪ್ರಯೋಗಾಲಯ ಉದ್ಘಾಟಿಸಿದರು. ಅದಲ್ಲದೇ ಇಲ್ಲಿನ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ 11.75 ಕೋಟಿ ರೂ. ವೆಚ್ಚದ ನಾಲ್ಕು ಮಹಡಿಗಳ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ
ಶಾಲಾ ಆವರಣದಲ್ಲಿನ ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರ ಹಂತದವರೆಗೂ ಶಿಕ್ಷಣ ಲಭ್ಯವಿದೆ. ಮಹಿಳಾ ಘಟಕ ಕಾಲೇಜಿನಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿನಿಯರು ಇದ್ದರು. ಈಗ ಈ ಸಂಖ್ಯೆಯು 300ಕ್ಕೂ ಹೆಚ್ಚಾಗಿದೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟವು ಖಾಸಗಿ ಕಾಲೇಜುಗಳಿಗಿಂತ ಉತ್ತಮವಾಗಿದೆ ಎಂದರು.
25 ಅಂಗನವಾಡಿ ಆಧುನಿಕರಣ
ಮಲ್ಲೇಶ್ವರ ಕ್ಷೇತ್ರವು ಶಿಕ್ಷಣಕ್ಕೆ ಹೆಸರಾದ ಕ್ಷೇತ್ರವಾಗಿದೆ. ಇದಕ್ಕೆ ತಕ್ಕಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಅಂಗನವಾಡಿಗಳನ್ನು ಆಧುನೀಕರಣಗೊಳಿಸಲಾಗಿದೆ. ಜೊತೆಗೆ 13 ಪ್ರಾಥಮಿಕ ಶಾಲೆಗಳನ್ನು ಉನ್ನತ ದರ್ಜೆಗೆ ಅಭಿವೃದ್ಧಿಪಡಿಸಲಾಗಿದೆ. ಕಲಿಕೆ ಎಂಬುದು ಮೊದಲಿಗೆ ನಮ್ಮೊಳಗೆ ಆರಂಭ ಆರಂಭವಾಗಬೇಕು. ಹೀಗಾಗಿ, ವಿದ್ಯಾರ್ಥಿಗಳು ಸ್ವಯಂ ಕಲಿಕೆಗೆ ಒತ್ತು ಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಆಧುನಿಕ ಕಾಲಘಟ್ಟದಲ್ಲಿ ಕಲಿಕೆಗೆ ಬಹಳ ಮಹತ್ವವಿದೆ. ಮೊದಲಿಗೆ ಸ್ವಯಂ ಕಲಿಕೆಗೆ ಒತ್ತುಕೊಟ್ಟು ನಂತರ ಸಹಪಾಠಿಗಳೊಂದಿಗೆ ಕಲಿಕೆ ಹಾಗೂ ಗುರುಗಳ ಮುಖೇನ ಕಲಿಕೆಗೆ ಆದ್ಯತೆ ಕೊಡಬೇಕು. ನಾಡುನುಡಿಯ ವಿಷಯ ಬಂದಾಗ ಗೋಕಾಕ್ ಚಳುವಳಿ ಎಂದೆಂದೂ ಪ್ರೇರಣೆಯಾಗಬೇಕು ಎಂದು ರಾಜ್ಯೋತ್ಸವ ಕುರಿತು ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಲಿಂಗರಾಜ ಗಾಂಧಿ, ಪ್ರಾಂಶುಪಾಲರಾದ ಜ್ಯೋತಿ ವೆಂಕಟೇಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರವಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಗೋಕಾಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.