ಪೊಲೀಸರ ವರ್ಗಾವಣೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು, ಜನವರಿ 24: ಪೊಲೀಸರ ವರ್ಗಾವಣೆ ವಿಚಾರವಾಗಿ ರಾಜ್ಯ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪೊಲೀಸರ ವರ್ಗಾವಣೆಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಅವರು ಪೊಲೀಸರ ವರ್ಗಾವಣೆ ಸಂಬಂಧ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅದೇ ಪ್ರಕರಣಕ್ಕೆ ಸಲ್ಲಿಸಿದ್ದ ಅಫಿಡವಿಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.
ವಿ.ಶಶಿಧರ್ ಅವರು, ಪೊಲೀಸರ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ ಮಾಡುತ್ತಿದ್ದಾರೆ ಅವರಿಗೆ ಸೂಕ್ತ ಶಿಕ್ಷೆ ನೀಡಿ ಎಂದು ರಿಟ್ ಅರ್ಜಿ ಸಲ್ಲಿಸಿದ್ದರು.

ಅಕ್ಟೋಬರ್ 25 ರಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದ ಹೈಕೋರ್ಟ್, 'ವರ್ಗಾವಣೆಗಳಲ್ಲಿ ಜನಪ್ರತಿನಿಧಿಗಳ ಶಿಫಾರಸ್ಸನ್ನು ಪರಿಗಣಿಸುವುದಿಲ್ಲ, ಪಾರದರ್ಶಕವಾಗಿ ವರ್ಗಾವಣೆ ಮಾಡುತ್ತೀರೆಂದು ಭರವಸೆ ನೀಡಿ' ಎಂದು ಕೇಳಿತ್ತು.
ಅದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಅಫಿಡವಿಟ್ ಅನ್ನು ಸಲ್ಲಿಸಿ, 'ಪೊಲೀಸರ ವರ್ಗಾವಣೆಯಲ್ಲಿ ಶಿಫಾರಸ್ಸನ್ನು ಪರಿಗಣಿಸುವುದಿಲ್ಲ, ಪ್ರಕಾಶ್ ಸಿಂಗ್ ಮತ್ತು ಇತರ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪುಗಳನ್ವಯ ವರ್ಗಾವಣೆ ಮಾಡುತ್ತೇವೆ' ಎಂದು ಹೇಳಿತ್ತು.
ಆದರೆ ಈ ಉತ್ತರ ಹೈಕೋರ್ಟ್ ಗೆ ತೃಪ್ತಿ ನೀಡಿಲ್ಲ, 'ಉತ್ತರದಲ್ಲಿ ಜನಪ್ರತಿನಿಧಿಗಳ ಶಿಫಾರಸ್ಸು ಎಂದು ಏಕೆ ಉಲ್ಲೇಖಿಸಿಲ್ಲ? ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.
ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ಸರ್ಕಾರವು ಕಾಲಾವಕಾಶ ಕೇಳಿರುವ ಕಾರಣ, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 13 ಕ್ಕೆ ಮುಂದೂಡಲಾಗಿದೆ. ಅಂದು ಇಲಾಖೆಯು ಮತ್ತೊಂದು ಅಫಿಡವಿಟ್ ಅನ್ನು ಸಲ್ಲಿಸಲಿದೆ.
ಡಿವೈಎಸ್ಪಿ ಹಾಗೂ ಅದಕ್ಕಿಂತ ಕೆಳಗಿನ ಶ್ರೇಣಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ ಇತ್ಯಾದಿ ವಿಚಾರಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಪೊಲೀಸ್ ಸಿಬ್ಬಂದಿ ಮಂಡಳಿ. ಈ ಮಂಡಳಿಯ ಅಧ್ಯಕ್ಷರು ಪೊಲೀಸ್ ಮಹಾನಿರ್ದೇಶಕರೇ ಆಗಿರುತ್ತಾರೆ.












Click it and Unblock the Notifications